ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶುಕ್ರವಾರ ಈ ಬಾರಿಯ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ ನಾಲ್ಕನೇ ಗೆಲುವು ಸಾಧಿಸಿದೆ. ಈ ಮೂಲಕ ಸಿಎಸ್ಕೆ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ ಸಿಎಸ್ಕೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ.
ಇನ್ನು ಈ ಪಂದ್ಯದಲ್ಲಿ ಆರಂಭದಲ್ಲಿ ಬೌಲಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ಸಿಎಸ್ಕೆ ತಂಡದ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಬೌಲಿಂಗ್ ಪ್ರದರ್ಶನದ ಬಗ್ಗೆ ಹರ್ಭಜನ್ ಸಿಂಗ್ ವಿಶೇಷ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ. ರವೀಂದ್ರ ಜಡೇಜಾ ಅವರ ಈ ಬೌಲಿಂಗ್ ಯಾಳಿ ಒಂದೇ ಒಂದು ಕೆಟ್ಟ ಎಸೆತದಿಂದ ಕೂಡಿರಲಿಲ್ಲ ಎಂದಿದ್ದಾರೆ ಹರ್ಭಜನ್ ಸಿಂಗ್.

ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದು ಶ್ರೇಷ್ಠ ಪ್ರದರ್ಶನ ನೀಡಿದರು. ಅಭಿಶೇಕ್ ಶರ್ಮಾ, ರಾಹುಲ್ ತ್ರಿಪಾಠಿ ಹಾಗೂ ಮಯಾಂಕ್ ಅಗರ್ವಾಲ್ ವಿಕೆಟ್ ಪಡೆದು ಅಬ್ಬರಿಸಿದರು ರವೀಂದ್ರ ಜಡೇಜಾ. ತಮ್ಮ ನಾಲ್ಕು ಓವರ್ಗಳ ಬೌಲಿಂಗ್ ದಾಳಿಯಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ ರವೀಂದ್ರ ಜಡೇಜಾ. ಈ ಬೌಲಿಂಗ್ ಪ್ರದರ್ಶನಕ್ಕೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
"ರವೀಂದ್ರ ಜಡೇಜಾ ಇಂದು ಅದ್ಭುತವಾದ ಲಯದಲ್ಲಿದ್ದರು.ಅವರು ಕನಿಷ್ಠ ಒಂದು ಕೆಟ್ಟ ಎಸೆತವನ್ನು ಬೌಲಿಂಗ್ ಮಾಡಲಿಲ್ಲ. ಅವರ ಲೈನ್ ಹಾಗೂ ಲೆಂತ್ ಅದ್ಭುತವಾಗಿತ್ತು. ಹಾಗಾಗಿ ಬ್ಯಾಟರ್ಗಳು ರನ್ಗಳಿಸಬೇಕಿದ್ದರೆ ಏನಾದರೂ ಮಾಡಲೇಬೇಕಿತ್ತು. ಅವರು ರನ್ ಬಿಟ್ಟುಕೊಡದ ಕಾರಣ ರನ್ಗಾಗಿ ಕೆಲ ಹಪಡೆತಗಳನ್ನು ಬಾರಿಸಬೇಕಾಗಿತ್ತು. ಈ ಸಂದರ್ಭದಲ್ಲಿ ಅವರು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು" ಎಂದಿದ್ದಾರೆ ಹರ್ಭಜನ್ ಸಿಂಗ್.
ಇನ್ನು ಇದೇ ಸಂದರ್ಭದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರರ ಹೊಡೆತಗಳ ಆಯ್ಕೆ ಉತ್ತಮವಾಗಿರಲಿಲ್ಲ ಎಂಬುದನ್ನು ಕೂಡ ಹರ್ಭಜನ್ ಸಿಂಗ್ ಉಲ್ಲೇಖಿಸಿದ್ದಾರೆ. "ಅವರ ಶಾಟ್ಗಳ ಆಯ್ಕೆ ಕೆಟ್ಟದಾಗಿತ್ತು. ಮಯಾಂಕ್ ಅಗರ್ವಾಲ್ ಬೇಗನೆ ಕ್ರೀಸ್ಗೆ ಇಳಿದಿದ್ದರು. ಅವರು ಹೊರಗೆ ಬಂದು ಹೊಡೆಯುವ ಸೂಚನೆಯನ್ನು ಅದಾಗಲೇ ನೀಡಿದ್ದರು. ಹೀಗಾಗಿ ಬೌಲರ್ಗಳು ಅವರಿಗೆ ಅಗಲವಾದ ಎಸೆತಗಳನ್ನು ಹಾಕಲು ಆರಂಭಿಸಿದರು" ಎಂದಿದ್ದಾರೆ ಹರ್ಭಜನ್ ಸಿಂಗ್.
ಸನ್ರೈಸರ್ಸ್ ಹೈದರಾಬಾದ್ ನೀಡಿದ ಈ ಸುಲಭ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಮೊದಲ ವಿಕೆಟ್ಗೆ ಋತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೆ ಜೋಡಿ 87 ರನ್ಗಳ ಕೊಡುಗೆ ನೀಡಿದರು. ಋತು 35 ರನ್ಗಳಿಸಿ ರನೌಟ್ ಆಗುವ ಮೂಲಕ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಡೆವೋನ್ ಕಾನ್ವೆ ಕೊನೆಯ ಹಂತದವರೆಗೂ ಕ್ರೀಸ್ನಲ್ಲಿ ನಿಂತು ತಂಡವನ್ನು ಗೆಲವಿನ ದಡ ಸೇರಿಸಿದರು. 57 ಎಸೆತಗಳಲ್ಲಿ 77 ರನ್ಗಳನ್ನು ಬಾರಿಸಿ ಅಜೇಯವಾಗುಳಿದರು. ಈ ಮೂಲಕ ಸಿಎಸ್ಕೆ ತಂಡ ಈ ಪಂದ್ಯದಲ್ಲಿ 7 ವಿಕೆಟ್ಗಳ ಅಂತರದ ಗೆಲುವು ಸಾಧಿಸಿದೆ.