ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಭರವಸೆಯೊಂದಿಗೆ ಆರಂಭಿಸಿದ್ದರೂ ಟೂರ್ನಿ ಅಂತಿಮ ಹಂತದ ವೇಳೆಗೆ ಆರ್ಸಿಬಿ ಸ್ಥಿತಿ ಕಠಿಣವಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ ಹಂತಕ್ಕೇರುವುದು ಆರ್ಸಿಬಿಗೆ ಸದ್ಯ ಕಠಿಣ ಹಾದಿಯಾಗಿ ಪರಿಣಮಿಸಿದೆ. ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಸೋಲು ಅನುಭವಿಸಿರುವುದು ಇದಕ್ಕೆ ಕಾರಣ.
ಆದರೆ ಆರ್ಸಿಬಿ ತಂಡದ ಪ್ಲೇಆಫ್ ಪ್ರವೇಶದ ಅವಕಾಶ ಇನ್ನು ಕೂಡ ಸಂಪೂರ್ಣವಾಗಿ ಮುಚ್ಚಿಹೋಗಿಲ್ಲ. ಉಳಿದಿರುವ ಮೂರು ಪಂದ್ಯಗಳಲ್ಲಿಯೂ ಆರ್ಸಿಬಿ ಗೆಲುವು ಸಾಧಿಸಿದರೆ ಖಂಡಿತವಾಗಿಯೂ ಪ್ಲೇಆಫ್ಗೆ ಪ್ರವೇಶ ಪಡೆಯುವ ಅವಕಾಶ ಆರ್ಸಿಬಿ ತಂಡಕ್ಕಿದೆ. ಹಾಗಾದರೆ ಈ ಮಹತ್ವದ ಘಟ್ಟದಲ್ಲಿ ಆರ್ಸಿಬಿ ಎಡವದೆ ಇರಬೇಕಾದರೆ ಈ ಮೂರು ಅಂಶಗಳಲ್ಲಿ ಯಶಸ್ಸು ಸಾಧಿಸಬೇಕಿರುವುದು ಅನುವಾರ್ಯ.

ಆರ್ಸಿಬಿಗೆ ಬೇಕು ಮಧ್ಯಮ ಕ್ರಮಾಂಕದ ಬಲ
ಆರ್ಸಿಬಿ ತಂಡಕ್ಕೆ ಈ ಬಾರಿಯ ಐಪಿಎಲ್ನಲ್ಲಿ ದೊಡ್ಡ ಹಿನ್ನಡೆಯಾಗಿರುವುದು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗದಿಂದ. ಅಗ್ರ ಕ್ರಮಾಂಕದ ಆಟಗಾರರಾದ ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಗ್ಲೆನ್ ಮ್ಯಾಕ್ಸ್ವೆಲ್ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಉಳಿದ ಬ್ಯಾಟರ್ಗಳು ಜವಾಬ್ಧಾರಿ ವಹಿಸುವುದು ಅನಿವಾರ್ಯ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮಹಿಪಾಲ್ ಲೋಮ್ರೋರ್ ಉತ್ತಮ ಪ್ರದರ್ಶನ ನೀಡಿದ್ದರು. ಅಂಥಾ ಸ್ಥಿರ ಪ್ರದರ್ಶನಗಳು ಬರಬೇಕಿದ್ದು ದಿನೇಶ್ ಕಾರ್ತಿಕ್ ಹಾಗೂ ಉಳಿದ ದಾಂಡಿಗರು ಕೂಡ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.
ಡೆತ್ ಓವರ್ನಲ್ಲಿ ರನ್ ಕಲೆಹಾಕಲು ವಿಫಲ
ಇನ್ನು ಆರ್ಸಿಬಿ ತಂಡಕ್ಕೆ ಮತ್ತೊಂದು ಹಿನ್ನಡೆಯಾಗುತ್ತಿರುವುದು ಡೆತ್ ಓವರ್ಗಳಲ್ಲಿ. ಅದರಲ್ಲೂ ಮೊದಲ ಹತ್ತು ಓವರ್ಗಳಲ್ಲಿ ಗಳಿಸಿದ ಮೊತ್ತವನ್ನು ಕೊನೆಯ ಹಂತದವರೆಗೂ ಮುಂದುವರಿಸಿಕೊಂಡು ಹೋಗುವಲ್ಲಿ ಆರ್ಸಿಬಿ ವಿಫಲವಾಗುತ್ತಿದೆ. ಇನ್ನು ಕಡೆಯ ನಾಲ್ಕೈದು ಓವರ್ಗಳು ಪ್ರತಿ ತಂಡಕ್ಕೂ ಅತ್ಯಂತ ಮಹತ್ವದ್ದಾಗಿರುತ್ತದೆ. ಈ ಓವರ್ಗಳಲ್ಲಿ ಯಶಸ್ಸು ಸಾಧಿಸಿದರೆ ಪಂದ್ಯದ ದಿಕ್ಕನ್ನೇ ಬದಲಾಯಿಸುವ ಅವಕಾಶವಿದೆ. ಆದರೆ ಈ ಬಾರಿಯ ಟೂರ್ನಿಯಲ್ಲಿ ಆರ್ಸಿಬಿ ಯಾವ ಪಂದ್ಯದಲ್ಲಿಯೂ ಡೆತ್ ಓವರ್ನಲ್ಲಿ ಹೇಳಿಕೊಳ್ಳುವಂತಾ ಪ್ರದರ್ಶನ ನಿಡಲು ಸಾಧ್ಯವಾಗಿಯೇ ಇಲ್ಲ. ಈ ಹಂತದಲ್ಲಿ ಆರ್ಸಿಬಿ ದಾಂಡಿಗರಿಂದ ಅಭಿಮಾನಿಗಳು ಅಂಥಾ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದಾರೆ.
ಬೌಲಿಂಗ್ನಲ್ಲಿ ಸಂಘಟಿತ ಪ್ರದರ್ಶನ
ಆರ್ಸಿಬಿ ತಂಡದ ಬೌಲಿಂಗ್ ವಿಭಾಗ ಸಂಘಟಿತ ಪ್ರದರ್ಶನ ನೀಡಿದಾಗೆಲ್ಲಾ ತಂಡ ಅದ್ಭುತವಾಗಿ ಯಶಸ್ಸು ಸಾಧಿಸಿದೆ. ಒಂದಿಬ್ಬರು ಬೌಲರ್ಗಖಳು ಯಶಸ್ಸು ಸಾಧಿಸಿದರೂ ಉಳಿದ ಬೌಲರ್ಗಳು ರನ್ಗಳನ್ನು ಬಿಟ್ಟುಕೊಟ್ಟಲ್ಲಿ ಅಂದುಕೊಂಡ ಫಲಿತಾಂಶ ಪಡೆಯುವುದು ಅಸಾಧ್ಯ. ಹೀಗಾಗಿ ಸಂಘಟಿತ ಪ್ರದರ್ಶನ ತಂಡಕ್ಕಡ ಅಗತ್ಯವಾಗಿದೆ. ಬ್ಯಾಟಿಂಗ್ ಸ್ನೇಹಿ ಪಿಚ್ಗಳಲ್ಲಿ ಬೌಲಿಂಗ್ ನಡೆಸುವುದು ಸವಾಲಾಗಿದ್ದರೂ ತಮ್ಮದೇ ತಪ್ಪುಗಳಿಂದಾಗಿ ಬಿಟ್ಟುಕೊಡುವ ರನ್ಗಳನ್ನು ನಿಯಂತ್ರಿಸಿದರೆ ಯಶಸ್ಸು ದೊರೆಯುವ ಸಾಧ್ಯತೆಯಿದೆ.