
ಮೇ 1ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೇ ಅತಿಹೆಚ್ಚು ಚರ್ಚೆಗೀಡಾದ ಪಂದ್ಯವೆನಿಸಿಕೊಂಡಿದೆ.
ಸಾಮಾಜಿಕ ಜಾಲತಾಣ, ಸುದ್ದಿ ವಾಹಿನಿ ಹಾಗೂ ವೆಬ್ ತಾಣಗಳಲ್ಲಿ ಈ ಪಂದ್ಯದ ಕುರಿತಾಗಿಯೇ ಹೆಚ್ಚು ಸುದ್ದಿಗಳು ಹರಿದಾಡುತ್ತಿವೆ. ಇಷ್ಟರ ಮಟ್ಟಿಗೆ ಸುದ್ದಿಗಳು ಹರಿದಾಡಲು ಕಾರಣ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಹಾಗೂ ಆಟಗಾರರಾದ ನವೀನ್ ಉಲ್ ಹಕ್, ಅಮಿತ್ ಮಿಶ್ರಾ ಜತೆ ನಡೆಸಿದ ಜಗಳ ಹಾಗೂ ವಾಕ್ಸಮರ.
ಹೌದು, ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಹಾಗೂ ಕೆಲ ಆಟಗಾರರ ಜತೆ ವಿರಾಟ್ ಕೊಹ್ಲಿ ಮೈದಾನದಲ್ಲಿಯೇ ಜಗಳ ಮಾಡಿಕೊಂಡು ವಾಕ್ಸಮರ ನಡೆಸಿದ್ದರು. ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆದ್ದಾಗ ಗೌತಮ್ ಗಂಭೀರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಶ್ ಎಂದು ಸನ್ನೆ ಮಾಡಿದ್ದರು. ಅದೇ ಸೇಡನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾನು ಶ್ ಎನ್ನುವುದಿಲ್ಲ ಬದಲಾಗಿ ನಿಮ್ಮನ್ನೆಲ್ಲಾ ಪ್ರೀತಿಸುತ್ತೇನೆ ಎಂದು ಸನ್ನೆ ಮಾಡುವ ಮೂಲಕ ತೀರಿಸಿಕೊಂಡಿದ್ದರು.
ಹೀಗೆ ವಿರಾಟ್ ಕೊಹ್ಲಿ vs ಗೌತಮ್ ಗಂಭೀರ್ ನಡುವೆ ಮಾತ್ರ ಇದ್ದ ಜಗಳ ನಂತರ ಕೊಹ್ಲಿ ಹಾಗೂ ಕೆಲ ಲಕ್ನೋ ಆಟಗಾರರ ನಡುವೆ ಸಹ ನಡೆಯಿತು. 17ನೇ ಓವರ್ನಲ್ಲಿ ಕಣದಲ್ಲಿದ್ದ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ ಕೈಕೈ ಹಿಡಿದುಕೊಂಡು ವಾಕ್ಸಮರ ನಡೆಸುವ ಮಟ್ಟಕ್ಕೆ ಜಗಳ ನಡೆದಿತ್ತು.
ನವೀನ್ ಉಲ್ ಹಕ್ ಕ್ರೀಸ್ಗೆ ಬ್ಯಾಟ್ ಇಟ್ಟಿದ್ದರೂ ಸಹ ಮೊಹಮ್ಮದ್ ಸಿರಾಜ್ ವಿಕೆಟ್ಗೆ ಚೆಂಡನ್ನು ಎಸೆದು ದಿಟ್ಟಿಸಿ ನೋಡಿದ್ದರ ಪರಿಣಾಮ ನವೀನ್ ಉಲ್ ಹಕ್ ಜಗಳಕ್ಕೆ ಮುಂದಾಗಿದ್ದರು. ಈ ಸಮಯದಲ್ಲಿ ಕೊಹ್ಲಿ ಮಧ್ಯ ಪ್ರವೇಶಿಸಿದ ಕಾರಣ ಕೊಹ್ಲಿ ಹಾಗೂ ನವೀನ್ ನಡುವೆ ಜಗಳ ತೀವ್ರಗೊಂಡಿತ್ತು. ಇನ್ನು ಪಂದ್ಯ ಮುಗಿದ ಬಳಿಕ ಶೇಕ್ ಹ್ಯಾಂಡ್ ಮಾಡುವ ಸಂದರ್ಭದಲ್ಲಿಯೂ ಸಹ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಜಗಳ ನಡೆದಿತ್ತು.
