
ಸದ್ಯ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ ಕಳಪೆ ಪ್ರದರ್ಶನ ನೀಡಿ ಮಂಕಾಗಿದ್ದಾರೆ. ಇನ್ನು ಟೂರ್ನಿ ಆರಂಭಕ್ಕೆ ಕೆಲ ದಿನಗಳು ಬಾಕಿ ಇರುವಾಗ ಎಂಎಸ್ ಧೋನಿ ನಾಯಕತ್ವವನ್ನು ಹಸ್ತಾಂತರಿಸಿದರು ಹಾಗೂ ರವೀಂದ್ರ ಜಡೇಜಾ ನಾಯಕತ್ವವನ್ನು ಸ್ವೀಕರಿಸಿ ಕಳೆದ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬೇಕಾದ ಬೃಹತ್ ಜವಾಬ್ದಾರಿಯನ್ನು ಹೊತ್ತುಕೊಂಡರು. ಆದರೆ, ನಾಯಕನಾಗಿ ಆಯ್ಕೆಯಾದ ನಂತರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ವಿಫಲರಾದ ರವೀಂದ್ರ ಜಡೇಜಾ ಓರ್ವ ಆಟಗಾರನಾಗಿಯೂ ಕೂಡ ವಿಫಲರಾದರು.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 8 ಪಂದ್ಯಗಳಲ್ಲಿ ರವೀಂದ್ರ ಜಡೇಜಾ ನಾಯಕತ್ವದಡಿಯಲ್ಲಿ ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ ಕೇವಲ 2 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದ್ದು ಉಳಿದ 6 ಪಂದ್ಯಗಳಲ್ಲಿ ಸೋತು ಟೂರ್ನಿಯ ಮಧ್ಯಂತರದಲ್ಲಿಯೇ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಬಹುತೇಕ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಎಚ್ಚೆತ್ತ ರವೀಂದ್ರ ಜಡೇಜಾ ನಾಯಕತ್ವವನ್ನು ಪುನಃ ಎಂಎಸ್ ಧೋನಿ ತೆಕ್ಕೆಗೆ ಹಾಕಿದರು. ಇನ್ನು ತನ್ನ ವೈಯಕ್ತಿಕ ಪ್ರದರ್ಶನದತ್ತ ಹೆಚ್ಚು ಗಮನಹರಿಸುವ ಕಾರಣದಿಂದಾಗಿ ಜಡೇಜಾ ನಾಯಕತ್ವವನ್ನು ತ್ಯಜಿಸಿದ್ದಾರೆ ಎಂಬ ಹೇಳಿಕೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ಕೂಡ ಕೊಟ್ಟಿತ್ತು.
ಆದರೆ, ನಾಯಕತ್ವ ತ್ಯಜಿಸಿದ ನಂತರವೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ರವೀಂದ್ರ ಜಡೇಜಾ ನಿನ್ನೆ ( ಮೇ 5 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿಯೂ ತಂಡ ಚೇಸ್ ಮಾಡುವಾಗ ಅಬ್ಬರಿಸದೇ ವಿಫಲರಾಗಿದ್ದಾರೆ. ಹೌದು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 174 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿ 13 ರನ್ಗಳ ಸೋಲನ್ನು ಅನುಭವಿಸಿತು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ 35 ಎಸೆತಗಳಿಗೆ 61 ರನ್ ಬೇಕಿದ್ದಾಗ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರವೀಂದ್ರ ಜಡೇಜಾ 5 ಎಸೆತಗಳಿಗೆ ಕೇವಲ 3 ರನ್ ಕಲೆಹಾಕಿ ಹರ್ಷಲ್ ಪಟೇಲ್ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.

ಈ ಹಿಂದೆ ಅಂತಿಮ ಓವರ್ಗಳಲ್ಲಿ ಹಲವಾರು ಬಾರಿ ಅಬ್ಬರಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದ ರವೀಂದ್ರ ಜಡೇಜಾ ಈ ಬಾರಿ ಈ ರೀತಿ ವಿಫಲರಾಗಿರುವುದರ ಕುರಿತು ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಮಾತನಾಡಿದ್ದು, ರವೀಂದ್ರ ಜಡೇಜಾ ಕಳಪೆ ಪ್ರದರ್ಶನದ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಟಿ ಟ್ವೆಂಟಿ ಕ್ರಿಕೆಟ್ ಆಟಗಾರರಿಗೆ ಕಠಿಣವಾಗಿರಬಹುದು, ಐದನೇ ಅಥವಾ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟಿಂಗ್ ಮಾಡುವ ಆಟಗಾರನಿಗೆ ಪಿಚ್ಗೆ ಹೊಂದಿಕೊಳ್ಳಲು ಹೆಚ್ಚಿನ ಸಮಯವಿರುವುದಿಲ್ಲ, ಹೀಗಾಗಿ ನಾವು ಸದ್ಯಕ್ಕೆ ಯಾವ ಕ್ರಮಾಂಕ ಉತ್ತಮ ಎಂದು ನೋಡುತ್ತೇವೆಯೇ ಹೊರತು ಜಡೇಜಾ ಕಳಪೆ ಪ್ರದರ್ಶನದ ಕುರಿತು ಯಾವುದೇ ಆತಂಕವಿಲ್ಲ ಎಂದಿದ್ದಾರೆ.
ಟೂರ್ನಿಯಲ್ಲಿ ರವೀಂದ್ರ ಜಡೇಜಾ ಅಂಕಿಅಂಶ: ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತೀರಾ ಕಳಪೆ ಫಾರ್ಮ್ನಲ್ಲಿರುವ ರವೀಂದ್ರ ಜಡೇಜಾ ಇಲ್ಲಿಯವರೆಗೂ ಒಟ್ಟು 10 ಪಂದ್ಯಗಳನ್ನಾಡಿದ್ದು ಕೇವಲ 116 ರನ್ ಗಳಿಸಿದ್ದಾರೆ ಹಾಗೂ ಅಜೇಯ 26 ರನ್ ಜಡೇಜಾ ಟೂರ್ನಿಯಲ್ಲಿ ಗಳಿಸಿರುವ ಗರಿಷ್ಟ ರನ್ ಆಗಿದೆ. ಇನ್ನು 10 ಪಂದ್ಯಗಳ ಪೈಕಿ ಕೇವಲ 5 ವಿಕೆಟ್ ಪಡೆಯುವಲ್ಲಿ ಮಾತ್ರ ಶಕ್ತರಾಗಿರುವ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿಯೂ ವಿಫಲರಾಗಿದ್ದಾರೆ.