'ಒಬ್ಬನಿಂದ ತಂಡವಲ್ಲ'; ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ತುಟಿಬಿಚ್ಚಿದ ಪಂಜಾಬ್ ಕಿಂಗ್ಸ್ ಮಾಲೀಕರು!

ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯತ್ತ ಇದೆ. ಇದಕ್ಕೂ ಮುನ್ನ ಇದೇ ಯುಎಇ ನೆಲದಲ್ಲಿ ನಡೆದಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ಪಂದ್ಯದಲ್ಲಿ ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ನಾಲ್ಕನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿತು.
ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಶಸ್ವಿಯಾಗಿ ಮುಗಿದ ಬಳಿಕ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಚರ್ಚೆಗಳ ನಡುವೆಯೂ ಸಾಕಷ್ಟು ಸುದ್ದಿಗಳಿಗೆ ಕಾರಣವಾಗುತ್ತಿದೆ. ಹೌದು, ಇತ್ತೀಚಿಗಷ್ಟೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸೇರ್ಪಡೆಯಾಗಲಿರುವ 2 ನೂತನ ತಂಡಗಳಾಗಿ ಹೊರಹೊಮ್ಮಿವೆ. ಸಂಜೀವ್ ಗೊಯಂಕಾ ಮಾಲೀಕತ್ವದ ಆರ್ಪಿಎಸ್ಜಿ ಲಕ್ನೋ ತಂಡವನ್ನು 7,090 ಕೋಟಿಗೆ ಖರೀದಿಸಿತು ಹಾಗೂ ಲಂಡನ್ ಮೂಲದ ಕಂಪೆನಿಯಾದ ಸಿವಿಸಿ ಕ್ಯಾಪಿಟಲ್ ಅಹಮದಾಬಾದ್ ತಂಡವನ್ನು 5,600 ಕೋಟಿಗೆ ತನ್ನದಾಗಿಸಿಕೊಂಡಿವೆ.
ಹೀಗಾಗಿ ಮುಂಬರಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಿಂದ 10 ತಂಡಗಳು ಟ್ರೋಫಿಗಾಗಿ ಸೆಣಸಾಡಲಿದ್ದು ಇದಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಕಾರಣದಿಂದಾಗಿ ಆ ಮೆಗಾ ಹರಾಜಿಗೂ ಮುನ್ನ ಅಸ್ತಿತ್ವದಲ್ಲಿರುವ ತಂಡಗಳು ತಮ್ಮ ತಂಡದ 4 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಿದ್ದು ಯಾವ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬುದರ ಕುರಿತು ಚರ್ಚೆಗಳು ನಡೆಯುತ್ತಿವೆ. ಅದರಲ್ಲಿಯೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮುಂಬರುವ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ತೊರೆಯಲಿದ್ದು ಬೇರೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಈ ಹಿಂದೆ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಇನ್ನು ಈ ಕುರಿತಾಗಿ ಪಂಜಾಬ್ ಕಿಂಗ್ಸ್ ತಂಡ ಇದುವರೆಗೂ ಸಹ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಆದರೆ ಇದೀಗ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತಾಗಿ ಮಾತನಾಡಿದ್ದು ಈ ಕೆಳಕಂಡಂತೆ ಪ್ರತಿಕ್ರಿಯಿಸಿದ್ದಾರೆ.

"ಓರ್ವ ಆಟಗಾರನಿಂದ ತಂಡವಾಗುವುದಿಲ್ಲ"
ಮುಂಬರಲಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗೆ ಕೆಎಲ್ ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್ ತಂಡದಲ್ಲಿ ಉಳಿಸಿಕೊಳ್ಳುವುದರ ಕುರಿತು ಪ್ರತಿಕ್ರಿಯೆ ನೀಡಿರುವ ನೆಸ್ ವಾಡಿಯಾ "ತಂಡದಲ್ಲಿ ಕೆಎಲ್ ರಾಹುಲ್ ಹೊರತುಪಡಿಸಿ ಹಲವಾರು ಆಟಗಾರರಿದ್ದಾರೆ. ಮೊದಲಿಗೆ, ಓರ್ವ ಆಟಗಾರನಿಂದ ಇಡೀ ತಂಡವಾಗುವುದಿಲ್ಲ. ನಾನು ಯಾವಾಗಲೂ ಹೇಳುವ ಹಾಗೆ ತಂಡದ ಪ್ರತಿಯೊಬ್ಬ ಆಟಗಾರನೂ ಸಹ ತನ್ನದೇ ಆದ ಮೌಲ್ಯಗಳನ್ನು ಹೊಂದಿರುತ್ತಾನೆ. ಅದನ್ನು ಅರಿತು ನಾವು ಅನುಸರಿಸಿಕೊಂಡು ಮತ್ತು ಅಳವಡಿಸಿಕೊಂಡು ಮುಂದೆ ಸಾಗಬೇಕು. ಯಾವುದೇ ತಂಡ ಕೂಡ ಓರ್ವ ಆಟಗಾರನ ಮೇಲೆ ಅವಲಂಬಿತವಾಗಿರುವುದು ಸೂಕ್ತವಲ್ಲ" ಎಂದಿದ್ದಾರೆ.

