ವಾರ್ನರ್ ಆಯಿತು ಈಗ ರಶೀದ್ ಖಾನ್ ಮತ್ತು ಎಸ್ಆರ್ಎಚ್ ನಡುವೆ ವೈಮನಸ್ಸು; ಕಾರಣ ವಿಲಿಯಮ್ಸನ್!

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಟಗಾರರ ಮತ್ತು ಫ್ರಾಂಚೈಸಿಗಳ ನಡುವಿನ ವೈಮನಸ್ಸಿಗೆ ಹೆಚ್ಚಾಗಿ ಸಾಕ್ಷಿಯಾಗಿದೆ. ಇಷ್ಟು ವರ್ಷಗಳ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಈ ಆವೃತ್ತಿಯ ರೀತಿ ಎಂದೂ ಸಹ ಫ್ರಾಂಚೈಸಿ ಮತ್ತು ಆಟಗಾರರ ನಡುವೆ ಇಷ್ಟು ದೊಡ್ಡ ಮಟ್ಟದ ವೈಮನಸ್ಸು ಉಂಟಾಗಿಯೇ ಇರಲಿಲ್ಲ. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದ ವೇಳೆ ಸನ್ ರೈಸರ್ಸ್ ಹೈದರಾಬಾದ್ ತಂಡ ಮತ್ತು ಡೇವಿಡ್ ವಾರ್ನರ್ ನಡುವೆ ದೊಡ್ಡ ಮಟ್ಟದ ವೈಮನಸ್ಸು ಉಂಟಾಗಿತ್ತು. ಈ ಕಾರಣದಿಂದಾಗಿಯೇ ಡೇವಿಡ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಅಷ್ಟಕ್ಕೇ ಸುಮ್ಮನಾಗದೇ ಟೂರ್ನಿ ಮಧ್ಯದಲ್ಲಿಯೇ ಡೇವಿಡ್ ವಾರ್ನರ್ ಅವರನ್ನು ತಂಡದಿಂದ ಹೊರ ಹಾಕಿತ್ತು.
ಹೀಗೆ ವಾರ್ನರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರ ನಡುವಿನ ವೈಮನಸ್ಸು ಟೂರ್ನಿ ಮುಗಿದ ನಂತರವೂ ಮುಂದುವರಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹಲವಾರು ಬಾರಿ ಡೇವಿಡ್ ವಾರ್ನರ್ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ತಾನು ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಕಣಕ್ಕಿಳಿಯುವುದಿಲ್ಲ ಎಂಬ ಹೇಳಿಕೆಗಳನ್ನು ನೀಡಿದ್ದಾರೆ. ಹೀಗೆ ಡೇವಿಡ್ ವಾರ್ನರ್ ಅವರನ್ನು ನಡೆಸಿಕೊಂಡ ರೀತಿಗೆ ಭಾರೀ ಟೀಕೆಗೆ ಒಳಗಾಗಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಇದೀಗ ಐಪಿಎಲ್ ರಿಟೆನ್ಷನ್ ಮಾಡಿಕೊಳ್ಳುವಲ್ಲಿ ತೆಗೆದುಕೊಂಡಿರುವ ನಿರ್ಧಾರ ತಂಡದ ಪ್ರಮುಖ ಆಟಗಾರನಾದ ರಶೀದ್ ಖಾನ್ ಮತ್ತು ತಂಡದ ನಡುವೆ ವೈಮನಸ್ಸು ಮೂಡಲು ಕಾರಣವಾಗಿದೆ ಎನ್ನಲಾಗುತ್ತಿದೆ.
ಹೌದು, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ನೂತನ ತಂಡಗಳಾಗಿ ಲಕ್ನೋ ಮತ್ತು ಅಹ್ಮದಾಬಾದ್ ಸೇರ್ಪಡೆಗೊಂಡಿರುವುದರಿಂದ ಟೂರ್ನಿ ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು ನಡೆಯಲಿದೆ. ಹೀಗಾಗಿ ಸದ್ಯ ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳು ಯಾವ ಆಟಗಾರರನ್ನು ತಂಡದಲ್ಲಿಯೇ ಉಳಿಸಿಕೊಳ್ಳಲಿದೆ ಎಂಬ ವರದಿಯನ್ನು ನವೆಂಬರ್ 30ರೊಳಗೆ ಸಲ್ಲಿಸಬೇಕಾಗಿದೆ. ಈ ಕುರಿತಾಗಿ ಈಗಾಗಲೇ ವಿವಿಧ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬ ನಿರ್ಧಾರ ಕೈಗೊಳ್ಳುವಲ್ಲಿ ನಿರತರಾಗಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡ ಈ ವಿಷಯದ ಕುರಿತಾಗಿಯೇ ತಂಡದ ಪ್ರಮುಖ ಆಟಗಾರ ರಶೀದ್ ಖಾನ್ ಜೊತೆ ಈ ಕೆಳಕಂಡಂತೆ ಮನಸ್ತಾಪ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

ಸನ್ ರೈಸರ್ಸ್ ಹೈದರಾಬಾದ್ ಮತ್ತು ರಶೀದ್ ಖಾನ್ ನಡುವಿನ ವೈಮನಸ್ಸಿಗೆ ಕಾರಣವಾಯಿತು ರಿಟೆನ್ಷನ್ ಆದ್ಯತೆ
ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಮತ್ತು ರಶೀದ್ ಖಾನ್ ಈ ಇಬ್ಬರು ಆಟಗಾರರನ್ನು ಉಳಿಸಿಕೊಳ್ಳುವ ಯೋಜನೆಯಲ್ಲಿದೆ. ಹೀಗೆ ಈ ಇಬ್ಬರನ್ನು ಉಳಿಸಿಕೊಳ್ಳಲು ಮುಂದಾಗಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲ ಆದ್ಯತೆಯನ್ನು ಕೇನ್ ವಿಲಿಯಮ್ಸನ್ ಅವರಿಗೆ ನೀಡಿದ್ದು, ದ್ವಿತೀಯ ಆದ್ಯತೆಯನ್ನು ರಶೀದ್ ಖಾನ್ ಅವರಿಗೆ ನೀಡಲಾಗಿದೆ ಎನ್ನಲಾಗುತ್ತಿದೆ. ಹೀಗೆ ಕೇನ್ ವಿಲಿಯಮ್ಸನ್ ಅವರಿಗೆ ಪ್ರಥಮ ಆದ್ಯತೆ ನೀಡಿ ತನಗೆ ದ್ವಿತೀಯ ಆದ್ಯತೆ ನೀಡಿದ್ದರಿಂದಲೇ ರಶೀದ್ ಖಾನ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಡುವೆ ಮನಸ್ತಾಪ ಉಂಟಾಗಿದೆ ಎನ್ನಲಾಗುತ್ತಿದೆ.

