ಐಪಿಎಲ್ನಲ್ಲಿ ಭಾಗವಹಿಸಲಿರುವ ಈ ಮೂವರಲ್ಲೊಬ್ಬ ರೋಹಿತ್ ನಂತರ ಭಾರತದ ನಾಯಕ ಎಂದ ಶಾಸ್ತ್ರಿ!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಈ ವಾರಾಂತ್ಯದಲ್ಲಿ ಆರಂಭವಾಗುತ್ತಿದ್ದು, ಟೂರ್ನಿಯ ಪ್ರಥಮ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮಾರ್ಚ್ 26ರಂದು ನಡೆಯಲಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಜೈಂಟ್ಸ್ ನೂತನ ತಂಡಗಳಾಗಿ ಕಣಕ್ಕಿಳಿಯುತ್ತಿದ್ದು ಒಟ್ಟು ಹತ್ತು ತಂಡಗಳ ನಡುವೆ ಟ್ರೋಫಿಗಾಗಿ ಸೆಣಸಾಟ ನಡೆಯಲಿದೆ. ಇನ್ನು ಟೂರ್ನಿ ಸಮೀಪಿಸುತ್ತಿದ್ದಂತೆ ಟೂರ್ನಿಯ ಕುರಿತಾಗಿ ಚರ್ಚೆಗಳು ಹೆಚ್ಚಾಗುತ್ತಿದ್ದು, ಈ ಬಾರಿ ಯಾವ ಆಟಗಾರರು ಮಿಂಚಲಿದ್ದಾರೆ ಹಾಗೂ ಯಾವ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂಬುದರ ಕುರಿತು ಹಲವಾರು ಕ್ರಿಕೆಟ್ ಪಂಡಿತರು ಹಾಗೂ ಮಾಜಿ ಕ್ರಿಕೆಟಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಮಿಂಚುವ ದೇಸಿ ಪ್ರತಿಭೆಗಳಿಗೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುವ ಅವಕಾಶ ಸಿಕ್ಕಿರುವ ಸಾಕಷ್ಟು ಉದಾಹರಣೆಗಳಿದ್ದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಕೂಡ ಆ ರೀತಿಯ ಪ್ರತಿಭಾವಂತ ಆಟಗಾರರು ಬೆಳಕಿಗೆ ಬರುವುದು ಖಚಿತ.
ಇನ್ನು ಭಾರತ ಅಂತರರಾಷ್ಟ್ರೀಯ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ನಂತರ ಸದ್ಯ ರೋಹಿತ್ ಶರ್ಮಾ ಭಾರತ ತಂಡದ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾಗಿದ್ದು, ರೋಹಿತ್ ಶರ್ಮಾ ನಂತರ ಈ ಬಾರಿಯ ಐಪಿಎಲ್ನಲ್ಲಿ ಕಣಕ್ಕಿಳಿಯಲಿರುವ ಈ ಮೂವರು ಆಟಗಾರರಲ್ಲೊಬ್ಬರು ಟೀಮ್ ಇಂಡಿಯಾ ನಾಯಕನಾಗಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ರವಿಶಾಸ್ತ್ರಿ ಊಹಿಸಿದ್ದಾರೆ. ಈ ಕುರಿತಾದ ವಿವರ ಈ ಕೆಳಕಂಡಂತಿದೆ.

ಮುಂದಿನ ನಾಯಕನಿಗಾಗಿ ಟೀಮ್ ಇಂಡಿಯಾ ಹುಡುಕಲಿದೆ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತಾಗಿ ಮಾತನಾಡಿರುವ ರವಿಶಾಸ್ತ್ರಿ ವಿರಾಟ್ ಕೊಹ್ಲಿ ಇನ್ನುಮುಂದೆ ನಾಯಕನಲ್ಲ, ಸದ್ಯ ನಾಯಕನಾಗಿರುವ ರೋಹಿತ್ ಶರ್ಮಾ ಉತ್ತಮ ನಾಯಕ, ಅದರಲ್ಲಿಯೂ ಸೀಮಿತ ಓವರ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಓರ್ವ ಅತ್ಯದ್ಭುತ ನಾಯಕ ಎಂದಿದ್ದು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರು ರೋಹಿತ್ ಶರ್ಮಾ ನಂತರ ತಂಡವನ್ನು ಮುನ್ನಡೆಸಲು ಯಾರು ಸೂಕ್ತ ಎಂಬುದನ್ನು ಆರಿಸಲಿದೆ ಎಂದಿದ್ದಾರೆ.

ಈ ಮೂವರ ಮೇಲಿದೆ ಕಣ್ಣು
ಇನ್ನೂ ಮುಂದುವರೆದು ಮಾತನಾಡಿರುವ ರವಿಶಾಸ್ತ್ರಿ ಶ್ರೇಯಸ್ ಐಯ್ಯರ್, ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಮೇಲೆ ಟೀಮ್ ಇಂಡಿಯಾ ಆಯ್ಕೆಗಾರರು ಕಣ್ಣಿಡಲಿದ್ದಾರೆ ಎಂದಿದ್ದಾರೆ. ಹಾಗೂ ಈ ಬಾರಿಯ ಐಪಿಎಲ್ ಟೂರ್ನಿ ಆಯ್ಕೆಗಾರರಿಗೆ ಟೀಮ್ ಇಂಡಿಯಾದ ಮುಂದಿನ ನಾಯಕನನ್ನು ಆರಿಸಲು ಸರಿಯಾದ ಅವಕಾಶವಾಗಿದ್ದು, ಈ ಅವಕಾಶವನ್ನು ಆಯ್ಕೆಗಾರರು ಸದುಪಯೋಗ ಮಾಡಿಕೊಳ್ಳಬೇಕು ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಇದು ಐಪಿಎಲ್ನ ಸುಂದರತೆ
ಇನ್ನು ಐಪಿಎಲ್ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಸಿಕೊಡಲಿದೆ ಎನ್ನುವುದರ ಕುರಿತು ಮಾತನಾಡಿರುವ ರವಿಶಾಸ್ತ್ರಿ ಐಪಿಎಲ್ ಟೂರ್ನಿಯೊಂದು ಆರಂಭವಾಗುವುದಕ್ಕೂ ಮುನ್ನ ಜನರಿಗೆ ಯಾರೆಂದೇ ತಿಳಿದಿರದ ಆಟಗಾರ ಆ ಟೂರ್ನಿ ಮುಕ್ತಾಯದ ನಂತರ ಸ್ಟಾರ್ ಆಗಿ ನಿಲ್ಲುತ್ತಾನೆ ಮತ್ತು ಅಂತಹ ಆಟಗಾರರ ಕುರಿತು ಮಾತನಾಡಲು ಆರಂಭಿಸುತ್ತಾರೆ, ಇದು ಐಪಿಎಲ್ನ ಸುಂದರತೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಈ ವೇಳೆ ವೆಂಕಟೇಶ್ ಐಯ್ಯರ್ನನ್ನು ಉದಾಹರಣೆಯಾಗಿ ತೆಗೆದುಕೊಂಡ ರವಿಶಾಸ್ತ್ರಿ ಕಳೆದ ಬಾರಿಯ ಐಪಿಎಲ್ನಲ್ಲಿ ಮಿಂಚಿದ ಈತ ನಂತರ ಅಂತರರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಎಂದು ಹೊಗಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications