
"ಓರ್ವ ಆಟಗಾರನಿಂದ ತಂಡವಾಗುವುದಿಲ್ಲ"
ಮುಂಬರಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗೆ ಕೆಎಲ್ ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್ ತಂಡದಲ್ಲಿ ಉಳಿಸಿಕೊಳ್ಳುವುದರ ಕುರಿತು ಪ್ರತಿಕ್ರಿಯೆ ನೀಡಿರುವ ನೆಸ್ ವಾಡಿಯಾ "ತಂಡದಲ್ಲಿ ಕೆಎಲ್ ರಾಹುಲ್ ಹೊರತುಪಡಿಸಿ ಹಲವಾರು ಆಟಗಾರರಿದ್ದಾರೆ. ಮೊದಲಿಗೆ, ಓರ್ವ ಆಟಗಾರನಿಂದ ಇಡೀ ತಂಡವಾಗುವುದಿಲ್ಲ. ನಾನು ಯಾವಾಗಲೂ ಹೇಳುವ ಹಾಗೆ ತಂಡದ ಪ್ರತಿಯೊಬ್ಬ ಆಟಗಾರನೂ ಸಹ ತನ್ನದೇ ಆದ ಮೌಲ್ಯಗಳನ್ನು ಹೊಂದಿರುತ್ತಾನೆ. ಅದನ್ನು ಅರಿತು ನಾವು ಅನುಸರಿಸಿಕೊಂಡು ಮತ್ತು ಅಳವಡಿಸಿಕೊಂಡು ಮುಂದೆ ಸಾಗಬೇಕು. ಯಾವುದೇ ತಂಡ ಕೂಡ ಓರ್ವ ಆಟಗಾರನ ಮೇಲೆ ಅವಲಂಬಿತವಾಗಿರುವುದು ಸೂಕ್ತವಲ್ಲ" ಎಂದಿದ್ದಾರೆ.

ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ಧನಾತ್ಮಕ ಹೇಳಿಕೆ ನೀಡದ ವಾಡಿಯಾ!
"ಕೆಎಲ್ ರಾಹುಲ್ ಅಪ್ರತಿಮ ಮತ್ತು ಅತ್ಯದ್ಭುತ ಆಟಗಾರ. ಕಳೆದೆರಡು ವರ್ಷಗಳಲ್ಲಿ ಕಷ್ಟದ ಸಮಯದಲ್ಲಿಯೂ ಕೆಎಲ್ ರಾಹುಲ್ ಉತ್ತಮವಾಗಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಓರ್ವ ಆಟಗಾರನ ಮೇಲೆ ಇಡೀ ತಂಡ ಅವಲಂಬಿತವಾಗಿರುವುದಿಲ್ಲ ಎಂಬುದನ್ನು ಅರಿತಿದ್ದೇವೆ. ಕ್ರಿಕೆಟ್ 11 ಆಟಗಾರರ ಆಟ, ಸದ್ಯ ರಿಟೆನ್ಷನ್ ಪಾಲಿಸಿ ಹೊರಬಿದ್ದಿದ್ದು ಮುಂದಿನ ದಿನಗಳಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದ್ದೇವೆಯೋ ನೋಡೋಣ" ಎಂದು ಹೇಳಿಕೆ ನೀಡುವುದರ ಮೂಲಕ ನೆಸ್ ವಾಡಿಯಾ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದಲ್ಲಿಯೇ ಉಳಿದುಕೊಳ್ಳುವುದು ಅನುಮಾನ ಎಂಬ ರೀತಿ ಪ್ರತಿಕ್ರಿಯಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರ್ತಾರಾ ಕೆಎಲ್ ರಾಹುಲ್?
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊನೆಯಲ್ಲಿ ಸಾಮಾಜಿಕ ಜಾಲತಾಣಗಳ ತಮ್ಮ ಅಧಿಕೃತ ಖಾತೆಗಳಲ್ಲಿ ಪಂಜಾಬ್ ಕಿಂಗ್ಸ್ ಪರ ವಿಶೇಷವಾಗಿ ಬರೆದುಕೊಂಡಿದ್ದ ಕೆಎಲ್ ರಾಹುಲ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಬೇರೆ ತಂಡ ಸೇರುವುದರ ಕುರಿತು ಸುಳಿವನ್ನು ನೀಡಿದ್ದರು. ಹಾಗೂ ಕೆಎಲ್ ರಾಹುಲ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲಿದ್ದು, ವಿರಾಟ್ ಕೊಹ್ಲಿ ನಾಯಕತ್ವ ಬಿಡುತ್ತಿರುವ ಕಾರಣ ಕೆಎಲ್ ರಾಹುಲ್ ನೂತನ ನಾಯಕನಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇದೀಗ ನೆಸ್ ವಾಡಿಯಾ ಕೂಡಾ ಕೆ ಎಲ್ ರಾಹುಲ್ ಅವರನ್ನು ಉಳಿಸಿಕೊಳ್ಳುವುದರ ಕುರಿತು ಸ್ಪಷ್ಟ ಹೇಳಿಕೆಯನ್ನು ನೀಡದೆ ಇರುವುದರ ಕಾರಣ ಕೆಎಲ್ ರಾಹುಲ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಅನ್ಯ ತಂಡ ಸೇರುವುದು ಬಹುತೇಕ ಖಚಿತವಾಗಿದೆ.


Click it and Unblock the Notifications