ಪ್ರಥಮ ಆದ್ಯತೆ ಪಡೆದುಕೊಂಡವರಿಗೆ ಹೆಚ್ಚು ಹಣ
ಸನ್ ರೈಸರ್ಸ್ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಅವರನ್ನು ಮೊದಲಿಗೆ ಉಳಿಸಿಕೊಳ್ಳಲು ತೀರ್ಮಾನಿಸಿರುವುದರಿಂದ 14 ಕೋಟಿ ಮೊತ್ತವನ್ನು ಕೇನ್ ವಿಲಿಯಮ್ಸನ್ ಪಡೆಯಲಿದ್ದಾರೆ. ಹಾಗೂ ದ್ವಿತೀಯ ಆದ್ಯತೆ ಎಂದು ಪರಿಗಣಿಸಿರುವ ರಶೀದ್ ಖಾನ್ ಅವರಿಗೆ 10 ಕೋಟಿ ಮೊತ್ತ ಸಿಗಲಿದೆ. ಆದರೆ ರಶೀದ್ ಖಾನ್ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಪ್ರಥಮ ಆದ್ಯತೆ ಪಡೆದುಕೊಳ್ಳಬೇಕು ಎಂದು ಪಟ್ಟು ಹಿಡಿದಿರುವ ಕಾರಣ ಈ ವೈಮನಸ್ಸು ಉಂಟಾಗಿದೆ. ಕೇನ್ ವಿಲಿಯಮ್ಸನ್ ಮತ್ತು ರಶೀದ್ ಖಾನ್ ನಡುವಿನ 4 ಕೋಟಿಯ ಅಂತರ ಇದೀಗ ಸನ್ ರೈಸರ್ಸ್ ಹೈದರಾಬಾದ್ ಪಾಳಯಕ್ಕೆ ತಲೆನೋವಾಗಿ ಪರಿಣಮಿಸಿದೆ.

ರಿಟೆನ್ಷನ್ ಪಾಲಿಸಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು ನಾಲ್ಕನೇ ಆಟಗಾರರಿಗೆ ಎಷ್ಟು ಹಣ ಸಿಗಲಿದೆ?
ಒಂದುವೇಳೆ ಫ್ರಾಂಚೈಸಿಯೊಂದು 4 ಆಟಗಾರರನ್ನು ಉಳಿಸಿಕೊಂಡರೆ 42 ಕೋಟಿ ಖರ್ಚು ಮಾಡಬಹುದಾಗಿದೆ. ಈ ಮೂಲಕ ಫ್ರಾಂಚೈಸಿಯೊಂದು ಉಳಿಸಿಕೊಳ್ಳಲಿರುವ ಪ್ರಥಮ ಆಟಗಾರನಿಗೆ 16 ಕೋಟಿ, ದ್ವಿತೀಯ ಆಟಗಾರನಿಗೆ 12 ಕೋಟಿ, ಮೂರನೇ ಆಟಗಾರನಿಗೆ 8 ಕೋಟಿ ಮತ್ತು ನಾಲ್ಕನೇ ಆಟಗಾರನಿಗೆ 6 ಕೋಟಿ ನೀಡಬೇಕಾಗುತ್ತದೆ.
ಒಂದುವೇಳೆ ಫ್ರಾಂಚೈಸಿಯೊಂದು 3 ಆಟಗಾರರನ್ನು ಉಳಿಸಿಕೊಂಡರೆ 33 ಕೋಟಿ ಖರ್ಚು ಮಾಡಬಹುದಾಗಿದೆ. ಈ ಮೂಲಕ ಫ್ರಾಂಚೈಸಿಯೊಂದು ಉಳಿಸಿಕೊಳ್ಳಲಿರುವ ಪ್ರಥಮ ಆಟಗಾರನಿಗೆ 15 ಕೋಟಿ, ದ್ವಿತೀಯ ಆಟಗಾರನಿಗೆ 11 ಕೋಟಿ ಮತ್ತು ಮೂರನೇ ಆಟಗಾರನಿಗೆ 7 ಕೋಟಿ ನೀಡಬೇಕಾಗುತ್ತದೆ.
ಒಂದುವೇಳೆ ಫ್ರಾಂಚೈಸಿಯೊಂದು ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 24 ಕೋಟಿ ಖರ್ಚು ಮಾಡಬಹುದಾಗಿದೆ. ಈ ಮೂಲಕ ಫ್ರಾಂಚೈಸಿಯೊಂದು ಉಳಿಸಿಕೊಳ್ಳಲಿರುವ ಪ್ರಥಮ ಆಟಗಾರನಿಗೆ 14 ಕೋಟಿ ಮತ್ತು ದ್ವಿತೀಯ ಆಟಗಾರನಿಗೆ 10 ಕೋಟಿ ನೀಡಬೇಕಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications