
ರಾಹುಲ್ ಪಂಜಾಬ್ ತೊರೆಯಲು ಕಾರಣ
15ನೇ ಆವೃತ್ತಿಯ ಆರಂಭದ ಹಿನ್ನೆಲೆಯಲ್ಲಿ ರೆಡ್ ಬುಲ್ ಕ್ರಿಕೆಟ್ ಜೊತೆಗೆ ಮಾತನಾಡಿದ ಕೆಎಲ್ ರಾಹುಲ್ ತಾನು ಪಂಜಾಬ್ ಕಿಂಗ್ಸ್ ತೊರೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಕಳೆದ ನಾಲ್ಕು ವರ್ಷಗಳಿಮದ ಈ ಫ್ರಾಂಚೈಸಿ ಜೊತೆಗೆ ಕಳೆದಿದ್ದೇನೆ. ಆ ಫ್ರಾಂಚೈಸಿಯೊಂದಿಗೆ ಉತ್ತಮ ಸಮಯ ಕಳೆದಿದ್ದೇನೆ. ಆದರೆ ಈ ಸಂದರ್ಭದಲ್ಲಿ ನಾನು ನನಗಾಗಿ ಏನೆಲ್ಲ ಕಾದಿದೆ ಎಂಬುದನ್ನು ನೋಡಲು ಬಯಸಿದ್ದೆ ಹಾಗೂ ಹೊಸ ಪ್ರಯಾಣ ಇದೆಯೇ ಎಂಬುದನ್ನು ನೋಡಲು ಬಯಸಿದೆ" ಎಂದಿದ್ದಾರೆ ಕೆಎಲ್ ರಾಹುಲ್. ಇನ್ನು ಈ ಸಂದರ್ಭದಲ್ಲಿ ಅವರು ಪಂಜಾಬ್ ಕಿಂಗ್ಸ್ ತಂಡವನ್ನು ತೊರೆಯುವುದು ತನ್ನ ಪಾಲಿಗೆ ಕಠಿಣ ನಿರ್ಧಾರವಾಗಿತ್ತು ಎಂಬ ಅಂಶವನ್ನು ಕೂಡ ಹೇಳಿಕೊಂಡಿದ್ದಾರೆ.

ಕಠಿಣ ನಿರ್ಧಾರವಾಗಿತ್ತು
"ಪಂಜಾಬ್ ಕಿಂಗ್ಸ್ ತಂಡವನ್ನು ತೊರೆಯುವುದು ನಿಜವಾಗಿಯೂ ನನ್ನ ಪಾಲಿಗೆ ಕಠಿಣ ನಿರ್ಧಾರವಾಗಿತ್ತು. ನಾನು ಬಹಳ ಸಮಯದಿಂದ ಈ ತಂಡದೊಂದಿಗೆ ಕಳೆದಿದ್ದೇನೆ. ಈ ಸಂದರ್ಭದಲ್ಲಿ ಬೇರೇನಾದರೂ ಹೊಸತನವನ್ನು ಪಡೆಯಲು ಸಾಧ್ಯವಿದೆಯೇ ಎಂಬುದನ್ನು ನೊಡಲು ಬಯಸುತ್ತೇನೆ" ಎಂದಿದ್ದಾರೆ ಕೆಎಲ್ ರಾಹುಲ್. ಈ ಮೂಲಕ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯನ್ನು ತಾನು ಯಾವ ಕಾರಣಕ್ಕಾಗಿ ತೊರೆದೆ ಎಂಬ ಅಂಶವನ್ನು ಕೆಎಲ್ ರಾಹುಲ್ ವಿವರಿಸಿದ್ದಾರೆ.

ನಾವು ರೀಟೈನ್ ಮಾಡಲು ಬಯಸಿದ್ದೆವು ಎಂದಿದ್ದರು ಕುಂಬ್ಳೆ
ಇನ್ನು ಈ ಬಾರಿಯ ಮೆಗಾ ಹರಾಜಿಗೂ ಮುನ್ನ ನಡೆದ ರೀಟೆನ್ಶನ್ ಪ್ರಕ್ರಿಯೆಯಲ್ಲಿ ಪಂಜಾಬ್ ಕಿಂಗ್ಸ್ ಕೇವಲ ಇಬ್ಬರು ಆಟಗಾರರನ್ನು ಮಾತ್ರವೇ ರೀಟೈನ್ ಮಾಡಿಕೊಂಡಿತ್ತು. ಮಯಾಂಕ್ ಅಗರ್ವಾಲ್ ಹಾಗೂ ಅರ್ಷದೀಪ್ ಸಿಂಗ್ ಅವರನ್ನು ಮಾತ್ರ ರೀಟೈನ್ ಮಾಡಿಕೊಂಡಿತ್ತು. ಕೆಎಲ್ ರಾಹುಲ್ ರೀಟೈನ್ ಮಾಡಿಕೊಳ್ಳದಂತೆ ಮನವಿ ಮಾಡಿದ ನಂತರ ಅವರನ್ನು ಹರಾಜು ಪಟ್ಟಿಗೆ ಬಿಡುಗಡೆಗೊಳಿಸಲಾಗಿದೆ ಎಂದು ಪ್ರಾಂಚೈಸಿಯ ಮೂಲಗಳು ಮಾಹಿತಿ ನೀಡಿತ್ತು. ನಂತರ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಈ ಬಗ್ಗೆ ಮಾತನಾಡಿ ರಾಹುಲ್ ಅವರನ್ನು ಫ್ರಾಂಚೈಸಿ ರೂಟೈನ್ ಮಾಡಿಕೊಳ್ಳಲು ಬಯಸಿತ್ತು. ಆದರೆ ಅವರೇ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದ್ದರು. ಅವರ ನಿರ್ಧಾರವನ್ನು ನಾವು ಗೌರವಿಸಿದೆವು ಎಂದಿದ್ದಾರೆ ಅನಿಲ್ ಕುಂಬ್ಳೆ.

ಪಂಜಾಬ್ಗೆ ಮಯಾಂಕ್ ನಾಯಕ
ಈ ಬಾರಿಯ ಆವೃತ್ತಿಗೆ ಪಂಜಾಬ್ ಕಿಂಗ್ಸ್ಗೆ ಮಯಾಂಕ್ ಅಗರ್ವಾಲ್ ನಾಯಕತ್ವ ವಹಿಸಿಕೊಂಡಿದ್ದಾರೆ. ಶಿಖರ್ ಧವನ್ ಮತ್ತು ಕಗಿಸೋ ರಬಾಡಾ ಅವರಂತಾ ಆಟಗಾರರು ತಂಡದಲ್ಲಿದ್ದಾರೆ. ಇತ್ತ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಅತ್ಯುತ್ತಮ ಆಟಗಾರರನ್ನು ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲಿದೆ.


Click it and Unblock the Notifications
