ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ. ಮೂರು ವರ್ಷಗಳ ಬಳಿಕ ಆರ್ ಸಿಬಿ ತಂಡ ತವರಿನ ಅಭಿಮಾನಿಗಳ ಮುಂದೆ ಪಂದ್ಯವನ್ನಾಡಿತು. ಮೊದಲನೇ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ 2023ರ ಐಪಿಎಲ್ ಅಭಿಯಾನವನ್ನು ಆರಂಭಿಸಿದೆ. ಅದರಲ್ಲೂ ವಿರಾಟ್ ಕೊಹ್ಲಿ ಅತ್ಯದ್ಭುತ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಗೆಲ್ಲಿಸಿದ್ದು ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ.
ಟಾಸ್ ಗೆದ್ದ ಆರ್ ಸಿಬಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊಹಮ್ಮದ್ ಸಿರಾಜ್ ಆರಂಭದಲ್ಲೇ ಇಶಾನ್ ಕಿಶಾನ್ ವಿಕೆಟ್ ಪಡೆಯುವ ಮೂಲಕ ಮುಂಬೈಗೆ ಮೊದಲ ಆಘಾತ ನೀಡಿದರು. ಆರ್ ಸಿಬಿ ಪರವಾಗಿ ಮೊದಲನೇ ಪಂದ್ಯವನ್ನಾಡುತ್ತಿರುವ ರೀಸ್ ಟೋಪ್ಲೆ ತಮ್ಮ ಎರಡನೇ ಓವರ್ ನಲ್ಲೇ ಅಪಾಯಕಾರಿ ಬ್ಯಾಟರ್ ಕ್ಯಾಮೆರಾನ್ ಗ್ರೀನ್ ಅವರ ವಿಕೆಟ್ ಪಡೆದು ಮಿಂಚಿದರು. ಮೊಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಒಂದು ಜೀವದಾನ ಪಡೆದರು ಆಕಾಶ್ ದೀಪ್ ಅವರ ಬೌಲಿಂಗ್ನಲ್ಲಿ ಕೀಪರ್ ದಿನೇಶ್ ಕಾರ್ತಿಕ್ಗೆ ಕ್ಯಾಚ್ ನೀಡಿ ಔಟಾದರು. ಬ್ರೇಸ್ವೆಲ್ ಸೂರ್ಯಕುಮಾರ್ ಅವರ ವಿಕೆಟ್ ಪಡೆಯುವ ಮೂಲಕ ಮುಂಬೈ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿ ಅನುಭವಿಸಿತು.

ತಿಲಕ್ ವರ್ಮಾ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಮೊತ್ತ ಕಲೆಹಾಕಲು ಕಾರಣವಾದರು. ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಮೊತ್ತವನ್ನು ಚೇಸ್ ಮಾಡಲು ಮೈದಾನಕ್ಕಿಳಿದ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಅಬ್ಬರಿಸಿದರು. ಯಾವುದೇ ಒತ್ತಡಕ್ಕೆ ಒಳಗಾಗದೆ ಸುಲಭವಾಗಿ ಬ್ಯಾಟಿಂಗ್ ಮಾಡಿದರು. ಮೊದಲು ಫಾಫ್ ಸು ಪ್ಲೆಸಿಸ್ ಸಿಕ್ಸರ್ ಬೌಂಡರಿ ಸಿಡಿಸಲು ಆರಂಭಿಸಿದರೆ, ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದ ಕೊಹ್ಲಿ ನಂತರ ಬೌಂಡರಿ, ಸಿಕ್ಸರ್ ಸಿಡಿಸಿ ಮಿಂಚಿದರು.
ಅದರಲ್ಲೂ ಅಪಾಯಕಾರಿ ಬೌಲರ್ ಜೋಫ್ರಾ ಆರ್ಚರ್ ವಿರುದ್ಧ ಬೌಂಡರಿ ಸಿಕ್ಸರ್ ಸಿಡಿಸುವ ಮೂಲಕ ಕೊಹ್ಲಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದರು. ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಇನ್ನೂ 23 ಎಸೆತ ಬಾಕಿ ಇರುವಂತೆಯೇ ಆರ್ ಸಿಬಿ ತಂಡಕ್ಕೆ 8 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು. ಮೊದಲನೇ ಪಂದ್ಯವನ್ನು ವೀಕ್ಷಿಸಲು 40 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಮೈದಾನದಲ್ಲಿ ಸೇರಿದ್ದರು. ಹಲವು ಗಣ್ಯರು ಕೂಡ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ನೋಡಲು ಚಿನ್ನಸ್ವಾಮಿ ಅಂಗಳಕ್ಕೆ ಬಂದಿದ್ದರು.
