ಶುಕ್ರವಾರ ರಾತ್ರಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯ 51ನೇ ಪಂದ್ಯವು ಭಾರೀ ಹೈಡ್ರಾಮಾಗೆ ಸಾಕ್ಷಿಯಾಯಿತು. ಕೊನೆಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಕೊನೆಯ ಓವರ್ನಲ್ಲಿ ರೋಚಕವಾಗಿ ಮೇಲುಗೈ ಸಾಧಿಸಿ ಗೆಲುವು ಕಂಡಿತು.
ವೇಗಿ ಡೇನಿಯಲ್ ಸ್ಯಾಮ್ಸ್ ಅವರು ಎಸೆದ ಅಂತಿಮ ಓವರ್ನಲ್ಲಿ ಗುಜರಾತ್ ಗೆಲುವಿಗೆ 9 ರನ್ಗಳ ಅವಶ್ಯಕತೆ ಇತ್ತು. ಆದರೆ ಸ್ಯಾಮ್ಸ್ ಆ ಓವರ್ ಅನ್ನು ಸಂಪೂರ್ಣ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡರು ಮತ್ತು ಕೊನೆಯಲ್ಲಿ ಮುಂಬೈ ಇಂಡಿಯನ್ಸ್ ಐದು ರನ್ಗಳ ಜಯ ತಂದಿತ್ತರು.
ಗುಜರಾತ್ ಟೈಟನ್ಸ್ ತಂಡದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್, ಈ ವರ್ಷದ ಐಪಿಎಲ್ನಲ್ಲಿ ಹೆಚ್ಚು ವಿಕೆಟ್ಗಳ ಪಡೆದಿಲ್ಲ. ಆದರೆ ಟೈಟನ್ಸ್ ಸ್ಪಿನ್ನರ್ ತಮ್ಮ ತಂಡಕ್ಕೆ ಕಡಿಮೆ ಎಕಾನಮಿಯಲ್ಲಿ ರನ್ ನೀಡುತ್ತಿದ್ದು, ಇದರಿಂದ ಎದುರಾಳಿ ತಂಡದ ಅಬ್ಬರದ ಬ್ಯಾಟಿಂಗ್ಗೆ ನಿಯಂತ್ರಣ ಹೇರುತ್ತಿದ್ದಾರೆ.

ರಶೀದ್ ಖಾನ್ ಇಲ್ಲಿಯವರೆಗೆ ಎಲ್ಲಾ ಪಂದ್ಯಗಳಿಂದ 6.84 ಎಕಾನಮಿ ದರದಲ್ಲಿ 11 ವಿಕೆಟ್ಗಳನ್ನು ಉರುಳಿಸಿದ್ದಾರೆ. ಇದು ಅವರ ಸಾಮರ್ಥ್ಯಕ್ಕೆ ತಕ್ಕುದಾದ ಪ್ರದರ್ಶನವಲ್ಲ ಎಂದು ಅವರೇ ಒಪ್ಪಿಕೊಳ್ಳುತ್ತಾರೆ. ಆದರೂ ಅಫ್ಘಾನಿಸ್ತಾನದ ಈ ಸ್ಟಾರ್ ಕ್ರಿಕೆಟಿಗ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
"ಟಿ20ಗಳಲ್ಲಿ ಬೌಲಿಂಗ್ ಮಾಡುವಾಗ ವಿಕೆಟ್ಗಳನ್ನು ಪಡೆಯುವುದು ಯಾವಾಗಲೂ ಅದ್ಭುತವಾಗಿರುತ್ತದೆ. ಆದರೆ ನನಗೆ ಇದು ಸ್ವಲ್ಪ ವಿಭಿನ್ನವಾಗಿದ್ದು, ಏಕೆಂದರೆ ನಾನು ಯಾವಾಗಲೂ ಎಕಾನಮಿಯ ಮೇಲೆ ಕೇಂದ್ರೀಕರಿಸುತ್ತೇನೆ. ಅದು ಬ್ಯಾಟರ್ಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ," ಎಂದು ಗುಜರಾತ್ ಟೈಟನ್ಸ್ ತಂಡ ಶುಕ್ರವಾರ ಮುಂಬೈ ಇಂಡಿಯನ್ಸ್ ವಿರುದ್ಧ ಐದು ರನ್ ಸೋಲಿನ ನಂತರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ರಶೀದ್ ಖಾನ್ ಹೇಳಿದರು.
"ಆದರೆ ಖಂಡಿತವಾಗಿಯೂ ಇತರ ಐಪಿಎಲ್ಗಳಿಗೆ ಹೋಲಿಸಿದರೆ, ಈ ವರ್ಷ ಕಡಿಮೆ ವಿಕೆಟ್ಗಳನ್ನು ಪಡೆದಿದ್ದಾರೆ. ಒಂದೆರಡು ಪಂದ್ಯಗಳಲ್ಲಿ ನಾನು ಮಾಡಬೇಕಾದಷ್ಟು ಉತ್ತಮ ಬೌಲಿಂಗ್ ಮಾಡಲಿಲ್ಲ. ಆದರೆ ಇದು ಟಿ20, ನೀವು ಕಲಿಯುವುದು ತುಂಬಾ ಇದೆ," ಎಂದರು. ರಶೀದ್ ಮುಂಬೈ ಇಂಡಿಯನ್ಸ್ ವಿರುದ್ಧ ಉತ್ತಮ ಆಟ ಪ್ರದರ್ಶಿಸಿದರು, ಮೂರು ಕ್ಯಾಚ್ಗಳನ್ನು ಹಿಡಿಯುವುದರ ಜೊತೆಗೆ ಬೌಲಿಂಗ್ನಲ್ಲಿ 24ಕ್ಕೆ 2 ವಿಕೆಟ್ ಕಬಳಿಸಿದರು.

