
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಟೂರ್ನಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು, ಪ್ರಥಮ ಪಂದ್ಯ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಾರ್ಚ್ 26ರಂದು ನಡೆಯಲಿದೆ. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಎಲ್ಲಾ 70 ಪಂದ್ಯಗಳು ಮುಂಬೈ ಮತ್ತು ಪುಣೆ ನಗರಗಳ ಕ್ರಿಕೆಟ್ ಕ್ರೀಡಾಂಗಣಗಳಲ್ಲಿಯೇ ನಡೆಯಲಿದ್ದು, ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮಾರ್ಚ್ 27ರಂದು ಮುಂಬೈನ ಬ್ರಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತನ್ನ ಜರ್ನಿಯನ್ನು ಆರಂಭಿಸಲಿದೆ.
ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಲ ಸಿಬ್ಬಂದಿ ವರ್ಗ ಮತ್ತು ಆಟಗಾರರು ಈಗಾಗಲೇ ಮುಂಬೈ ತಲುಪಿದ್ದು, ಮೂರು ದಿನಗಳ ಕ್ವಾರಂಟೈನ್ ನಿಯಮವನ್ನು ಅನುಸರಿಸುತ್ತಿದ್ದಾರೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಮತ್ತು ಸಹಾಯಕ ಕೋಚ್ ಜೇಮ್ಸ್ ಹೋಪ್ಸ್ ಮಾರ್ಚ್ 15ರಂದೇ ಮುಂಬೈನ ಕೊಲಬಾದಲ್ಲಿರುವ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್ ತಲುಪಿದ್ದು, ಈ ಸಂದರ್ಭದಲ್ಲಿ ಪಾರ್ಕ್ ಮಾಡಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬಸ್ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಿ ಉದ್ಧಟತನ ತೋರಿದ್ದಾರೆ. ಸುಮಾರು ಐದಾರು ಅಪರಿಚಿತ ವ್ಯಕ್ತಿಗಳು ಈ ಕೃತ್ಯವನ್ನು ಎಸಗಿದ್ದು, ಈಗಾಗಲೇ ಅವರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಎಪ್ಐಆರ್ನ್ನೂ ಕೂಡ ಹಾಕಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಬಿಸಿಸಿಐ ಸುರಕ್ಷತೆಯಿಂದ ಈ ಬಾರಿಯ ಐಪಿಎಲ್ ಟೂರ್ನಿಯನ್ನು ನಡೆಸುವ ಉದ್ದೇಶವನ್ನು ಹೊಂದಿದ್ದು, ಟೂರ್ನಿ ಆರಂಭವಾಗುವುದಕ್ಕೂ ಮುನ್ನವೇ ಈ ರೀತಿಯ ಘಟನೆ ಜರುಗಿರುವುದು ಸದ್ಯ ಕೊಂಚ ಆತಂಕ ಮೂಡಿಸಿದೆ. ಹಾಗೂ ಬಸ್ ನಿಲುಗಡೆಯಾಗಿದ್ದ ಸಮಯದಲ್ಲಿ ಕಲ್ಲು ತೂರಾಟ ನಡೆಸಿರುವುದರಿಂದ ಯಾರಿಗೂ ಸಹ ತೊಂದರೆಯಾಗಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ಸ್ಕ್ವಾಡ್: ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ರಿಷಭ್ ಪಂತ್ (ನಾಯಕ), ಅಕ್ಷರ್ ಪಟೇಲ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶಾರ್ದೂಲ್ ಠಾಕೂರ್, ಮುಸ್ತಾಫಿಜುರ್ ರೆಹಮಾನ್, ಕುಲದೀಪ್ ಯಾದವ್, ಅಶ್ವಿನ್ ಹೆಬ್ಬಾರ್, ಸರ್ಫರಾಜ್ ಖಾನ್, ಕಮಲೇಶ್ ನಾಗರಕೋಟಿ, ಕೆಎಸ್ ಭರತ್, ಮನ್ದೀಪ್ ಸಿಂಗ್, ಖಲೀಲ್ ಸಕಾರಿಯಾ , ಲಲಿತ್ ಯಾದವ್, ರಿಪಾಲ್ ಪಟೇಲ್, ಯಶ್ ಧುಲ್, ರೋವ್ಮನ್ ಪೊವೆಲ್, ಪ್ರವೀಣ್ ದುಬೆ, ಲುಂಗಿ ಎನ್ಗಿಡಿ, ಟಿಮ್ ಸೀಫರ್ಟ್, ವಿಕಿ ಓಸ್ಟ್ವಾಲ್