
ಕ್ರಿಕೆಟ್ ಅನ್ನು ಮನರಂಜನೆಗಾಗಿ, ಕ್ರೇಜ್ಗಾಗಿ, ಅಭಿಮಾನಿಕ್ಕಾಗಿ ನೋಡುವ ಅಪಾರವಾದ ಕ್ರಿಕೆಟ್ ಅಭಿಮಾನಿ ಬಳಗವಿದೆ. ಅಲ್ಲದೇ ಟೈಮ್ ಪಾಸ್ಗೂ ಸಹ ಕ್ರಿಕೆಟ್ ವೀಕ್ಷಿಸುವವರಿದ್ದಾರೆ. ಆದರೆ ಕೆಲ ವ್ಯಕ್ತಿಗಳು ಮಾತ್ರ ಕ್ರಿಕೆಟ್ ಮೇಲಿನ ತಮ್ಮ ಅಭಿಮಾನವನ್ನು ಬೆಟ್ಟಿಂಗ್ ಆಡುವ ಮೂಲಕವೂ ಆನಂದಿಸುತ್ತಾರೆ.
ಬೆಟ್ಟಿಂಗ್ ಕಟ್ಟಿಕೊಂಡು ಮ್ಯಾಚ್ ನೋಡಿದರೆ ಕಿಕ್ ಎನ್ನುವ ಬೆಟ್ಟಿಂಗ್ ಪ್ರಿಯರು ಕೆಲವೊಮ್ಮೆ ಅತಿರೇಖ ಎನಿಸುವಷ್ಟು ಬೆಟ್ಟಿಂಗ್ಗೆ ಶರಣಾಗಿಬಿಟ್ಟಿರುತ್ತಾರೆ. ಸಾವಿರಾರು, ಲಕ್ಷಾಂತರ ರೂಪಾಯಿಗಳನ್ನು ಬೆಟ್ಟಿಂಗ್ಗೆ ಸುರಿದು ಜೀವನ ಹಾಳು ಮಾಡಿಕೊಂಡ, ಸಾವಿಗೆ ಶರಣಾದ ಸಾಕಷ್ಟು ಮಂದಿಯ ಉದಾಹರಣೆಗಳಿವೆ.
ಇನ್ನು ಭಾರತದಲ್ಲಿ ಬೆಟ್ಟಿಂಗ್ ಆಡುವುದನ್ನು ಬ್ಯಾನ್ ಮಾಡಲಾಗಿದೆ. ಆದರೂ ಸುಲಭವಾಗಿ ಬೆಟ್ಟಿಂಗ್ ಪ್ರಿಯರು ಯಾವ ಅಡ್ಡಿ ಆತಂಕವೂ ಇಲ್ಲದೇ ಬೆಟ್ಟಿಂಗ್ ಆಡಲು ಹಲವಾರು ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ಗಳು ಲಭ್ಯವಿವೆ. ಹೌದು, ಆನ್ಲೈನ್ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡಲು ಹಲವಾರು ಅಪ್ಲಿಕೇಶನ್ಗಳಿವೆ.
ವಿಪರ್ಯಾಸವೆಂದರೆ ಭಾರತದ ಬಹುತೇಕ ಎಲ್ಲಾ ಸ್ಟಾರ್ ಪ್ಲೇಯರ್ಸ್ ಈ ಅಪ್ಲಿಕೇಶನ್ಗಳನ್ನು ಪ್ರಚಾರ ಕೂಡ ಮಾಡಿದ್ದಾರೆ. ಹೀಗೆ ಬೆಟ್ಟಿಂಗ್ ನೇರವಾಗಿ ಹಾಗೂ ಕದ್ದುಮುಚ್ಚಿ ಜರುಗುತ್ತಲೇ ಇದ್ದು, ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿರುವುದರಿಂದ ಬೆಟ್ಟಿಂಗ್ ಹಾವಳಿ ಜೋರಾಗಿಯೇ ಇದೆ. ಹೌದು, ಸಾಲು ಸಾಲು ಪಂದ್ಯಗಳು ನಡೆಯುವುದರಿಂದ ದಿನನಿತ್ಯ ಬೆಟ್ಟಿಂಗ್ ನಡೆಯುತ್ತಲೇ ಇದೆ. ಅನೇಕರು ಬೆಟ್ಟಿಂಗ್ ಆಡಿ ಹಣ ಕಳೆದುಕೊಂಡು ದಿವಾಳಿಗಳಾಗುತ್ತಲೇ ಇದ್ದಾರೆ.

ಇದೇ ರೀತಿ ಬೆಟ್ಟಿಂಗ್ ಚಟಕ್ಕೆ ಬಿದ್ದ ವ್ಯಕ್ತಿಯೋರ್ವ ಸಾಲು ಸಾಲು ಸೋಲು ಕಂಡ ಬಳಿಕ ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಯೋಜನೆ ಹಾಕಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಮೊಹಮ್ಮದ್ ಸಿರಾಜ್ ಬಳಿ ಸಲಹೆ ಕೇಳಿದ್ದಾನೆ. ಹೌದು, ಡ್ರೈವರ್ ವೃತ್ತಿಯನ್ನು ಮಾಡಿ ಬದುಕುತ್ತಿದ್ದ ವ್ಯಕ್ತಿಯೊಬ್ಬ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡ ಕಾರಣ ತನಗೆ ಸಹಾಯವನ್ನು ಕೋರಿ ಮೊಹಮ್ಮದ್ ಸಿರಾಜ್ಗೆ ವಾಟ್ಸಪ್ ಮೂಲಕ ಸಂದೇಶ ಕೇಳಿದ್ದಾನೆ.
ಟೂರ್ನಿಯ ಒಳಗೆ ಏನೆಲ್ಲಾ ನಡೆಯುತ್ತೆ, ತಂಡದೊಳಗಿನ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮೊಹಮ್ಮದ್ ಸಿರಾಜ್ ಬಳಿ ಆತ ಮನವಿ ಮಾಡಿಕೊಂಡಿದ್ದಾನೆ. ಈ ಸಂದೇಶ ನೋಡಿದ ಕೂಡಲೇ ಮೊಹಮ್ಮದ್ ಸಿರಾಜ್ ಬಿಸಿಸಿಐ ಆಂಟಿ ಕರಪ್ಷನ್ ಬೋರ್ಡ್ಗೆ ದೂರು ನೀಡಿದ್ದಾರೆ. ಈ ಮೂಲಕ ಬೆಟ್ಟಿಂಗ್ನಲ್ಲಿ ಗೆಲ್ಲಲು ಸಲಹೆ ಕೇಳಿ ಮೊಹಮ್ಮದ್ ಸಿರಾಜ್ಗೆ ವಾಟ್ಸಪ್ ಸಂದೇಶ ಕಳುಹಿಸಿದ ವ್ಯಕ್ತಿ ಪೊಲೀಸರ ಅತಿಥಿಯಾಗುವುದು ಖಚಿತ.
ಇನ್ನು ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಟ್ರೋಲಿಗರು ಭಿನ್ನ ವಿಭಿನ್ನವಾಗಿ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೇ ಅನೇಕರು ಮೊಹಮ್ಮದ್ ಸಿರಾಜ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.