
ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತ ಮುಕ್ತಾಯಗೊಂಡಿದ್ದು, ಸದ್ಯ ಪ್ಲೇಆಫ್ ಸುತ್ತಿನ ಹಣಾಹಣಿಗಳು ಆರಂಭಗೊಂಡಿವೆ. ಲೀಗ್ ಹಂತದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಟಾಪ್ 4 ಸ್ಥಾನ ಪಡೆದುಕೊಂಡ ಗುಜರಾತ್ ಟೈಟನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್ಗೆ ಲಗ್ಗೆ ಇಟ್ಟಿವೆ.
ಈ ಪೈಕಿ ಟಾಪ್ 2 ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ನಿನ್ನೆ ನಡೆದ ( ಮೇ 23 ) ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಸೆಣಸಾಡಿದವು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ರನ್ಗಳ ಅಂತರದಿಂದ ಹಾಲಿ ಚಾಂಪಿಯನ್ಸ್ ತಂಡವನ್ನು ಸೋಲಿಸಿ ನೇರವಾಗಿ ಫೈನಲ್ ಪ್ರವೇಶಿಸಿದೆ.
ಇನ್ನು ಈ ಪಂದ್ಯದಲ್ಲಿ ಸೋಲನ್ನು ಅನುಭವಿಸಿರುವ ಗುಜರಾತ್ ಟೈಟನ್ಸ್ ಎರಡನೇ ಕ್ವಾಲಿಫಯರ್ ಆಡಲಿದ್ದು, ಇಂದು (ಮೇ 24 ) ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಗೆಲ್ಲಲಿರುವ ತಂಡವನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಗೆಲ್ಲಲಿರುವ ತಂಡ ಎರಡನೇ ಕ್ವಾಲಿಫಯರ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದರೆ, ಸೋಲಲಿರುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಲ್ಲಿ ಇದ್ದು, ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಹೀಗೆ ಕುತೂಹಲ ಹುಟ್ಟಿಸಿರುವ ಈ ಪಂದ್ಯದ ಬಗ್ಗೆ ಚರ್ಚೆಗಳು ಆರಂಭವಾಗಿದ್ದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಸಹ ಈ ಪಂದ್ಯದ ಬಗ್ಗೆ ಮಾತನಾಡಿದ್ದಾರೆ ಹಾಗೂ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಎಲ್ಲಿ ಎಡವಲಿದೆ ಎಂಬುದನ್ನು ತಿಳಿಸಿದ್ದಾರೆ.
"ನೀವು ಎರಡೂ ತಂಡಗಳಲ್ಲಿರುವ ಆಟಗಾರರನ್ನು ಗಣನೆಗೆ ತೆಗೆದುಕೊಂಡರೆ ಮುಂಬೈ ಇಂಡಿಯನ್ಸ್ ತಂಡ ಗೆಲ್ಲುವ ತಂಡ ಎಂದು ಹೇಳಬಹುದು. ಅದೂ ಸಹ ಪಂದ್ಯ ಲಕ್ನೋದ ಏಕನ ಹಾಗೂ ಚೆನ್ನೈನ ಚೆಪಾಕ್ ಕ್ರೀಡಾಂಗಣಗಳನ್ನು ಬಿಟ್ಟು ಬೇರೆಡೆ ನಡೆದಾಗ ಮಾತ್ರ. ಇದಕ್ಕೆ ಕಾರಣ ಮುಂಬೈ ಇಂಡಿಯನ್ಸ್ ಅಂತಹ ಬ್ಯಾಟಿಂಗ್ ಲೈನ್ಅಪ್ ಅನ್ನು ಹೊಂದಿದೆ. ರೋಹಿತ್ ಶರ್ಮಾ, ಇಶಾನ್ ಕಿಶನ್, ಕೆಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೇಹಲ್ ವದೆರಾ/ತಿಲಕ್ ವರ್ಮಾ ಹಾಗೂ ಟಿಮ್ ಡೇವಿಡ್ ಈ ಎಲ್ಲರೂ ಸಹ ಹಿಟ್ಟರ್ಗಳೇ. ಇವರು ನೆಲಕಚ್ಚಿ ನಿಂತರೆ ತಂಡ 200 ರನ್ ಬಾರಿಸುತ್ತದೆ. ಆದರೆ ಮುಂಬೈ ತಂಡದ ಸಮಸ್ಯೆ ಲಕ್ನೋ ತಂಡವಲ್ಲ. ಬದಲಾಗಿ ಚೆನ್ನೈನ ಎಂಎ ಚಿದಂಬರಂ ಪಿಚ್" ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.
ಈ ಮೂಲಕ ಬ್ಯಾಟ್ಸ್ಮನ್ ಸ್ನೇಹಿ ಪಿಚ್ಗಳಲ್ಲಿ ಅಬ್ಬರಿಸುವ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ಮನ್ಗಳು ಬೌಲಿಂಗ್ಗೆ ಹೆಚ್ಚು ಸಹಕರಿಸುವ ಪಿಚ್ಗಳಲ್ಲಿ ಆಡುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಈ ಪಿಚ್ ಮುಂಬೈ ಇಂಡಿಯನ್ಸ್ ಸೋಲಿಗೆ ಕಾರಣವಾಗಬಹುದು ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.