
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಹೃದಯದಲ್ಲಿ ಎಬಿ ಡಿವಿಲಿಯರ್ಸ್ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಕೂಡ ಎಬಿ ಡಿವಿಲಿಯರ್ಸ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಶಕಗಳ ಕಾಲ ತಮ್ಮ 360 ಡಿಗ್ರಿ ಬ್ಯಾಟಿಂಗ್ನಿಂದ ಅಭಿಮಾನಿಗಳನ್ನು ರಂಜಿಸಿದ ಎಬಿಡಿ 2021ರ ಐಪಿಎಲ್ ನಂತರ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
ಆರ್ ಸಿಬಿ ತಂಡದ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ಗೆ ಫ್ರಾಂಚೈಸಿ ಹಾಲ್ ಆಫ್ ಫೇಮ್ ನೀಡಿ ಗೌರವಿಸಿದೆ. ಮಾರ್ಚ್ 26ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಮತ್ತೆ ಒಂದಾಗಿದ್ದರು.
ಎಬಿ ಡಿವಿಲಿಯರ್ಸ್ ಭಾರತದ ಜೊತೆ ಅದರಲ್ಲೂ ಬೆಂಗಳೂರಿನ ಜೊತೆ ವಿಶೇಷ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಇಲ್ಲಿನ ಜನ ಕೂಡ ಎಬಿಡಿ ಅವರನ್ನು ಅಷ್ಟೇ ಅಭಿಮಾನಿಸಿದ್ದಾರೆ. ಹಾಲ್ ಆಫ್ ಫೇಮ್ ಪಡೆದ ನಂತರ ಎಬಿ ಡಿವಿಲಿಯರ್ಸ್ ತಮ್ಮ ಮಾಜಿ ತಂಡಕ್ಕೆ, ಅಭಿಮಾನಿಗಳಿಗೆ, ವಿರಾಟ್ ಕೊಹ್ಲಿ ಕುರಿತು ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಹೃದಯ ತುಂಬಿ ಬಂದಿತು
ಇನ್ಸ್ಟಾಗ್ರಾಂನಲ್ಲಿ ದೀರ್ಘವಾದ ಸಂದೇಶ ಹಂಚಿಕೊಂಡಿರುವ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಎಬಿಡಿ ಹಂಚಿಕೊಂಡ ಭಾವನಾತ್ಮಕ ಸಂದೇಶದ ಕನ್ನಡ ಅನುವಾದ ಇಲ್ಲಿದೆ.
ಮಾರ್ಚ್ 26, 2023ರಂದು ಕ್ರಿಸ್ ಗೇಲ್ ಮತ್ತು ನಾನು ಆರ್ ಸಿಬಿ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡೆವು. ನಮ್ಮ ಜೆರ್ಸಿ ಸಂಖ್ಯೆಗಳು ಶಾಶ್ವತವಾಗಿ ನಿವೃತ್ತಿಗೊಂಡವು. ನನ್ನ ಹೆಂಡತಿ, ಇಬ್ಬರು ಮಕ್ಕಳು ಮತ್ತು ನಮ್ಮ ಪುಟ್ಟ ಮಗಳು ಆರ್ ಸಿಬಿ ಸ್ಟೇಜ್ಗೆ ಪ್ರವೇಶಿಸಲು ಮೆಟ್ಟಿಲುಗಳ ಮೇಲೆ ನಡೆದಾಗ ನನ್ನ ಹೃದಯ ತುಂಬಿ ಬಂದಿತು. ನಾನು ಅಲ್ಲಿ ಹಲವು ಬಾರಿ ನಡೆದಿದ್ದೇನೆ, ಆದರೆ, ಈ ಬಾರಿ ಅಲ್ಲಿ ನಡೆಯುತ್ತಿರುವುದು ವಿಭಿನ್ನವಾಗಿತ್ತು.

