
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅಭಿಮಾನಿಗಳ ಈ ಟೂರ್ನಿಗೆ ಕಾತರದಿಂದ ಕಾಯುತ್ತಿದ್ದು ಉತ್ಸಾಹ ಹೆಚ್ಚಾಗಿದೆ. ಇನ್ನು ಬೆಂಗಳೂರು ಮೂಲದ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಅಭಿಮಾನಿಗಳ ಕ್ರೇಜ್ ಜೋರಾಗಿದೆ. ಅಭಿಮಾನಿಯೊಬ್ಬರು ಆರ್ಸಿಬಿ ತಂಡಕ್ಕಾಗಿ ತಮ್ಮ ಕಾರಿಗೆ ಹೊಸ ರೂಪ ಕೊಟ್ಟಿದ್ದಾರೆ.
ಸಾಗರದ ಸದ್ಗುರು ಸಂತೋಷ್ ಎಂಬವರು ಆರ್ಸಿಬಿ ತಂಡದ ಅಪ್ಪಟ ಅಭಿಮಾನಿ. ಇದೆ ಕಾರಣಕ್ಕೆ ತಮ್ಮ ಫಿಯಟ್ ಕಾರಿಗೆ ಹೊಸ ಲುಕ್ ಕೊಟ್ಟಿದ್ದಾರೆ. ಈ ಕಾರು ಸಾಗರದಲ್ಲಿ ಈಗ ಜನರ ಗಮನ ಸೆಳೆಯುತ್ತಿದೆ. ಈ ಕಾರಿನೊಂದಿಗೆ ಸೆಲ್ಫಿ, ಫೋಟೊಗಾಗಿ ಜನರು ಮುಗಿಬಿದ್ದಿದ್ದಾರೆ.
1980ರ ಮಾಡೆಲ್ ಕಾರು: ಸದ್ಗುರು ಹೊಟೇಲ್ ಸಂತೋಷ್ ಅವರು 1980ರ ಫಿಯಟ್ ಕಾರಿಗೆ ಹೊಸ ಲುಕ್ ಕೊಟ್ಟಿದ್ದಾರೆ. "ಹಳೆಯದನ್ನೆಲ್ಲ ಉಳಿಸಿಕೊಂಡು ಹೋಗಬೇಕು. ಆ ಕಾರಣಕ್ಕೆ ಹಳೆಯ ಫಿಯಟ್ ಖರೀದಿಸಿದ್ದೇನೆ. ನಾನು RCB ಅಭಿಮಾನಿ. ಆದ್ದರಿಂದ ಕಾರಿಗೆ RCB ಸ್ಟಿಕರ್ ಮಾಡಿಸಿದ್ದೇನೆ" ಅನ್ನುತ್ತಾರೆ ಸದ್ಗುರು ಸಂತೋಷ್.
'ಈ ಸಲ ಕಪ್ ನಮ್ದೆ': ಕಾರಿನ ಮುಂಭಾಗದ ಬಾನೆಟ್ ಮೇಲೆ 'ಈ ಸಲ ಕಪ್ ನಮ್ದೆ' ಎಂದು ಬರೆಯಿಸಿದ್ದಾರೆ. ಬಾನೆಟ್ನ ಮುಂಭಾಗ ನಟ ಡಾ.ರಾಜಕುಮಾರ್ ಅವರ ಭಾವಚಿತ್ರದ ಸ್ಟಿಕರಿಂಗ್ ಮಾಡಿಸಿದ್ದಾರೆ. 'ಕಾರಿನ ಮೇಲೆ ನಟರಾದ ಶಂಕರನಾಗ್, ಡಾ.ವಿಷ್ಣುವರ್ಧನ್, ಡಾ.ಪುನೀತ್ ರಾಜಕುಮಾರ್ ಅವರ ಫೋಟೊಗಳಿವೆ. ಮುಂಭಾಗದಲ್ಲಿ ಡಾ.ರಾಜಕುಮಾರ್ ಅವರ ದೊಡ್ಡ ಫೋಟೊ ಇದೆ' ಅನ್ನುತ್ತಾರೆ ಸದ್ಗುರು ಸಂತೋಷ್.
ಪೆಟ್ರೋಲ್ ಟ್ಯಾಂಕ್ ಮೇಲೆ ಅಚ್ಚೇ ದಿನ್: ಇವೆಲ್ಲದರ ನಡುವೆ ಪೆಟ್ರೋಲ್ ಟ್ಯಾಂಕ್ ಮೇಲೆ ಬರೆಯಿಸಿರುವ ಪದ ಹಲವರ ಗಮನ ಸೆಳೆಯುತ್ತಿದೆ. ಅಚ್ಚೇ ದಿನ್ ಎಂದು ಸ್ಟಿಕರ್ ಹಾಕಿಸಿದ್ದಾರೆ. 'ವಿಡಂಬನಾತ್ಮಕವಾಗಿ ಅಚ್ಚೇ ದಿನ್ ಎಂದು ಬರೆಯಿಸಿದ್ದೇನೆ. ಈ ಭಾರಿ ನಮ್ಮ ತಂಡ ಕಪ್ ಗೆಲ್ಲಬಹುದು ಎಂಬ ಕಾರಣಕ್ಕೆ ಅಚ್ಚೇ ದಿನ್ ಎಂದುಕೊಳ್ಳಬಹುದು. ಮತ್ತೊಂದು ಕಡೆ ಪೆಟ್ರೋಲ್ ರೇಟ್ ದುಬಾರಿಯಾಗಿರುವುದು ಅಚ್ಚೇ ದಿನ್ ಎಂದು ತಿಳಿದು ಕೊಳ್ಳಬಹುದು' ಅನ್ನುತ್ತಾರೆ ಸದ್ಗುರು ಸಂತೋಷ್.
ಕಾರಿನ ವಿಡಿಯೋ ವೈರಲ್: ಇನ್ನು ಆರ್ಸಿಬಿ ಮೇಲಿನ ಅಭಿಮಾನದಿಂದ ಕಾರಿಗೆ ಹೊಸ ಲುಕ್ ಕೊಟ್ಟಿರುವುದನ್ನು ಸದ್ಗುರು ಸಂತೋಷ್ ಅವರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್ಸಿಬಿ ತಂಡದ ಪರವಾಗಿ ಇರುವ ಅಭಿಮಾನಿಗಳಿಗೆ ಜೋಶ್ ನೀಡಿದೆ.
ಕಳೆದ ಐಪಿಎಲ್ ಹೊತ್ತಿಗೆ ತಮ್ಮ ಸ್ಕೂಟರ್ಗೆ ಐಪಿಎಲ್ ಸ್ಟಿಕರ್ ಮಾಡಿಸಿ ಸಂತೋಷ್ ಅವರು ಸುದ್ದಿಯಾಗಿದ್ದರು. ಈಗಲೂ ಆ ಸ್ಕೂಟರ್ ಹಲವರ ಗಮನ ಸೆಳೆಯುತ್ತಿದೆ. ಈ ಭಾರಿ ಫಿಯಟ್ ಕಾರಿಗೆ ಐಪಿಎಲ್ ಲುಕ್ ಕೊಟ್ಟಿದ್ದಾರೆ. ಇದು ಕೂಡ ಈಗ ಫೋಟೊ, ಸೆಲ್ಫಿ ಪ್ರಿಯರು ಹಾಗೂ ಆರ್ಸಿಬಿ ಅಭಿಮಾನಿಗಳನ್ನು ಸೆಳೆಯುತ್ತಿದೆ.