ಈ ಸಲ ಕಪ್ ನಮ್ದೇ ಎಂದ ಸಿದ್ದರಾಮಯ್ಯ
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಮೈದಾನದಲ್ಲಿ ಹಾಜರಿದ್ದು, ಪಂದ್ಯವನ್ನು ಕಣ್ತುಂಬಿಕೊಂಡರು. ತಾವು ಪಂದಯವನ್ನು ವೀಕ್ಷಿಸಿದ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಅವರು, ನಮ್ಮ ಬೆಂಬಲ ಯಾವಾಗಲೂ ಆರ್ ಸಿಬಿ ತಂಡಕ್ಕೆ ಇರುತ್ತದೆ ಈ ಬಾರಿ ಕಪ್ ಗೆಲ್ಲುವುದು ಖಚಿತ ಎಂದು ಹೇಳಿದ್ದಾರೆ. ಇನ್ನು ಖ್ಯಾತ ಧಾರ್ಮಿಕ ಗುರು ಸದ್ಗುರು ಕೂಡ ಮೈದಾನದಲ್ಲಿ ಹಾಜರಿದ್ದು, ಪಂದ್ಯವನ್ನು ವೀಕ್ಷಿಸಿದರು.

ನೇಪಾಳದಿಂದ ಬಂದ ಅಭಿಮಾನಿಗಳು
ಆರ್ ಸಿಬಿ ತಂಡಕ್ಕೆ ವಿಶ್ವದಾದ್ಯಂತ ಅಭಿಮಾನಿಗಳಿರುವುದು ಗೊತ್ತಿರುವ ವಿಚಾರ ಆದರೆ, ಬೆಂಗಳೂರಿನಲ್ಲಿ ನಡೆಯುವ ಪಂದ್ಯವನ್ನು ವೀಕ್ಷಿಸಲು ನೇಪಾಳದಿಂದ ಅಭಿಮಾನಿಗಳು ಆಗಮಿಸಿದ್ದು ಗಮನ ಸೆಳೆಯಿತು. ನೆಚ್ಚಿನ ಆಟಗಾರ ಕೊಹ್ಲಿ ಮತ್ತು ಆರ್ ಸಿಬಿ ತಂಡಕ್ಕೆ ಬೆಂಬಲ ನೀಡಲು ೨.೫ ಸಾವಿರ ಕಿಲೋ ಮೀಟರ್ ದೂರದಿಂದ ಬಂದಿದ್ದರು. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಕೂಡ ಅಭಿಮಾನಿಗಳು ಆಗಮಿಸಿ, ಕರ್ನಾಟಕ ರ್ಧವಜವನ್ನು ಹಿಡಿದು ತಮ್ಮ ತಂಡಕ್ಕೆ ಬೆಂಬಲ ನೀಡಿದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಕೂಡ ಚಿನ್ನಸ್ವಾಮಿ ಅಂಗಳದಲ್ಲಿ ಅಭಿಮಾನಿಗಳ ಮುಂದೆ ಆಡುವುದು ಹೆಚ್ಚಿನ ಖುಷಿ ನೀಡುತ್ತದೆ ಎಂದು ಹೇಳಿದ್ದಾರೆ. ಎಲ್ಲಾ ಪಂದ್ಯಗಳನ್ನು ಗೆಲ್ಲಲು ಯೋಜನೆ ರೂಪಿಸುತ್ತೇವೆ. ಉತ್ತಮ ಪ್ರದರ್ಶವನ್ನು ಮುಂದುವರೆಸುತ್ತೇವೆ ಎಂದು ಹೇಳಿದರು. ಆರ್ ಸಿಬಿ ತನ್ನ ಮುಂದಿನ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಖೋಲ್ಕತ್ತಾದ ಈಡನ್ ಗಾರ್ಡನ್ಸ್ ಅಂಗಳದಲದಲಿ ನಡೆತಯಲಿದೆ.