ಕೆಎಲ್ ರಾಹುಲ್ ಉಳಿಸಿಕೊಳ್ಳುವ ಕುರಿತು ಧನಾತ್ಮಕ ಹೇಳಿಕೆ ನೀಡದ ವಾಡಿಯಾ!
"ಕೆಎಲ್ ರಾಹುಲ್ ಅಪ್ರತಿಮ ಮತ್ತು ಅತ್ಯದ್ಭುತ ಆಟಗಾರ. ಕಳೆದೆರಡು ವರ್ಷಗಳಲ್ಲಿ ಕಷ್ಟದ ಸಮಯದಲ್ಲಿಯೂ ಕೆಎಲ್ ರಾಹುಲ್ ಉತ್ತಮವಾಗಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಓರ್ವ ಆಟಗಾರನ ಮೇಲೆ ಇಡೀ ತಂಡ ಅವಲಂಬಿತವಾಗಿರುವುದಿಲ್ಲ ಎಂಬುದನ್ನು ಅರಿತಿದ್ದೇವೆ. ಕ್ರಿಕೆಟ್ 11 ಆಟಗಾರರ ಆಟ, ಸದ್ಯ ರಿಟೆನ್ಷನ್ ಪಾಲಿಸಿ ಹೊರಬಿದ್ದಿದ್ದು ಮುಂದಿನ ದಿನಗಳಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದ್ದೇವೆಯೋ ನೋಡೋಣ" ಎಂದು ಹೇಳಿಕೆ ನೀಡುವುದರ ಮೂಲಕ ನೆಸ್ ವಾಡಿಯಾ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದಲ್ಲಿಯೇ ಉಳಿದುಕೊಳ್ಳುವುದು ಅನುಮಾನ ಎಂಬ ರೀತಿ ಪ್ರತಿಕ್ರಿಯಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರ್ತಾರಾ ಕೆಎಲ್ ರಾಹುಲ್?
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊನೆಯಲ್ಲಿ ಸಾಮಾಜಿಕ ಜಾಲತಾಣಗಳ ತಮ್ಮ ಅಧಿಕೃತ ಖಾತೆಗಳಲ್ಲಿ ಪಂಜಾಬ್ ಕಿಂಗ್ಸ್ ಪರ ವಿಶೇಷವಾಗಿ ಬರೆದುಕೊಂಡಿದ್ದ ಕೆಎಲ್ ರಾಹುಲ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಬೇರೆ ತಂಡ ಸೇರುವುದರ ಕುರಿತು ಸುಳಿವನ್ನು ನೀಡಿದ್ದರು. ಹಾಗೂ ಕೆಎಲ್ ರಾಹುಲ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲಿದ್ದು, ವಿರಾಟ್ ಕೊಹ್ಲಿ ನಾಯಕತ್ವ ಬಿಡುತ್ತಿರುವ ಕಾರಣ ಕೆಎಲ್ ರಾಹುಲ್ ನೂತನ ನಾಯಕನಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಇದೀಗ ನೆಸ್ ವಾಡಿಯಾ ಕೂಡಾ ಕೆ ಎಲ್ ರಾಹುಲ್ ಅವರನ್ನು ಉಳಿಸಿಕೊಳ್ಳುವುದರ ಕುರಿತು ಸ್ಪಷ್ಟ ಹೇಳಿಕೆಯನ್ನು ನೀಡದೆ ಇರುವುದರ ಕಾರಣ ಕೆಎಲ್ ರಾಹುಲ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಅನ್ಯ ತಂಡ ಸೇರುವುದು ಬಹುತೇಕ ಖಚಿತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications