
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಿರಾಸೆ ಮೂಡಿಸಿದೆ. ಹೌದು, ಮೂರು ಬಾರಿ ಫೈನಲ್ ಹಂತದವರೆಗೆ ತಲುಪಿ ಕಪ್ ಗೆಲ್ಲಲಾಗದೇ ಹಿನ್ನಡೆ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದೆ.
ಹೌದು, 14 ಅಂಕಗಳನ್ನು ಪಡೆದುಕೊಂಡು ಪ್ಲೇಆಫ್ ಹಂತ ತಲುಪಲು ತನ್ನ ಕೊನೆಯ ಪಂದ್ಯದಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕು ಎಂಬ ಅನಿವಾರ್ಯತೆಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿದು ನಿರ್ಣಾಯಕ ಪಂದ್ಯದಲ್ಲಿ ಸೋತಿದೆ.
ಈ ಪಂದ್ಯದಲ್ಲಿ ಸೋಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಿಂದ ಹೊರಬಿದ್ದಿದೆ ಹಾಗೂ ಅಪಾರವಾದ ಅಭಿಮಾನಿಗಳಿಗೆ ಬೇಸರವನ್ನು ಉಂಟುಮಾಡಿದೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ನಡೆದಿರುವ ಎಲ್ಲಾ ಆವೃತ್ತಿಯಲ್ಲಿಯೂ ಕೇವಲ ಒಂದೇ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ಆಟಗಾರ ಎಂಬ ವಿಶೇಷ ದಾಖಲೆಯನ್ನು ಹೊಂದಿರುವ ವಿರಾಟ್ ಕೊಹ್ಲಿ ಈ ಬಾರಿಯೂ ಕಪ್ ಇಲ್ಲದೇ ಬರಿಗೈನಲ್ಲಿ ಹಿಂದಿರುಗಿದ್ದಾರೆ.
ಟ್ರೋಫಿ ಗೆಲ್ಲದಿದ್ದರೂ ಸಹ ವಿರಾಟ್ ಕೊಹ್ಲಿ ಆಟ ಮಾತ್ರ ಈ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಸಂಪೂರ್ಣ ಸಂತಸವನ್ನು ತಂದಿದೆ ಹಾಗೂ ಟೀಕಾಕಾರರ ಬಾಯಿ ಮುಚ್ಚಿಸಿದೆ. ಕಳೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ನಿನ್ನೆ ( ಮೇ 21 ) ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಅಂತಿಮ ಪಂದ್ಯದಲ್ಲಿಯೂ ಶತಕ ಬಾರಿಸಿ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ದಾಖಲೆಯನ್ನೂ ಸಹ ಬರೆದರು.
ಅಲ್ಲದೇ ಈ ಬಾರಿಯ ಟೂರ್ನಿಯಲ್ಲಿ 7000 ಐಪಿಎಲ್ ರನ್ಗಳ ಮೈಲಿಗಲ್ಲನ್ನು ನೆಟ್ಟಿರುವ ವಿರಾಟ್ ಕೊಹ್ಲಿ ಈ ಬಾರಿ 14 ಇನ್ನಿಂಗ್ಸ್ನಲ್ಲಿ ಕಣಕ್ಕಿಳಿದು 2 ಶತಕ ಹಾಗೂ 6 ಅರ್ಧಶತಕಗಳ ಸಹಿತ 639 ರನ್ ಗಳಿಸಿದ್ದಾರೆ. ಈ ಮೂಲಕ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡರು.
ಇಷ್ಟೆಲ್ಲಾ ದಾಖಲೆಗಳನ್ನು ಮಾಡಿ, ಶ್ರಮಪಟ್ಟಿರುವ ವಿರಾಟ್ ಕೊಹ್ಲಿ ಒಂದೇ ಒಂದು ಬಾರಿಯೂ ಸಹ ಕಪ್ ಗೆಲ್ಲದಿರುವುದು ಅನೇಕರಲ್ಲಿ ಬೇಸರ ಮೂಡಿಸಿದೆ. ಅಪಾರ ಅಭಿಮಾನಿಗಳು ಈ ಬಾರಿಯ ಸೋಲಿನ ಬಳಿಕ ಕೊಹ್ಲಿ ಬಗ್ಗೆ ಟ್ವೀಟ್ ಮಾಡಿದ್ದು, ಬೇರೆ ತಂಡ ಸೇರಿಕೊಳ್ಳುವಂತೆ ಬರೆದುಕೊಂಡಿದ್ದಾರೆ.
ಇನ್ನು ಅಭಿಮಾನಿಗಳು ಮಾತ್ರವಲ್ಲದೇ ದಿಗ್ಗಜ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಸಹ ವಿರಾಟ್ ಕೊಹ್ಲಿಗೆ ಇದೇ ರೀತಿಯ ಸಲಹೆಯೊಂದನ್ನು ನೀಡಿದ್ದಾರೆ. ಆದರೆ ಕೆವಿನ್ ಪೀಟರ್ಸನ್ ಕೊಹ್ಲಿ ಯಾವ ತಂಡವನ್ನು ಸೇರಬೇಕು ಎಂಬುದನ್ನೂ ಸಹ ಉಲ್ಲೇಖಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬೀಳುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಪೀಟರ್ಸನ್ "ವಿರಾಟ್ ಕೊಹ್ಲಿ ಕ್ಯಾಪಿಟಲ್ ಸಿಟಿಗೆ ಸ್ಥಳಾಂತರಗೊಳ್ಳಲು ಇದು ಸರಿಯಾದ ಸಮಯ" ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಪರೋಕ್ಷವಾಗಿ ವಿರಾಟ್ ಕೊಹ್ಲಿ ರಾಷ್ಟ್ರ ರಾಜಧಾನಿ ನಗರವಾದ ದೆಹಲಿಯನ್ನು ಪ್ರತಿನಿಧಿಸುವ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಲು ಇದು ಸಮಯ ಎಂದು ತಿಳಿಸಿದ್ದಾರೆ. ಪೀಟರ್ಸನ್ ಇಂತಹ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಕೊಹ್ಲಿ ತನ್ನ ಕಷ್ಟದ ಸಮಯದಲ್ಲಿ ತನ್ನ ಬೆಂಬಲಕ್ಕೆ ನಿಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಸಾಲು ಸಾಲು ಕಾಮೆಂಟ್ ಮಾಡಿದ್ದಾರೆ.