
ಸುಸೂತ್ರವಾಗಿ ನಡೆಯುತ್ತಿದ್ದ ಐಪಿಎಲ್ 15ನೇ ಆವೃತ್ತಿಗೆ ಕೊರೊನಾವೈರಸ್ ಆಘಾತ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲಿ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಮಿಚೆಲ್ ಮಾರ್ಶ್ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೊರೊನಾವೈರಸ್ ದೃಢಪಟ್ಟಿದೆ. ಮಿಚೆಲ್ ಮಾರ್ಶ್ ಆಸ್ಪತ್ರೆಗೆ ದಾಖಲಾಗಿದ್ದು ತಂಡದ ಉಳಿದ ಎಲ್ಲಾ ಆಟಗಾರರ ಕೊರೊನಾಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಈ ಮಧ್ಯೆ ಕೊರೊನಾವೈರಸ್ನ ಕಾರಣದಿಂದಾಗಿ ಬಿಸಿಸಿಐ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯವನ್ನು ಸ್ಥಳಾಂತರ ಮಾಡಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಬುಧವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೊಸಿಯೇಶನ್ ಸ್ಟೇಡಿಯಂನಲ್ಲಿ ನಡೆಯಬೇಕಾಗಿತ್ತು. ಈ ಪಂದ್ಯವನ್ನು ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿದ್ದು ಮಂಗಳವಾರ ಈ ಬಗ್ಗೆ ಅಧಿಕರತ ಪ್ರಕಟಣೆಯನ್ನು ಹೊರಡಿಸಲಾಗಿದೆ. ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಸಿಸಿಐ "ಮತ್ತಷ್ಟು ಹೆಚ್ಚಿನ ಪ್ರಕರಣಗಳು ಬಯೋಬಬಲ್ನ ಒಳಗೆ ಕಾಣಿಸಿಕೊಳ್ಳುವುದನ್ನು ತಪ್ಪಿಸಲು ಈ ನಿರ್ಧಾರ ಮಾಡಲಾಗಿದೆ" ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಬಿಸಿಸಿಐ ಕಳುಹಿಸಿರುವ ಮೇಲ್ನಲ್ಲಿ ಕೊರೊನಾವೈರಸ್ ದೃಢಪಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಐವರು ಸದಸ್ಯರನ್ನು ಪಟ್ಟಿಮಾಡಿದೆ. ಪಿಸಿಯೋತೆರಪಿಸ್ಟ್ ಫ್ರಾಟ್ರಿಕ್ ಫರ್ಹಾತ್, ಸ್ಪೋರ್ಟ್ಸ್ ಮಸಾಜ್ ಥೆರಪಿಸ್ಟ್ ಚೇತನ್ ಕುಮಾರ್, ಆಟಗಾರ ಮಿಚೆಲ್ ಮಾರ್ಶ್, ಟೀಮ್ ಡಾಕ್ಟರ್ ಅಭಿಜಿತ್ ಸಾಳ್ವಿ, ಸೋಶಿಯಲ್ ಮೀಡಿಯಾ ಕಂಟೆಂಟ್ ಟೀಮ್ ಮೆಂಬರ್ ಆಕಾಶ್ ಮಾನೆ ಈವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಳಯದಲ್ಲಿ ಕೊರೊನಾವೈರಸ್ಗೆ ತುತ್ತಾಗಿದವಾರಾಗಿದ್ದಾರೆ.
ಮಿಚೆಲ್ ಮಾರ್ಶ್ ಹೊರತುಪಡಿಸಿ ತಂಡದ ಇತರ ಎಲ್ಲಾ ಆಟಗಾರರ ಕೊರೊನಾವೈರಸ್ ಪರೀಕ್ಷೆ ನೆಗೆಟಿವ್ ಬಂದಿದ್ದು ಸಮಾಧಾನ ತಂದಿದೆ. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಬದಲಾದ ತಾಣದಲ್ಲಿ ಬುಧವಾರ ಈ ಪಂದ್ಯ ಆಯೋಜನೆಯಾಗಲಿದೆ.
ಮಿಚೆಲ್ ಮಾರ್ಶ್ ಗಾಯದ ಕಾರಣದಿಂದಾಗಿ ತಡವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಡುವ ಬಳಗಕ್ಕೆ ಲಭ್ಯವಾಗಿದ್ದರು. ಆರ್ಸಿಬಿ ವಿರುದ್ಧಧ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮಿಚೆಲ್ ಮಾರ್ಶ್ ಈ ಬಾರಿಯ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಪಂದ್ಯದಲ್ಲಿ ಮಾರ್ಶ್ ಉತ್ತಮ ಲಯದಲ್ಲಿ ಇರಲಿಲ್ಲ. ರನ್ಗಳಿಸಲು ಮಾರ್ಶ್ ಪರದಾಡುತ್ತಿರುವುವು ಸ್ಪಷ್ಟವಾಗಿತ್ತು. 24 ಎಸೆತಗಳನ್ನು ಎದುರಿಸಿದ್ದ ಮಾರ್ಶ್ ಈ ಪಂದ್ಯದಲ್ಲಿ 14 ರನ್ಗಳಿಸಲಷ್ಟೇ ಶಕ್ತವಾಗಿದ್ದರು. ಮಾರ್ಶ್ ಅವರ ಈ ಪ್ರದರ್ಶನ ಆರ್ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೂ ಕಾರಣವಾಗಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ಸಂಪೂರ್ಣ ತಂಡ: ರಿಷಬ್ ಪಂತ್ (ನಾಯಕ & ವಿಕೆಟ್ ಕೀಪರ್), ಪೃಥ್ವಿ ಶಾ, ಟಿಮ್ ಸೀಫರ್ಟ್, ಮನ್ದೀಪ್ ಸಿಂಗ್, ಲಲಿತ್ ಯಾದವ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಅಶ್ವಿನ್ ಹೆಬ್ಬಾರ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಶ್ರೀಕರ್, ಭರತ್ ಸರ್ಫರಾಜ್ ಖಾನ್, ಲುಂಗಿ ಎನ್ಗಿಡಿ, ಪ್ರವೀಣ್ ದುಬೆ, ಅನ್ರಿಚ್ ನಾರ್ಟ್ಜೆ, ಕಮಲೇಶ್ ನಾಗರಕೋಟಿ, ಚೇತನ್ ಸಕರಿಯಾ, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಒಸ್ತ್ವಾಲ್