ಹೀಗೆ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಜಗಳದಿಂದ ವಿವಾದಕ್ಕೆ ಒಳಗಾಗಿದೆ. ಹೀಗೆ ಜಗಳವಾದ ಬಳಿಕ ಯಾರನ್ನೂ ದ್ವೇಷಿಸಬೇಡಿ, ಎಲ್ಲರನ್ನೂ ಪ್ರೀತಿಸಿ ಎಂದು ಪೋಸ್ಟ್ ಹಂಚಿಕೊಂಡಿದ್ದ ಲಕ್ನೋ ಸೂಪರ್ ಜೈಂಟ್ಸ್ ಇದೀಗ ಪರೋಕ್ಷವಾಗಿ ವಿರಾಟ್ ಕೊಹ್ಲಿಯನ್ನು ಕೆಣಕಿದೆ.
ಹೌದು, ನಿನ್ನೆ ( ಮೇ 3 ) ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಪಂದ್ಯ ನಡೆಯಿತು. ಪಂದ್ಯ ಮಳೆಯ ಕಾರಣದಿಂದಾಗಿ ರದ್ದಾಗಿ ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕ ಲಭಿಸಿತು. ಹೀಗೆ ಪಂದ್ಯ ಮುಕ್ತಾಯಗೊಂಡ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರೆಲ್ಲಾ ಎಂ ಎಸ್ ಧೋನಿಯನ್ನು ಭೇಟಿ ಮಾಡಿದ್ದಾರೆ.
ಈ ಸಂದರ್ಭದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಲಕ್ನೋ ಸೂಪರ್ ಜೈಂಟ್ಸ್ "ಎಲ್ಲರೂ ಪಂದ್ಯ ಮುಗಿದ ಬಳಿಕ ಗೋಟ್ ( ಗ್ರೇಟೆಸ್ಟ್ ಆಫ್ ಆಲ್ ಟೈಮ್ ) ಅನ್ನು ಭೇಟಿಯಾಗಲು ಬಯಸುತ್ತಾರೆ" ಎಂದು ಬರೆದುಕೊಂಡಿದೆ. ಅದರಲ್ಲಿಯೂ ವಿರಾಟ್ ಕೊಹ್ಲಿ ಕೆಂಗಣ್ಣಿಗೆ ಗುರಿಯಾಗಿದ್ದ ನವೀನ್ ಉಲ್ ಹಕ್ ಹಾಗೂ ಅವೇಶ್ ಖಾನ್ ಧೋನಿ ಜತೆಗಿರುವ ಫೋಟೊಗಳನ್ನು ಹಂಚಿಕೊಂಡಿದ್ದು, ಪರೋಕ್ಷವಾಗಿ ವಿರಾಟ್ ಕೊಹ್ಲಿ ಕಾಲೆಳೆದು ಕೆಣಕಿದೆ.
ಮೊನ್ನೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ಮುಗಿದ ಬಳಿಕ ಪರಿಸ್ಥಿತಿ ಹದಗೆಟ್ಟಿದ್ದ ಕಾರಣ ಯಾರೂ ಸಹ ಕೊಹ್ಲಿ ಬಳಿ ಬಂದು ಮಾತನಾಡಿರಲಿಲ್ಲ. ಅದರಲ್ಲಿಯೂ ಕೆಎಲ್ ರಾಹುಲ್ ನವೀನ್ ಉಲ್ ಹಕ್ ಅನ್ನು ಕೊಹ್ಲಿ ಜತೆ ಮಾತನಾಡಲು ಕರೆದಾಗ ನಿರಾಕರಿಸಿ ಕೋಪದಿಂದ ಹೆಜ್ಜೆ ಹಾಕಿದ್ದರು. ಹೀಗಾಗಿ ಬೇಕಂತಲೇ ಲಕ್ನೋ ಸೂಪರ್ ಜೈಂಟ್ಸ್ ಈ ಪೋಸ್ಟ್ ಹಂಚಿಕೊಂಡಿರುವುದನ್ನು ಅರಿಯಬಹುದಾಗಿದೆ.