ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬುಧವಾರ ರಾಜಸ್ಥಾನ್ ರಾಯಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಎರಡು ತಮಡಗಳ ನಡುವಿನ ಕದನ ಇದಾಗಲಿರುವ ಕಾರಣ ಅಭಿಮಾನಿಗಳು ಈ ಪಂದ್ಯವನ್ನು ಕಾತರದಿಂದ ಕಾಯುತ್ತಿರುತ್ತಾರೆ. ರಾಜಸ್ಥಾನ್ ರಾಯಲ್ಸ್ ತಂಡದ ತವರು ಜೈಪುರದಲ್ಲಿ ಈ ಪಂದ್ಯ ಆಯೋಜನೆಯಾಗುತ್ತಿದೆ.
ಈ ಎರಡು ತಂಡಗಳ ನಡುವಿನ ಈ ಪಂದ್ಯವನ್ನು ಸಂಜು ಸ್ಯಾಮ್ಸನ್ ಹಾಗೂ ಕೆಎಲ್ ರಾಹುಲ್ ನಡುವಿನ ಕದನ ಎಂದೇ ಬಣ್ಣಿಸಲಾಗುತ್ತಿದೆ. ಇಬ್ಬರಯ ಕೂಡ ಭಾರತದ ಭರವಸೆಯ ಆಟಗಾರರಾಗಿ ಮೂಡಿಬಂದಿದ್ದು ಐಪಿಎಲ್ಲ್ಲಿ ಉತ್ತಮ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಈ ಇಬ್ಬರ ಪೈಕಿ ಕನ್ನಡಿಗ ಕೆಎಲ್ ರಾಹುಲ್ ಭಾರತ ತಂಡದಲ್ಲಿ ಸುದೀರ್ಘ ಕಾಲದಿಂದ ತಂಡದ ಭಾಗವಾಗಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಅವರ ಫಾರ್ಮ್ ಕಳಪೆಯಾಗಿದ್ದು ತಂಡದಲ್ಲಿ ಟೀಕೆಗೂ ಗುರಿಯಾಗಿದ್ದಾರೆ.

ಮತ್ತೊಂದೆಡೆ ಸಂಜು ಸ್ಯಾಮ್ಸನ್ ಏಕದಿನ ಮಾದರಿಯಲ್ಲಿ ಸಿಕ್ಕ ಅಲ್ಪ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದು ಮಿಂಚಿದ್ದರೆ ಟಿ20 ತಂಡದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈ ಇಬ್ಬರು ಆಟಗಾರರ ವಿಚಾರವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಯಾರು ಉತ್ತಮ ಎಂಬ ವಿಚಾರಬಾಗಿ ಮಾತನಾಡಿದ್ದಾರೆ.
ಕ್ರಿಕ್ ಬಜ್ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೀರೇಂದ್ರ ಸೆಹ್ವಾಗ್ ಕೆಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್ ಬಗ್ಗೆ ಮಾತನಾಡಿದ್ದಾರೆ. "ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುವ ವಿಚಾರವಾಗಿ ಕೆಎಲ್ ರಾಹುಲ್ ಸಂಜು ಸ್ಯಾಮ್ಸನ್ ಅವರಿಗುಇಂತ ಬಹಳ ಮುಂದಿದ್ದಾರೆ ಎಂದು ನನಗೆ ಅನಿಸುತ್ತದೆ. ಅವರು ಟೆಸ್ಟ್ ಪಂದ್ಯಗಳನ್ನು ಕುಡ ಆಡುತ್ತಾರೆ. ಅನೇಕ ದೇಶಗಳಲ್ಲಿ ಶತಕವನ್ನು ಸಿಡಿಸಿದ್ದಾರೆ. ಅವರು ಏಕದಿನ ಕ್ರಿಎಕಟ್ನಲ್ಲಿ ಅದ್ಭುತವಾಗಿ ಆಡುತ್ತಿದ್ದು ಆರಂಭಿಮನಾಗಿ ಮಾತ್ರವಲ್ಲದೆ ಮಧ್ಯಮ ಕ್ರಮಾಂಕದಲ್ಲಿಯೂ ಕಣಕ್ಕಿಳಿಯಬಲ್ಲರು. ಅಲ್ಲದೆ ಟಿ20ಯಲ್ಲಿಯೂ ರನ್ಗಳನ್ನು ಗಳಿಸಿದ್ದಾರೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್.
ಇನ್ನು ಈ ಬಾರಿಯ ಐಪಿಎಲ್ನ ಈವರೆಗಿನ ಪಂದ್ಯಗಳ ಫಲಿತಾಂಶದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಐದು ಪಂದ್ಯಗಳಲ್ಲಿ 8 ಅಂಕಗಳನ್ನು ಪಡೆದುಕೊಂಡಿದ್ದು ಮೊದಲ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿದರೆ ಎರಡು ತಂಡಗಳು ಕೂಡ ಸಮಾನ ಅಂಕವನ್ನು ಪಡೆಯಲಿದ್ದು ಯಾವ ತಂಡ ನೆಟ್ ರನ್ರೇಟ್ನಲ್ಲಿ ಮೇಲುಗೈ ಸಾಧಿಸಲಿದೆಯೇ ಆ ತಂಡ ಮೊದಲ ಸ್ಥಾನವನ್ನು ಪಡೆದುಕೊಳ್ಳಲಿದೆ.
ಇನ್ನು ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಕೆಎಲ್ ರಾಹುಲ್ ದೊಡ್ಡ ಕಂಠಕವಾಗಲಿದ್ದಾರೆ ಎಂದಿದ್ದಾರೆ ವೀರೇಂದ್ರ ಸೆಹ್ವಾಗ್. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಟ್ರೆಂಟ್ ಬೋಲ್ಟ್ ಹೊರತುಪಡಿಸಿದರೆ ವಿಶೇಚ ವೇಗಿ ಯಾರೂ ಕೂಡ ಇಲ್ಲದಿರುವ ಕಾರಣ ಆರ್ಆರ್ ತಂಡಕ್ಕೆ ಇದು ಹಿನ್ನಡೆಯುಂಟಾಗಬಹುದು ಎಂಬುದನ್ನು ಉಲ್ಲೇಖಿಸಿದ್ದಾರೆ.
"ಕೆಎಲ್ ರಾಹುಲ್ ಫಾರ್ಮ್ ಕಂಡುಕೊಂಡಿದ್ದು ಕಳೆದ ಪಂದ್ಯದಲ್ಲಿ ರನ್ಗಳಿಸಿದ್ದಾರೆ. ಅವರ ಸ್ಟ್ರೈಕ್ರೇಟ್ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರಬಹುದು. ಆದರೆ ಅವರ ಫಾರ್ಮ್ ನಿಜಕ್ಕೂ ಉತ್ತಮ ಸೂಚನೆಯಾಗಿದೆ. ಟ್ರೆಂಟ್ ಬೋಲ್ಟ್ ಹೊರತುಪಡಿಸಿದರೆ ಉಳಿದ ವೇಗಿಗಳು ಅಪಾಯಕಾರಿ ಎನಿಸದಿದ್ದರೂ ಅವರಲ್ಲಿ ಅಪಾಯಕಾರಿ ಸ್ಪಿನ್ನರ್ಗಳಿದ್ದಾರೆ. ಆದರೆ ಕೆಎಲ್ ರಾಹುಲ್ ಸ್ಪಿನ್ನರ್ಗಳನ್ನು ಅದ್ಭುಯತವಾಗಿ ನಿಭಾಯಿಸಲಿದ್ದಾರೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್.