
ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈ ಪ್ರದರ್ಶನದೊಂದಿಗೆ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಫೈನಲ್ ಹಂತಕ್ಕೆ ಪ್ರವೇಶ ಪಡೆದ ಮೊದಲ ತಂಡವಾಗಿದೆ. ಈ ಸಾಧನೆಯ ಬಳಿಕ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ. ತನ್ನ ವೃತ್ತಿ ಜೀವನದ ಮೇಲೆ ಪ್ರಭಾವ ಬೀರಿದ ಆಟಗಾರನನ್ನು ಹಾರ್ದಿಕ್ ಪಾಂಡ್ಯ ಹೆಸರಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಹೀಗೆ ಹೇಳಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಸಿಎಸ್ಕೆ ನಾಯಕ ಎಂಎಸ್ ಧೋನಿ ಬಗ್ಗೆ. ತನ್ನ ಬೆಳವಣಿಗೆಯಲ್ಲಿ ತನ್ನ ಆತ್ಮೀಯ ಸೋದರ ಹಾಗೂ ಗೆಳೆಯ ಎಂಎಸ್ ಧೋನಿ ಪಾತ್ರ ಅತ್ಯಂತ ದೊಡ್ಡದಿದೆ ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.
ಈ ಬಾರಿಯ ಐಪಿಎಲ್ ಟೂರ್ನಿಗೂ ಮುನ್ನ ಹಾರ್ದಿಕ್ ಪಾಂಡ್ಯ ಯಾವುದೇ ತಂಡವನ್ನು ಕೂಡ ಮುನ್ನಡೆಸಿದ ಅನುಭವವನ್ನು ಹೊಂದಿರಲಿಲ್ಲ. ಈ ಬಾರಿಯ ಟೂರ್ನಿಗೆ ಹೊಸದಾಗಿ ಸೇರ್ಪಡೆಯಾದ ಗುಜರಾತ್ ಟೈಟನ್ಸ್ ತಂಡಕ್ಕೆ ಡ್ರಾಫ್ಟ್ ಆಟಗಾರನಾಗಿ ಸೇರ್ಪಡೆಯಾದ ಹಾರ್ದಿಕ್ ಪಾಂಡ್ಯಗೆ ನಾಯಕತ್ವದ ಹೊಣೆಗಾರಿಕೆ ನೀಡಲು ನಿರ್ಧರಿಸಲಾಯಿತು. ಮ್ಯಾನೇಜ್ಮೆಂಟ್ನ ಈ ನಿರ್ಧಾರದ ಬಗ್ಗೆ ಕೆಲವರಿಂದ ಟೀಕೆಗಳು ಕೂಡ ಬಂದಿತ್ತು. ಅನುಭವವೇ ಇಲ್ಲದ ಹಾರ್ದಿಕ್ ಪಾಂಡ್ಯ ಈ ಹೊಣೆಗಾರಿಯಿಂದಾಗಿ ಒತ್ತಡಕ್ಕೆ ಸಿಲುಕಬಹುದು ಎಂಬ ಚರ್ಚೆಗಳು ಕೂಡ ನಡೆಯಿತು.
ಆದರೆ ಹಾರ್ದಿಕ್ ಪಾಂಡ್ಯ ಇವೆಲ್ಲವನ್ನು ಕೂಡ ಸುಳ್ಳಾಗಿಸುವಂತೆ ನಾಯಕತ್ವವನ್ನು ವಹಿಸಿಕೊಂಡಿದ್ದು ಟೂರ್ನಿಯ ಅತ್ಯಂತ ಯಶಸ್ವಿ ತಂಡವಾಗುವಂತೆ ಮಾಡಿದ್ದಾರೆ. ಮಾತ್ರವಲ್ಲದೆ ಟ್ರೋಫಿ ಗೆಲ್ಲಲು ಇನ್ನು ಕೇವಲ ಒಂದು ಗೆಲುವಿನ ಅಂತರದಲ್ಲಿ ಮಾತ್ರವೇ ಇದ್ದಾರೆ.
ಇನ್ನು ಕ್ವಾಲಿಫೈಯರ್ ಪಂದ್ಯವನ್ನು ಗೆದ್ದ ಬಳಿಕ ವರ್ಚುವಲ್ ಮಾಧ್ಉಮಗೋಷ್ಠೀಯಲ್ಲಿ ಮಾತನಾಡಿದ ಪಾಂಡ್ಯ ತನ್ನ ಬೆಳವಣಿಗೆಯ ಬಗ್ಗೆ ಮಾತನಾಡಿದ್ದಾರೆ. ಆಟಗಾರನಾಗಿ ಹಾಗೂ ನಾಯಕನಾಗಿ ಬೆಳೆದ ರೀತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಪಾಂಡ್ಯ ಯಾವುದೇ ಯೋಚಿಸದೆ ಎಂಎಸ್ ಧೋನಿ ತನ್ನ ಬೆಳವಣಿಗೆಯಲ್ಲಿ ಕಾರಣ ಎಂದಿದ್ದಾರೆ. "ತನ್ನ ಸೋದರ ಹಾಗೂ ಆತ್ಮೀಯ ಸ್ನೇಹಿತ" ಎಂದು ಧೋನಿಯನ್ನು ಪಾಂಡ್ಯ ಉಲ್ಲೇಖಿಸಿದ್ದಾರೆ.
"ಮಾಹಿ ಭಾಯಿ ನನ್ನ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಅವರು ನನಗೆ ನನ್ನ ಸೋದರ, ಸ್ನೇಹಿತ ಹಾಗೂ ಕುಟುಂಬದ ಸದಸ್ಯನಿದ್ದಂತೆ. ಅವರಿಂದ ನಾನು ಸಾಕಷ್ಟು ಒಳ್ಳೆಯ ಸಂಗತಿಗಳನ್ನು ಅರಿತುಕೊಂಡಿದ್ದೇನೆ. ವಯಕ್ತಿಕವಾಗಿ ನಾನು ಬಲಿಷ್ಠವಾಗಲು ನಾನು ಬಯಸುತ್ತೇನೆ. ಹಾಗಾಗಿ ನಾನು ನನ್ನ ಬಗ್ಗೆ ಹೆಮ್ಮೆ ಪಡುತ್ತಿದ್ದು ಎಲ್ಲಾ ವಿಭಾಗಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆ" ಎಂದಿದ್ದಾರೆ.