ಚಾಂಪಿಯನ್ ಪಟ್ಟಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಟೂರ್ನಿಯುದ್ದಕ್ಕೂ ಗಮನಸೆಳೆಯುವಂತಾ ಪ್ರದರ್ಶನ ನೀಡಿದ ಆಟಗಾರರ ಪೈಕಿ ಶಿವಂ ದುಬೆ ಕೂಡ ಒಬ್ಬರು. ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ದುಬೆ ಸಾಕಷ್ಟು ಪಂದ್ಯಗಳಲ್ಲಿ ತಂಡದ ಮೇಲುಗೈಗೆ ಕಾರಣವಾಗಿದ್ದಾರೆ. ಸಿಎಸ್ಕೆ ತಂಡ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ದುಬೆ ಹೇಳಿಕೆ ನೀಡಿದ್ದು ಎಂಎಸ್ ಧೋನಿ ತಂಡದ ನಾಯಕನಾಗಿ ಮುಂದುವರಿಯುವ ಅಗತ್ಯ ತಮ್ಮಂತಾ ಯುವ ಆಟಗಾರರಿಗೆ ಇದೆ ಎಂದಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ಗೆ ಶಿವಂ ದುಬೆ ಪ್ರತಿಕ್ರಿಯೆ ನೀಡಿದ್ದು ಈ ಸಂದರ್ಭದಲ್ಲಿ ಧೋನಿ ನಾಯಕನಾಗಿ ತಂಡದಲ್ಲಿ ಮುಂದುವರಿಯುವ ವಿಚಾರವಾಗಿ ತನ್ನ ಅನಿಸಿಕೆ ಹಂಚಿಕೊಂಡಿದ್ದಾರೆ. ಆಟದ ವಿಚಾರಗಳಲ್ಲಿ ಧೋನಿ ತಮ್ಮ ಸ್ಪಷ್ಟತೆಯನ್ನು ನೀಡುತ್ತಾರೆ. ಅವರ ನಾಯಕತ್ವದಲ್ಲಿ ತಂಡ ಬೆಳೆಯುತ್ತದೆ ಎಂದಿದ್ದಾರೆ ಶಿವಂ ದುಬೆ. ಈ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಜಿಟಿ ತಂಡವನ್ನು ಮಣಿಸಿದೆ.

"ಧೋನಿ ಮುಂದಿನ ಆವೃತ್ತಿಯಲ್ಲಿ ಆಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ಅವರ ಅಗತ್ಯವಿದೆ. ಅವರು ತಂಡದಲ್ಲಿದ್ದರೆ ನಾವು ಬೆಳವಣಿಗೆ ಹೊಂದಬಹುದು. ಯೋಚನೆಗಳಲ್ಲಿ ಸ್ಪಷ್ಟತೆಯನ್ನು ನಾನು ಮಾಹಿ ಅವರಿಂದ ಕಲಿಯುತ್ತಿದ್ದೇನೆ" ಎಂದಿದ್ದಾರೆ ಶಿವಂ ದುಬೆ. ಇನ್ನು ನಾಯಕ ಧೋನಿ ತನಗೆ ತಂಡದಲ್ಲಿ ನೀಡಿರುವ ಪಾತ್ರವನ್ನು ಸ್ಪಷ್ಟವಾಗಿ ತಿಳಿಸಿದ್ದರು ಎಂದ ಅವರು ರನ್ರೇಟ್ ಹೆಚ್ಚಿಸುವುದು ತನ್ನ ಜವಾಬ್ಧಾರಿಯಾಗಿತ್ತು ಎಂದಿದ್ದಾರೆ.
"ನನ್ನ ಜವಾಬ್ಧಾರಿ ಏನು ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿದ್ದರು. ರನ್ರೇಟ್ ಹೆಚ್ಚಿಸುವುದು ನನ್ನ ಮೇಲಿದ್ದ ಜವಾಬ್ಧಾರಿಯಾಗಿತ್ತು. ಬೇಗನೆ ಔಟಾದರೂ ಪರವಾಗಿಲ್ಲ ನೀಡಿದ ಕರ್ತವ್ಯವನ್ನು ಪೂರ್ಣಗೊಳಿಸುವುದು ನನ್ನ ಜವಾಬ್ಧಾರಿಯಾಗಿತ್ತು. ಇದನ್ನು ಅವರು ಸ್ಪಷ್ಟವಾಗಿ ತಿಳಿಸಿದ್ದರು" ಎಂದಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಗುಜರಾತ್ ಟೈಟನ್ಸ್ ತಂಡ ಸಾಯಿ ಸುದರ್ಶನ್ ಅವರ 96 ರನ್ಗಳ ಕೊಡುಗೆಯ ಕಾಣದಿಂದಾಗಿ 214 ರನ್ಗಳನ್ನು ಕಲೆಹಾಕಿತು. ಮೊದಲ ಇನ್ನಿಂಗ್ಸ್ ಮಳೆ ಬಂದ ಕಾರಣ 15 ಓವರ್ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 171 ರನ್ಗಳನ್ನು ಗಳಿಸುವ ಗುರಿ ನೀಡಲಾಯಿತು.
ಈ ಪಂದ್ಯದಲ್ಲಿ ಕೊನೆಯ ಎರಡು ಎಸೆತದಲ್ಲಿ 10 ರನ್ಗಳ್ನನು ಗಳಿಸುವ ಸವಾಲು ಚೆನ್ನೈ ಸೂಪರ್ ಕಿಂಗ್ಸ್ ಮುಂದಿತ್ತು. ಮೋಹಿತ್ ಶರ್ಮಾ ಎಸೆದ 5ನೇ ಎಸೆತವನ್ನು ಸಿಕ್ಸರ್ಗೆ ಅಟ್ಟಿದ್ದ ಜಡೇಜಾ ಕೊನೆಯ ಎಸೆತವನ್ನು ಬೌಂಡಿರಿಗೆ ಅಟ್ಟುವಲ್ಲಿ ಯಶಸ್ವಿಯಾದರು. ಈ ಮೂಲಕ ಸಿಎಸ್ಕೆ ಐದನೇ ಬಾರಿಗೆ ಟ್ರೋಫಿ ಗೆಲ್ಲಲು ಸಾಧ್ಯವಾಯಿತು. ಸಿಎಸ್ಕೆ ಪರವಾಗಿ ಫೈನಲ್ ಪಂದ್ಯದಲ್ಲಿ ಶಿವಂ ದುಬೆ, ಡೆವೋನ್ ಕಾನ್ವೆ ಹಾಗೂ ಋತುರಾಜ್ ಗಾಯಕ್ವಾಡ್ ಅವರಿಂದಲೂ ಮಹತ್ವದ ಕೊಡುಗೆ ಬಂದಿತು.