ಈತನಿಂದಲೇ ಸೋತೆವು; ಎಲಿಮಿನೇಟರ್ನಲ್ಲಿ ಆರ್ಸಿಬಿ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್!

ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇಆಫ್ ಸುತ್ತಿನ ಪಂದ್ಯಗಳು ಸದ್ಯ ನಡೆಯುತ್ತಿದ್ದು, ಒಂದನೇ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ಮುಕ್ತಾಯಗೊಂಡಿದ್ದು, ಇದೀಗ ಎಲ್ಲರ ಚಿತ್ತ ಶುಕ್ರವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದತ್ತ ನೆಟ್ಟಿದೆ. ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಬುಧವಾರ ಎಲಿಮಿನೇಟರ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ರನ್ಗಳ ಭರ್ಜರಿ ಜಯ ಸಾಧಿಸಿತು.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 208 ರನ್ಗಳ ಕಠಿಣ ಗುರಿಯನ್ನು ನೀಡಿತ್ತು. ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಕೆಎಲ್ ರಾಹುಲ್ ಬಳಗ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿತು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 14 ರನ್ಗಳ ಸೋಲನ್ನು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿತು ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆಯನ್ನು ಪಡೆದುಕೊಂಡಿತು.
ಇತ್ತ ಲೀಗ್ ಹಂತದಲ್ಲಿ 9 ಪಂದ್ಯಗಳಲ್ಲಿ ಜಯ ಗಳಿಸಿ 18 ಅಂಕಗಳನ್ನು ಪಡೆದುಕೊಂಡು ಪ್ಲೇಆಫ್ ಸುತ್ತಿಗೆ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ಎಲಿಮಿನೇಟರ್ ಸುತ್ತಿನಲ್ಲಿಯೇ ಲೀಗ್ ಹಂತದಿಂದ ಹೊರಬಿದ್ದಿದ್ದು, ಪಂದ್ಯ ಮುಗಿದ ನಂತರ ತಂಡದ ಸೋಲಿಗೆ ಕಾರಣವೇನೆಂಬುದನ್ನು ನಾಯಕ ಕೆಎಲ್ ರಾಹುಲ್ ಬಿಚ್ಚಿಟ್ಟಿದ್ದಾರೆ. ಕೆಎಲ್ ರಾಹುಲ್ ನೀಡಿದ ಹೇಳಿಕೆಗಳ ವಿವರ ಮುಂದೆ ಇದೆ ಓದಿ..

ಪಂದ್ಯ ಸೋಲಲು ಇದೇ ಪ್ರಮುಖ ಕಾರಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಸೋಲಿಗೆ ಪ್ರಮುಖ ಕಾರಣ ತಮ್ಮ ತಂಡದ ಕಳಪೆ ಫೀಲ್ಡಿಂಗ್ ಎಂದು ಕೆಎಲ್ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ. ಎದುರಾಳಿ ತಂಡದ ಆಟಗಾರರು ಉತ್ತಮವಾಗಿ ಫೀಲ್ಡಿಂಗ್ ಮಾಡಿದರು, ಆದರೆ ನಮ್ಮ ತಂಡದ ಆಟಗಾರರು ಕಳಪೆ ಫೀಲ್ಡಿಂಗ್ ಮಾಡಿದರು, ಸುಲಭದ ಕ್ಯಾಚ್ಗಳನ್ನು ಕೈಚೆಲ್ಲುವುದರಿಂದ ತಂಡಕ್ಕೆ ಯಾವುದೇ ಉಪಯೋಗವಿಲ್ಲ ಎಂದು ರಾಹುಲ್ ಸೋಲಿಗೆ ಕಾರಣ ತಿಳಿಸಿದರು.

ಈತನಿಂದ ಪಂದ್ಯ ಸೋತೆವು
ಇನ್ನೂ ಮುಂದುವರೆದು ಮಾತನಾಡಿದ ಕೆಎಲ್ ರಾಹುಲ್ ಎರಡೂ ತಂಡಗಳ ನಡುವೆ ಇದ್ದ ಪ್ರಮುಖ ವ್ಯತ್ಯಾಸವೆಂದರೆ ಅದು ರಜತ್ ಪಾಟಿದಾರ್ ಶತಕ ಎಂದು ಹೇಳಿಕೆ ನೀಡಿದರು. ಯಾವುದೇ ತಂಡದ ಆಟಗಾರನೋರ್ವ ಅತ್ಯುತ್ತಮವಾಗಿ ಬ್ಯಾಟ್ ಬೀಸಿದರೆ ಆ ತಂಡ ಗೆಲುವು ಪಡೆಯಲಿದೆ ಎಂದ ರಾಹುಲ್ ಶತಕ ಸಿಡಿಸಿ ಅಬ್ಬರಿಸಿದ ರಜತ್ ಪಾಟಿದಾರ್ರಿಂದ ತಮ್ಮ ತಂಡ ಸೋಲುಂಡಿತು ಎಂದು ತಿಳಿಸಿದರು. ಪಾಟಿದಾರ್ 54 ಎಸೆತಗಳಲ್ಲಿ 112 ರನ್ ಬಾರಿಸಿ ಐಪಿಎಲ್ ಪ್ಲೇಆಫ್ನಲ್ಲಿ ವೇಗದ ಶತಕ ಬಾರಿಸಿದ ದಾಖಲೆ ಬರೆದರು.

ಕೊನೆಯವರೆಗೆ ಹೋರಾಟ ನಡೆಸಿ ಸೋತ ರಾಹುಲ್
ಇನ್ನು ಕೆಎಲ್ ರಾಹುಲ್ ತಮ್ಮ ತಂಡವನ್ನು ಗೆಲ್ಲಿಸಲು ಹರಸಾಹಸ ಪಟ್ಟರು. ಆರಂಭಿಕನಾಗಿ ಕಣಕ್ಕಿಳಿದು ಕೊನೆಯ ಹಂತದವರೆಗೂ ಹೋರಾಟ ನಡೆಸಿದ ರಾಹುಲ್ ತಂಡಕ್ಕೆ ಗೆಲುವನ್ನು ತಂದುಕೊಡುವಲ್ಲಿ ವಿಫಲರಾದರು. 58 ಎಸೆತಗಳನ್ನು ಎದುರಿಸಿದ ರಾಹುಲ್ 79 ರನ್ ಕಲೆಹಾಕಿ ಜೋಶ್ ಹೇಜಲ್ವುಡ್ ಎಸೆದ 19 ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications