
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಸೆನ್ಸೇಶನಲ್ ಆಟಗಾರ ರಜತ್ ಪಾಟಿದಾರ್ ಟ್ವಿಟ್ಟರ್ನಲ್ಲಿ ವಿರಾಟ್ ಕೊಹ್ಲಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಪಾಟಿದಾರ್ ನನ್ನ ಮೇಲೆ ನಂಬಿಕೆಯಿಟ್ಟಿದ್ದಕ್ಕೆ ಧನ್ಯವಾದಗಳು ವಿರಾಟ್ ಕೊಹ್ಲಿ ಎಂದು ಆರ್ಸಿಬಿ ಮಾಜಿ ನಾಯಕ ಹಾಗೂ ಹಿರಿಯ ಆಟಗಾರನ ಬೆಂಬಲವನ್ನು ಸ್ಮರಿಸಿದ್ದಾರೆ.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ರಜತ್ ಪಾಟಿದಾರ್ ಪ್ರದರ್ಶನದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದರು. ಇದು ಅತ್ಯಂತ ವಿಶೇಷವಾದ ಇನ್ನಿಂಗ್ಸ್ ಎಂದು ಕೊಂಡಾಡಿದ ಕೊಹ್ಲಿ ಐಪಿಎಲ್ನಲ್ಲಿ ಒತ್ತಡದ ಸಂದರ್ಭದಲ್ಲಿ ತಾನು ಕಂಡ ಶ್ರೇಷ್ಠ ಇನ್ನಿಂಗ್ಸ್ಗಳಲ್ಲಿ ಇದು ಒಂದು ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು. ರಜತ್ ಪಾಟಿದಾರ್ ಅವರ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಆರ್ಸಿಬಿ ಈ ಪಂದ್ಯದಲ್ಲಿ 14 ರನ್ಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಬುಧವಾರ ಈಡನ್ ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ ಪಾಟಿದಾರ್ 49 ಎಸೆತಗಳಲ್ಲಿ ಭರ್ಜರಿ ಶತಕವನ್ನು ಸಿಡಿಸಿದ್ದಲ್ಲದೆ 112 ರನ್ಗಳ ಅಜೇಯ ಕೊಡುಗೆಯನ್ನು ನೀಡಿದ್ದಾರೆ. ಈ ಭರ್ಜರಿ ಪ್ರದರ್ಶನದಿಂದಾಗಿ ಆರ್ಸಿಬಿ ಗೆಲುವು ಸಾಧಿಸಿದ್ದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಆಡಲು ಅರ್ಹತೆ ಪಡೆದುಕೊಂಡಿದೆ.
ಬದಲಿ ಆಟಗಾರನಾಗಿ ಸೇರ್ಪಡೆಯಾಗಿದ್ದ ರಜತ್ ಪಾಟಿದಾರ್: ಇನ್ನು ಕಳೆದ ಆವೃತ್ತಿಯಲ್ಲಿಯೂ ಪಾಟಿದಾರ್ ಆರ್ಸಿಬಿ ತಂಡದ ಭಾಗವಾಗಿದ್ದರು. 2021ರ ಆವೃತ್ತಿಯಲ್ಲಿ 4 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದ ಪಾಟಿದಾರ್ 71 ರನ್ಗಳನ್ನು ಮಾತ್ರವೇ ಗಳಿಸಿಕೊಂಡಿದ್ದರು. ಹೀಗಾಗಿ ಅವರನ್ನು ಹರಾಜಿನಲ್ಲಿ ಮತ್ತೆ ಸೇರ್ಪಡೆಗೊಳಿಸುವ ಮನಸ್ಸು ಮಾಡಿರಲಿಲ್ಲ ಆರ್ಸಿಬಿ ಮ್ಯಾನೇಜ್ಮೆಂಟ್. ಆದರೆ ಆರ್ಸಿಬಿ ಹರಾಜಿನಲ್ಲಿ ಸೇರ್ಪಡೆಗೊಳಿಸಿದ್ದ ನವನೀತ್ ಸಿಸೋಡಿಯಾ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ರಜತ್ ಪಾಟಿದಾರ್ ಅವರನ್ನು ಬದಲಿ ಆಟಗಾರನಾಗಿ ಮೂಲಬೆಲೆ 20 ಲಕ್ಷಕ್ಕೆ ಸೇರ್ಪಡೆಗೊಳಿಸಿತು ಆರ್ಸಿಬಿ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನಿಡಿದ ರಜತ್ ಪಾಟಿದಾರ್ ಬ್ಯಾಟಿಂಗ್ ಬಗ್ಗೆ ಆರ್ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಐಪಿಎಲ್ನಲ್ಲಿ ಒತ್ತಡದ ಸಂದರ್ಭದಲ್ಲಿ ನಾನು ಕಂಡ ಅತ್ಯುತ್ತಮ ಪ್ರದರ್ಶನಗಳಲ್ಲಿ ಇದು ಒಂದು. ಈ ಇನ್ನಿಂಗ್ಸ್ನ ಅದ್ಭುತ ಹೊಡೆತಗಳು ಬ್ಯಾಟಿಂಗನ್ನು ಮತ್ತೊಂದು ಹಂತಕ್ಕೇರಿಸಿದೆ" ಎಂದು ವಿರಾಟ್ ಕೊಹ್ಲಿ ರಜತ್ ಪಾಟಿದಾರ್ ಬ್ಯಾಟಿಂಗ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.