ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಗಾಯದಿಂದಾಗಿ ಟೂರ್ನಿಯ ಉಳಿದ ಭಾಗದಿಂದ ಹೊರಬಿದ್ದಿರುವುದು ತಿಳಿದೇ ಇದೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕೆಎಲ್ ರಾಹುಲ್ ಗಾಯಕ್ಕೆ ತುತ್ತಾಗಿದ್ದರು. ಶುಕ್ರವಾರ ಸ್ವತಃ ಕೆಎಲ್ ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ನ ಉಳಿದ ಪಂದ್ಯಗಳಿಗೆ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯಕ್ಕೆ ತಾನು ಅಲಭ್ಯವಾಗುವುದನ್ನು ಖಚಿತಪಡಿಸಿದ್ದಾರೆ. ಇದರ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಕೆಎಲ್ ರಾಹುಲ್ಗೆ ಬದಲಿ ಆಟಗಾರನಾಗಿ ಕನ್ನಡಿಗ ಅನುಭವಿ ಆಟಗಾರ ಕರುಣ್ ನಾಯಕರ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಕರುಣ್ ನಾಯರ್ ಕಳೆದ ಡಿಸೆಂಬರ್ನಲ್ಲಿ ನಡೆದ ಮಿನಿ ಆಕ್ಷನ್ನಲ್ಲಿ ಯಾವುದೇ ತಂಡಕ್ಕೆ ಹರಾಜಾಗದೆ ಉಳಿದುಕೊಂಡಿದ್ದರು. ಇದೀಗ ಕರುಣ್ ನಾಯಕರ್ಗೆ ಈ ಐಪಿಎಲ್ನಲ್ಲಿ ಮತ್ತೊಂದು ಅವಕಾಶ ದೊರೆತಿದ್ದು ಭಾನುವಾರ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ.

ಕೆಎಲ್ ರಾಹುಲ್ ಬದಲಿಗೆ ಎಲ್ಎಸ್ಜಿ ತಂಡವನ್ನು ಸೇರಿಕೊಂಡಿರುವ ಕರುಣ್ ನಾಯರ್ ಐಪಿಎಲ್ನಲ್ಲಿ ಈವರೆಗೆ 76 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದು 1496 ರನ್ಗಳನ್ನು ಗಳಿಸಿದ್ದಾರೆ. 2022ರ ಆವೃತ್ತಿಯಲ್ಲಿ ಕರುಣ್ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡಿದ್ದು ಹೆಚ್ಚಿನ ಅವಕಾಶ ದೊರೆತಿರಲಿಲ್ಲ.
ಇನ್ನು ನಾಯಕ ಕೆಎಲ್ ರಾಹುಲ್ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೃನಾಲ್ ಪಾಂಡ್ಯ ನಾಯಕತ್ವದಲ್ಲಿ ಟೂರ್ನಿಯ ಮುಂದಿನ ಪಂದ್ಯಗಳನ್ನು ಆಡಲಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿಯೂ ಕೃನಾಲ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಭಾನುವಾರ ಎಲ್ಎಸ್ಜಿ ತಂಡ ಗುಜರಾತ್ ಟೈಟಮ್ಸ್ ತಂಡವನ್ನು ಎದುರಿಸಲಿದ್ದು ಸೋದರರಾದ ಕೃನಾಲ್ ಪಾಂಡ್ಯ ಹಾಗೂ ಹಾರ್ದಿಕ್ ಪಾಂಡ್ಯ ಮುಖಾಮುಖಿಯಾಗಲಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್: ಆವೇಶ್ ಖಾನ್, ಆಯುಷ್ ಬಡೋನಿ, ಕ್ವಿಂಟನ್ ಡಿ ಕಾಕ್, ಕೆ ಗೌತಮ್, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಕೈಲ್ ಮೇಯರ್ಸ್, ಅಮಿತ್ ಮಿಶ್ರಾ, ಮೊಹ್ಸಿನ್ ಖಾನ್, ನವೀನ್-ಉಲ್-ಹಕ್, ಕೃನಾಲ್ ಪಾಂಡ್ಯ(ನಾಯಕ), ನಿಕೋಲಸ್ ಪೂರನ್, ರವಿ ಬಿಷ್ಣೋಯ್, ಡೇನಿಯಲ್ ಸಾಮ್ಸ್, ಕರಣ್ ಶರ್ಮಾ, ರೊಮಾರಿಯೋ ಶೆಫರ್ಡ್, ಮಾರ್ಕಸ್ ಸ್ಟೊಯಿನಿಸ್, ಸ್ವಪ್ನಿಲ್ ಸಿಂಗ್, ಜಯದೇವ್ ಉನದ್ಕತ್, ಮನನ್ ವೋಹ್ರಾ, ಮಾರ್ಕ್ ವುಡ್, ಮಯಾಂಕ್ ಯಾದವ್, ಯಶ್ ಠಾಕೂರ್, ಯುದ್ವೀರ್ ಸಿಂಗ್, ಕರುಣ್ ನಾಯರ್