ಕಿಕ್ಕಿರಿದು ತುಂಬಿದ್ದ ಚಿನ್ನಸ್ವಾಮಿಯ ಕ್ರೀಡಾಂಗಣದ ನಮ್ಮ ಡ್ರೆಸ್ಸಿಂಗ್ ರೂಮಿನ ಬಾಲ್ಕನಿಗೆ ಕಾಲಿಟ್ಟಾಗ ನನ್ನ ಕಣ್ಣಲ್ಲಿ ನೀರು ತುಂಬಿತ್ತು. ಎಬಿಡಿ ಎಬಿಡಿ ಎಂದು ಕೂಗುವುದನ್ನು ಕೇಳುವುದು ಮೊದಲ ಬಾರಿಗೆ ಸೋಲಿಸಬಹುದೆಂದು ನಾನು ಎಂದಿಗೂ ಯೋಚಿಸಲಿಲ್ಲ, ಆದರೆ ಈ ಬಾರಿ ವಿಭಿನ್ನವಾಗಿತ್ತು. ಗೆಲುವಿಗಾಗಿ ಹುರಿದುಂಬಿಸಲು ಪ್ರತಿ ಬಾರಿ ಕೂಗುತ್ತಿದ್ದರು, ಆದರೆ ಈ ಬಾರಿ ಅದರಲ್ಲಿ ಬೇರೆಯದ್ದೇ ಭಾವನೆ ಇತ್ತು, ಇದೆಲ್ಲದಕ್ಕೂ ನಾನು ಕೃತಜ್ಞನಾಗಿದ್ದೇನೆ. ಹೆಮ್ಮೆಯ ನಗರ, ಅದ್ಭುತವಾದ ಫ್ರಾಂಚೈಸಿ ಮತ್ತು ತಂಡದ ಪ್ರತಿನಿಧಿಗಳು.
2003ರಿಂದ ನಾನು ಭಾರತದಲ್ಲಿ ಕಳೆದ ಎಲ್ಲಾ ದಿನಗಳ ಯೋಚಿಸುತ್ತಿದ್ದಂತೆ ಹಲವು ನೆನಪುಗಳು ಕಣ್ಮುಂದೆ ಹಾದುಹೋದವು. ನಾನು ಈ ದೇಶ ಮತ್ತು ಜನರೊಂದಿಗೆ ಗಟ್ಟಿಯಾದ ಸಂಬಂಧವನ್ನು ಹೊಂದಿದ್ದೇನೆ. ನಾನು ಎಂದೆಂದಿಗೂ ಕೃತಜ್ಞರಾಗಿರುತ್ತೇನೆ!
ಧನ್ಯವಾದಗಳು ತಂಡದ ಸಹ ಆಟಗಾರರಿಗೆ, ವಿಶೇಷವಾಗಿ ವಿರಾಟ್, ಧನ್ಯವಾದಗಳು ಆರ್ ಸಿಬಿ, ಧನ್ಯವಾದಗಳು ಬೆಂಗಳೂರು.
ಎಬಿಡಿ ಹಂಚಿಕೊಂಡ ಭಾವನಾತ್ಮಕ ಸಂದೇಶ ಸದ್ಯ ವೈರಲ್ ಆಗಿದೆ. ಅಭಿಮಾನಿಗಳು ಕೂಡ ಅವರ ಆಟವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಈ ಬಾರಿ ತವರಿನಲ್ಲಿ ಆರ್ ಸಿಬಿ ಪಂದ್ಯಗಳನ್ನು ಆಡಲಿದ್ದು, ಅಭಿಮಾನಿಗಳು ಎಬಿಡಿ ಆಟವನ್ನು ನೋಡುವ ಅದೃಷ್ಟವನ್ನು ಕಳೆದುಕೊಂಡಿದ್ದಾರೆ. ಇಷ್ಟು ದಿನ ಆಡಿ ನಮ್ಮನ್ನು ರಂಜಿಸಿದ್ದಕ್ಕೆ ಥ್ಯಾಂಕ್ಯೂ ಎಬಿಡಿ ಎಂದು ಹೇಳಿದ್ದಾರೆ.