ನಾಯಕತ್ವ ಸಿಗದೇ ಡಿಸಿಯಿಂದ ಹೊರಬಿದ್ದ ಶ್ರೇಯಸ್ಗೆ ಆರ್ಸಿಬಿ ಸೇರಿ 4 ತಂಡಗಳ ನಾಯಕನಾಗುವ ಅವಕಾಶ!

ಶ್ರೇಯಸ್ ಅಯ್ಯರ್, ಕಳೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಪಂದ್ಯವೊಂದರಲ್ಲಿ ಫೀಲ್ಡಿಂಗ್ ಮಾಡುವ ವೇಳೆ ತೀವ್ರ ಭುಜದ ಗಾಯಕ್ಕೊಳಗಾಗಿ ಹಲವಾರು ತಿಂಗಳುಗಳ ಕಾಲ ಸುದೀರ್ಘ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದಿದ್ದರು. ಹೀಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತೀವ್ರ ಭುಜದ ಗಾಯಕ್ಕೆ ಒಳಗಾದ ಶ್ರೇಯಸ್ ಅಯ್ಯರ್ ಮೈದಾನದಲ್ಲಿಯೇ ಕುಸಿದು ಬಿದ್ದಿದ್ದರು. ಅಲ್ಲಿಯವರೆಗೂ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ಪಡೆದುಕೊಂಡು ಜವಾಬ್ದಾರಿಯುತ ಆಟವನ್ನು ಆಡುತ್ತಿದ್ದ ಶ್ರೇಯಸ್ ಅಯ್ಯರ್ ಈ ಅವಘಡದ ನಂತರ ಅವಕಾಶಗಳು ಸಿಗದೇ ಮತ್ತೆ ಮೈದಾನಕ್ಕಿಳಿಯಲು ಪರಿತಪಿಸುತ್ತಿದ್ದರು.
ಶ್ರೇಯಸ್ ಅಯ್ಯರ್ ಹೀಗೆ ಗಾಯಕ್ಕೊಳಗಾಗಿ ವಿಶ್ರಾಂತಿಗೆಂದು ತೆರಳಿದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ರಿಷಭ್ ಪಂತ್ ಹೆಗಲಿಗೆ ಹಾಕಲಾಯಿತು. ಹೌದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸಂಪೂರ್ಣವಾಗಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವವನ್ನು ರಿಷಭ್ ಪಂತ್ ಅವರೇ ನಿರ್ವಹಿಸಿ ಉತ್ತಮ ಫಲಿತಾಂಶವನ್ನು ಕೂಡ ನೀಡಿದರು. ಹೀಗಾಗಿಯೇ ಗಾಯದಿಂದ ಚೇತರಿಸಿಕೊಂಡು ತಂಡ ಸೇರಿದ ಶ್ರೇಯಸ್ ಅಯ್ಯರ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನಾಯಕತ್ವವನ್ನು ನೀಡಲಿಲ್ಲ.
ಅಷ್ಟೇ ಅಲ್ಲದೇ ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಮತ್ತು ಅಹ್ಮದಾಬಾದ್ ನೂತನ ತಂಡಗಳಾಗಿ ಕಣಕ್ಕಿಳಿಯಲಿದ್ದು ಇದಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ನವೆಂಬರ್ 30ರೊಳಗೆ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು ಯಾವ ಆಟಗಾರರನ್ನು ತಂಡದಲ್ಲಿಯೇ ಉಳಿಸಿಕೊಳ್ಳಲಿದೆ ಎಂಬ ವರದಿಯನ್ನು ಸಲ್ಲಿಸಲು ಬಿಸಿಸಿಐ ಸೂಚನೆ ನೀಡಿತ್ತು. ಅದರಂತೆಯೇ ಇದೀಗ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದಾರೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾತ್ರ ಎಲ್ಲಾ ಫ್ರಾಂಚೈಸಿಗಳಿಗಿಂತ ಮೊದಲೇ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿತ್ತು. ರಿಷಭ್ ಪಂತ್, ಪೃಥ್ವಿ ಶಾ, ಅಕ್ಷರ್ ಪಟೇಲ್ ಮತ್ತು ಅನ್ರಿಚ್ ನಾರ್ಕಿಯಾ ಈ 4 ಆಟಗಾರರನ್ನು ಡೆಲ್ಲಿ ಕ್ಯಾಪಿಟಲ್ಸ್ ರಿಟೈನ್ ಮಾಡಿಕೊಳ್ಳಲಿದ್ದು ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಹೀಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಕಡೆಗಣಿಸಲ್ಪಟ್ಟ ನಂತರ ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಆಡಿದ ಚೊಚ್ಚಲ ಇನ್ನಿಂಗ್ಸ್ನಲ್ಲಿಯೇ ಶ್ರೇಯಸ್ ಅಯ್ಯರ್ ಶತಕ ಬಾರಿಸಿ ಮಿಂಚಿದ್ದಾರೆ. ಹೀಗೆ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಯ ಕೇಂದ್ರ ಬಿಂದುವಾಗಿರುವ ಶ್ರೇಯಸ್ ಅಯ್ಯರ್ ಕುರಿತು ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಮಾತನಾಡಿದ್ದು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ನಾಯಕನಾಗುವ ಅವಕಾಶ ಶ್ರೇಯಸ್ ಅಯ್ಯರ್ ಪಾಲಿಗಿದೆ
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಕುರಿತಾಗಿ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಮಾತನಾಡಿದ್ದು, ಮುಂಬರುವ ಐಪಿಎಲ್ ಟೂರ್ನಿಯ ಸಲುವಾಗಿ ಬಹುತೇಕ ತಂಡಗಳು ನೂತನ ನಾಯಕನ ಹುಡುಕಾಟದಲ್ಲಿದ್ದು ಶ್ರೇಯಸ್ ಅಯ್ಯರ್ ಅವರಿಗೆ ಹೆಚ್ಚಿನ ಅವಕಾಶಗಳು ಲಭಿಸಲಿವೆ ಎಂದಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ಪ್ರಗ್ಯಾನ್ ಓಜಾ ಶ್ರೇಯಸ್ ಅಯ್ಯರ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುವ ಇಚ್ಛೆಯಿತ್ತು, ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅದಕ್ಕೆ ಅನುವು ಮಾಡಿಕೊಡದ ಕಾರಣ ತಂಡದಿಂದ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದು ಮುಂದಿನ ಆವೃತ್ತಿಯಲ್ಲಿ ಯಾವುದಾದರೊಂದು ತಂಡಕ್ಕೆ ನಾಯಕನಾಗಿ ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ.

ಶ್ರೇಯಸ್ ಅಯ್ಯರ್ ಈ 4 ತಂಡಗಳಲ್ಲಿ ಯಾವುದಾದರೊಂದು ತಂಡಕ್ಕೆ ನಾಯಕನಾಗಬಹುದು
ಪ್ರಗ್ಯಾನ್ ಓಜಾ ಹೇಳಿದಂತೆ ಶ್ರೇಯಸ್ ಅಯ್ಯರ್ ಈ 4 ತಂಡಗಳಲ್ಲಿ ಯಾವುದಾದರೊಂದು ತಂಡಕ್ಕೆ ನಾಯಕನಾಗುವ ಸಾಧ್ಯತೆಗಳಿವೆ. ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೂತನ ನಾಯಕನ ಹುಡುಕಾಟದಲ್ಲಿದೆ, ಅತ್ತ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ನೂತನ ತಂಡಗಳಾಗಿ ಆಗಮಿಸುತ್ತಿರುವ ಲಕ್ನೋ ಹಾಗೂ ಅಹ್ಮದಾಬಾದ್ ತಂಡಗಳು ಕೂಡ ನಾಯಕನ ಹುಡುಕಾಟದಲ್ಲಿವೆ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಸ್ಪಷ್ಟನೆ ಕೂಡ ಇನ್ನೂ ಸಿಕ್ಕಿಲ್ಲ. ಹೀಗಾಗಿ ಈ 4 ತಂಡಗಳ ಪೈಕಿ ಯಾವುದಾದರೊಂದು ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ದಾಖಲೆ ಬರೆದ ಶ್ರೇಯಸ್ ಅಯ್ಯರ್
ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಶ್ರೇಯಸ್ ಅಯ್ಯರ್ 171 ಎಸೆತಗಳಲ್ಲಿ 105 ರನ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿದ 16ನೇ ಭಾರತೀಯ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications