
ಇಬ್ಬರ ನಡುವೆ ಒಳಜಗಳ!
'ರವೀಂದ್ರ ಜಡೇಜಾಗೆ ಗಾಯದ ಸಮಸ್ಯೆ ಇರುವುದು ನಿಜ, ಅದರ ಕುರಿತು ಯಾವುದೇ ಅನುಮಾನ ಬೇಡ. ಅದರ ಜೊತೆಗೆ ರವೀಂದ್ರ ಜಡೇಜಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಜಡೇಜಾ ನಾಯಕತ್ವದಿಂದ ಕೆಳಗಿಳಿದ ನಂತರ ಯಾವುದೂ ಸಾಮಾನ್ಯ ರೀತಿಯಲ್ಲಿಲ್ಲ. ಜಡೇಜಾ ಮಂಕಾಗಿದ್ದು, ತಮ್ಮ ಹಿಂದಿನ ಉತ್ಸಾಹವನ್ನು ಕಳೆದುಕೊಂಡಿದ್ದಾರೆ' ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಲ್ಲ ಮೂಲವೊಂದು ಮಾಹಿತಿ ನೀಡಿದೆ.

ಒಳಜಗಳ ಇರುವುದು ನಿಜ ಎನ್ನುತ್ತಿದೆ ಈ ಬದಲಾವಣೆ
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರವೀಂದ್ರ ಜಡೇಜಾ ನಡುವೆ ಎಲ್ಲವೂ ಸರಿಯಲ್ಲ, ಒಳ ಜಗಳಗಳಿವೆ ಎಂಬ ವಿವಾದಕ್ಕೆ ಪುಷ್ಟಿ ಕೊಟ್ಟದ್ದು ಚೆನ್ನೈ ಸೂಪರ್ ಕಿಂಗ್ಸ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ. ಹೌದು, ಈ ರೀತಿಯ ಒಂದು ಸುದ್ದಿ ಹರಿದಾಡುತ್ತಿರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರವೀಂದ್ರ ಜಡೇಜಾ ಅವರನ್ನು ಅನ್ ಫಾಲೋ ಮಾಡಿದೆ. ಇಷ್ಟು ದಿನ ರವೀಂದ್ರ ಜಡೇಜಾ ಅವರನ್ನು ಹಿಂಬಾಲಿಸುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಏಕಾಏಕಿ ಅನ್ ಫಾಲೋ ಮಾಡಿದ್ದು, ಒಳಜಗಳಗಳು ಇರುವುದು ನಿಜ ಎಂಬ ಭಾವ ಮೂಡುವಂತೆ ಮಾಡಿದೆ.

ಟೂರ್ನಿಯಲ್ಲಿ ಜಡೇಜಾ ಫ್ಲಾಪ್ ಶೋ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರವೀಂದ್ರ ಜಡೇಜಾ 8 ಪಂದ್ಯಗಳಲ್ಲಿ ನಾಯಕನಾಗಿ ಕಣಕ್ಕಿಳಿದು, ಉಳಿದ ಪಂದ್ಯಗಳಲ್ಲಿ ಕೇವಲ ಆಟಗಾರನಾಗಿ ಕಣಕ್ಕಿಳಿದಿದ್ದಾರೆ. ಇನ್ನು ಒಟ್ಟು ಹತ್ತು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದಿರುವ ರವೀಂದ್ರ ಜಡೇಜಾ ಕೇವಲ 116 ರನ್ ಕಲೆಹಾಕಿದ್ದಾರೆ. ಇನ್ನು ಆಲ್ರೌಂಡರ್ ಆಟಗಾರನಾದ ಜಡೇಜಾ ಕೇವಲ 5 ವಿಕೆಟ್ ಪಡೆಯುವಲ್ಲಿ ಮಾತ್ರ ಶಕ್ತರಾಗಿದ್ದಾರೆ.


Click it and Unblock the Notifications
