ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 7 ರನ್ಗಳ ರೋಚಕ ಗೆಲುವು ಸಾಧಿಸಿದೆ. ಕೊನೆಯ ಓವರ್ ವರೆಗೂ ಪಂದ್ಯ ನಡೆದ ಕಾರಣ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಪಂದ್ಯದ ಸಮಯದಲ್ಲಿ ಮೊಹಮ್ಮದ್ ಸಿರಾಜ್ ಫೀಲ್ಡಿಂಗ್ ಮಾಡುತ್ತಿದ್ದ ಮಹಿಪಾಲ್ ಲೊಮ್ರೊರ್ ವಿರುದ್ಧ ಕಿರುಚಾಡಿದ ಘಟನೆ ನಡೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 19ನೇ ಓವರ್ ಮಾಡಲು ಬಂದ ಮೊಹಮ್ಮದ್ ಸಿರಾಜ್ 5 ಎಸೆತಗಳಲ್ಲಿ 11 ರನ್ ಬಿಟ್ಟುಕೊಟ್ಟಿದ್ದರು. ಕೊನೆಯ ಎಸೆತವನ್ನು ಲಾಂಗ್ ಆನ್ ಕಡೆ ಬಾರಿಸಿದ ಧ್ರುವ್ ಜುರೆಲ್ ಎರಡು ರನ್ ಕದಿಯಲು ಯತ್ನಿಸಿದರು. ಫೀಲ್ಡಿಂಗ್ ಮಾಡುತ್ತಿದ್ದ ಮಹಿಪಾಲ್ ಲೊಮ್ರೊರ್ ಚೆಂಡನ್ನು ಹಿಡಿದು ಸಿರಾಜ್ ಕಡೆ ಎಸೆದರು, ಆದರೆ ಅವರಿಂದ ಚೆಂಡು ಸ್ವಲ್ಪ ದೂರ ಬಂದ ಕಾರಣ ರನೌಟ್ ಮಾಡಲು ಸಾಧ್ಯವಾಗಲಿಲ್ಲ.

ಪಂದ್ಯವನ್ನು ಕಳೆದುಕೊಳ್ಳುವ ಒತ್ತಡದಲ್ಲಿದ್ದ ಮೊಹಮ್ಮದ್ ಸಿರಾಜ್ ಮಹಿಪಾಲ್ ಲೊಮ್ರೊರ್ ಮೇಲೆ ಸಿಕ್ಕಾಪಟ್ಟೆ ಕೋಪಗೊಂಡರು. ಮಾತ್ರವಲ್ಲದೆ ಯುವ ಆಟಗಾರನ ವಿರುದ್ಧ ಮೈದಾನದಲ್ಲೇ ಕೋಪಗೊಂಡು ಕಿರಿಚಾಡಿದರು. ಆದರೂ ಕೊನೆಯ ಓವರ ನಲ್ಲಿ ಹರ್ಷಲ್ ಪಟೇಲ್ ಉತ್ತಮ ಬೌಲಿಂಗ್ ಮಾಡುವ ಮೂಲಕ ಆರ್ ಸಿಬಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಆಟದ ಸಮಯದಲ್ಲಿ ಸಿರಾಜ್ ಕೋಪಗೊಂಡರು ಪಂದ್ಯ ಮುಗಿಯುತ್ತಿದ್ದಂತೆ ಲೊಮ್ರೊರ್ ಬಳಿ ತೆರಳಿ ಕ್ಷಮೆ ಕೇಳಿದ್ದಾರೆ. "ನಾನು ಆಗ ತುಂಬಾ ಕೋಪಗೊಂಡಿದ್ದೆ ದಯವಿಟ್ಟು ಕ್ಷಮಿಸಿ, ಈಗಾಗಲೇ ಲೊಮ್ರೊರ್ ಬಳಿ ಎರಡು ಬಾರಿ ಕ್ಷಮೆ ಕೇಳಿದ್ದೇನೆ" ಎಂದು ಮೊಹಮ್ಮದ್ ಸಿರಾಜ್ ಆರ್ಸಿಬಿಯ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
"ಮೈದಾನದ ಹೊರಗೆ ನಾನು ಹಾಗೆ ಕೋಪಗೊಳ್ಳುವುದಿಲ್ಲ, ಪಂದ್ಯದ ನಂತರ ಎಲ್ಲವೂ ಶಾಂತವಾಗುತ್ತದೆ" ಎಂದು ಸಿರಾಜ್ ಹೇಳಿದ್ದಾರೆ. ಸಿರಾಜ್ ಕ್ಷಮೆ ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಮಹಿಪಾಲ್ ಲೊಮ್ರೊರ್, "ಪರವಾಗಿಲ್ಲ ಬಿಡಿ ಸಿರಾಜ್ ಅಣ್ಣ, ಇಂತಹ ದೊಡ್ಡ ಪಂದ್ಯಗಳಲ್ಲಿ ಅಂತಹ ಸಣ್ಣ ಸಂಗತಿಗಳು ನಡೆಯುತ್ತಲೇ ಇರುತ್ತವೆ" ಎಂದು ಹೇಳಿದರು.
ಮೊಹಮ್ಮದ್ ಸಿರಾಜ್ ಈ ಬಾರಿ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. 7 ಪಂದ್ಯಗಳಲ್ಲಿ 15.38 ಸರಾಸರಿಯಲ್ಲಿ 13 ವಿಕೆಟ್ ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಜೋಸ್ ಬಟ್ಲರ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಮಿಂಚಿದರು.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತು. ಫಾಫ್ ಡುಪ್ಲೆಸಿಸ್ 39 ಎಸೆತಗಳಲ್ಲಿ 62 ರನ್ ಗಳಿಸಿದರು, ಗ್ಲೆನ್ ಮ್ಯಾಕ್ಸ್ವೆಲ್ 44 ಎಸೆತಗಳಲ್ಲಿ 77 ರನ್ ಗಳಿಸಿದರು. ಇದಕ್ಕುತ್ತರವಾಗಿ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿ, 7 ರನ್ಗಳಿಂದ ಸೋಲನುಭವಿಸಿತು.