ಪಂದ್ಯದ ಅಂತಿಮ ಓವರ್ನಲ್ಲಿ ಗುಜರಾತ್ ಟೈಟನ್ಸ್ಗೆ ಒಂಬತ್ತು ರನ್ಗಳ ಅಗತ್ಯವಿತ್ತು. ಆದರೆ ಬ್ಯಾಟ್ಸ್ಮನ್ಗಳಿಗೆ ಅದನ್ನು ಚೇಸ್ ಮಾಡಲು ಸಾಧ್ಯವಾಗಲಿಲ್ಲ.
ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ ರನ್ಔಟ್
"ಹಾರ್ದಿಕ್ ಪಾಂಡ್ಯ ಮತ್ತು ರಾಹುಲ್ ತೆವಾಟಿಯಾ ಅವರ ರನ್ ಔಟ್ಗಳು ಪಂದ್ಯದ ಗತಿಯನ್ನೇ ಬದಲಾಯಿಸಿತು. ಇದು ಟೈಟನ್ಸ್ ಸೋಲಿಗೆ ಪ್ರಮುಖ ಕಾರಣವೆಂದ ಅವರು, ಅದು ಟಿ20ಯ ಬ್ಯೂಟಿಯಾಗಿದೆ. ಕೆಲವೊಮ್ಮೆ ನೀವು 2 ಎಸೆತಗಳಲ್ಲಿ 9 ರನ್ ಗಳಿಸಬಹುದು ಮತ್ತು ಕೆಲವೊಮ್ಮೆ 6 ಎಸೆತಗಳಲ್ಲಿ 9 ರನ್ ಗಳಿಸುವಲ್ಲಿ ವಿಫಲರಾಗುತ್ತೀರಿ," ಎಂದು ರಶೀದ್ ಖಾನ್ ಹೇಳಿದರು.
"ಕಲಿಯಲು ಬಹಳಷ್ಟು ಇದೆ, ಕಳೆದ ಕೆಲವು ಪಂದ್ಯಗಳಲ್ಲಿ ನಾವು ಮಾಡಿದ ನಕಾರಾತ್ಮಕ ವಿಷಯಗಳನ್ನು ಪುನರಾವರ್ತಿಸಬಾರದು. ಕೊನೆಯ ಓವರ್ನಲ್ಲಿ ಒಂಬತ್ತು ರನ್ಗಳನ್ನು ರಕ್ಷಿಸಿದ ಮುಂಬೈ ಇಂಡಿಯನ್ಸ್ ವೇಗಿ ಡೇನಿಯಲ್ ಸ್ಯಾಮ್ಸ್ ಕುರಿತು, ಅವರು ತಮ್ಮ ಅತ್ಯುತ್ತಮ ಎಸೆತಗಳಿಂದ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾರೆ,"ಎಂದು ಶ್ಲಾಘಿಸಿದರು.

"ನಾನು ಅಂತಿಮ ಓವರ್ಗಳಲ್ಲಿ ಅತ್ಯುತ್ತಮ ಬಾಲ್ಗಳನ್ನು ಬೌಲ್ ಮಾಡಲು ಎದುರು ನೋಡುತ್ತಿದ್ದೆ, ಸ್ವಲ್ಪ ಲೆಂಥ್ ಬದಲಾಯಿಸಿ, ಚೆಂಡನ್ನು ದೂರವಿರಿಸಿ ಮತ್ತು ನಿಧಾನವಾಗಿ ಬೌಲ್ ಮಾಡಿ ಸ್ವಲ್ಪ ಡೀಪ್ ಅನ್ನು ಪಡೆದುಕೊಂಡೆ," ಎಂದು ಮುಂಬೈ ಇಂಡಿಯನ್ಸ್ ವೇಗಿ ಡೇನಿಯಲ್ ಸ್ಯಾಮ್ಸ್ ತಿಳಿಸಿದರು.
"ನನಗೆ ನನ್ನ ಪ್ರದರ್ಶನಗಳನ್ನು ಪುನರಾವರ್ತಿಸಲು ಇದು ಉತ್ತಮ ಸಮಯವಾಗಿದೆ, ನಾನು ಉತ್ತಮವಾಗಿ ಏನು ಯೋಚಿಸುತ್ತೇನೆಯೋ ಅದನ್ನು ಮೈದಾನದಲ್ಲಿರುವವರಿಗೂ(ಫೀಲ್ಡರ್ಗಳು) ಕಾರ್ಯಗತಗೊಳಿಸುತ್ತೇನೆ," ಎಂದು ತನ್ನ ಮೂರು ಓವರ್ಗಳಿಂದ 0/18 ನೀಡಿದ ಪಂದ್ಯ ಗೆಲ್ಲಿಸಿದ ಮುಂಬೈ ಇಂಡಿಯನ್ಸ್ ವೇಗಿ ಡೇನಿಯಲ್ ಸ್ಯಾಮ್ಸ್ ನುಡಿದರು.