
ಐಪಿಎಲ್ 15ನೇ ಆವೃತ್ತಿಯಲ್ಲಿ ಮಂಗಳವಾರ ಐದನೇ ಮುಖಾಮುಖಿ ನಡೆಯಲಿದ್ದು ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಕಳೆದ ಆವೃತ್ತಿಯಲ್ಲಿ ಈ ಎರಡೂ ತಂಡಗಳು ಅಂತ್ಯಂತ ಕಳಪೆ ಪ್ರದರ್ಶನ ನೀಡಿದ್ದು ಅಂಕಪಟ್ಟಿಯಲ್ಲಿ ಅಂತಿಮ ಎರಡು ಸ್ಥಾನಗಳನ್ನು ಪಡೆದುಕೊಂಡಿತ್ತು. ಈ ಬಾರಿಯ ಆವೃತ್ತಿಗೂ ಮುನ್ನ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿರುವ ಎರಡೂ ತಂಡಗಳು ಈಗ ಹೊಸ ಹುರುಪಿನೊಂದಿಗೆ ಸಜ್ಜಾಗಿದೆ.
ಈ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ತಮ್ಮ ತಂಡದ ಬಗ್ಗೆ ಮಾತನಾಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ನಿರ್ಭೀತ ಆಟಕ್ಕೆ ಒತ್ತು ನೀಡಲಿದೆ ಎಂಬುದನ್ನು ಸಂಜು ಹೇಳಿದ್ದಾರೆ. ಈ ಮೂಲಕ ಸತತವಾಗಿ ಅನುಭವಿಸುತ್ತಿರು ಹಿನ್ನಡೆಯಿಂದ ಹೊರಬರುವ ಪ್ರಯತ್ನ ನಡೆಸಲು ಸಂಜು ಬಳಗ ಸಜ್ಜಾಗಿದೆ.
2008ರ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ತಂಡವಾಗಿರುವ ರಾಜಸ್ಥಾನ್ ರಾಯಲ್ಸ್ ನಂತರ 13 ಆವೃತ್ತಿಗಳಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲು ವಿಫಲವಾಗಿದೆ. ಆದರೆ ಈ ಬಾರಿಯ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಆರ್ ಅಶ್ವಿನ್, ಟ್ರೆಂಟ್ ಬೋಲ್ಟ್ ಹಾಗೂ ಯುಜುವೇಂದ್ರ ಚಾಹಲ್ ಅವರಂತಾ ಆಟಗಾರರನ್ನು ಹೊಂದಿದ್ದು ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.
"ನಮ್ಮ ಮೊದಲ ಆದ್ಯತೆ ಸಾಧ್ಯವಾದಷ್ಟು ಬೇಗ ಒಗ್ಗೂಡುವುದಾಗಿದೆ. ಈ ಬಾರಿ ನಾವು ಭಿನ್ನವಾದ ಬಳಗವನ್ನು ಹೊಂದಿದ್ದೇವೆ. ಕೆಲವು ಹೊಸ ಆಟಗಾರರು ತಂಡದಲ್ಲಿದ್ದಾರೆ. ಹೀಗಾಗಿ ಜೊತೆಯಾಗಿದ್ದುಕೊಂಡು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ" ಎಂದು ಸಂಜು ಸ್ಯಾಮ್ಸನ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಹೇಳಿಕೆ ನೀಡಿದ್ದಾರೆ.
"ಖಂಡಿತವಾಗಿಗಿಯೂ ನಾವು ಕಳೆದ ಎರಡ್ಮೂರು ಆವೃತ್ತಿಗಳಲ್ಲಿ ಸಾಕಷ್ಟು ಪಾಠ ಕಲಿತಿದ್ದೇವೆ. ನಾವು ಕೆಲ ಆಯ್ಕೆಗಳ ಬಗ್ಗೆ ಚರ್ಚೆಯನ್ನು ನಡೆಸಿದ್ದೇವೆ. ಅಲ್ಲದೆ ಈ ಬಾರಿಯ ಹರಾಜಿನಲ್ಲಿ ನಾವು ಉತ್ತಮ ತಂಡವನ್ನು ಕೂಡ ಪಡೆದುಕೊಳ್ಳಲು ಸಾಧಯವಾಗಿದೆ" ಎಂದು ಸಂಜು ಸ್ಯಾಮ್ಸನ್ ಸೋಮವಾರ ನಡೆದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಎರಡು ತಿಂಗಳಕಾಲ ಸುದೀರ್ಘವಾಗಿ ನಡೆಯಲಿರುವ ಈ ಟೂರ್ನಿಗಾಗಿ ತಂಡದಲ್ಲಿ ಸಾಕಷ್ಟು ವೈವಿಧ್ಯತೆಯಿದೆ ಎಂದು ಕೂಡ ಅವರು ಹೇಳಿದ್ದಾರೆ.
"ನಮ್ಮ ತಂಡಕ್ಕೆ ಈ ಬಾರಿ ಸಾಕಷ್ಟು ಭಾರತ ಹಾಗೂ ವಿದೇಶಿ ಆಟಗಾರರ ಬಲವಿದೆ. ಇದು ಸುದೀರ್ಘವಾದ ಟೂರ್ನಿಯಾಗಿರುವ ಕಾರಣ ನಾವು ಎಲ್ಲಾ ಆಟಗಾರರ ಮನಸ್ಥಿತಿಯನ್ನು, ಫಿಟ್ನೆಸ್ ಹಾಗೂ ಫಾರ್ಮ್ಅನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಆದರೆ ನಮ್ಮಲ್ಲಿ ಈಗ ಅಗತ್ಯವಿರುವಷ್ಟು ಆಯ್ಕೆಗಳು ಕೂಡ ಲಭ್ಯವಿದೆ" ಎಂದಿದ್ದಾರೆ ಸಂಜು ಸ್ಯಾಮ್ಸನ್.
ರಾಜಸ್ಥಾನ್ ರಾಯಲ್ಸ್ ಸಂಪೂರ್ಣ ಸ್ಕ್ವಾಡ್: ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ , ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಶಿಮ್ರಾನ್ ಹೆಟ್ಮೆಯರ್, ದೇವದತ್ ಪಡಿಕ್ಕಲ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ರಿಯಾನ್ ಪರಾಗ್, ಕೆಸಿ ಕಾರಿಯಪ್ಪ, ನವದೀಪ್ ಸೈನಿ, ಓಬೇದ್ ಮೆಕಾಯ್, ಅರುಣಯ್ ಸಿಂಗ್, ಕುಲದೀಪ್ ಸೇನ್, ಕರುಣ್ ನಾಯರ್, ಧ್ರುವ್ ಜುರೆಲ್, ತೇಜಸ್ ಬರೋಕಾ, ಕುಲದೀಪ್ ಯಾದವ್, ಶುಭಂ ಗರ್ವಾಲ್, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಡೇರಿಲ್ ಮಿಚೆಲ್