ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತವರಿನಲ್ಲಿ ಸೆಣೆಸಲು ಸಜ್ಜಾಗಿದೆ. ಎರಡು ತಂಡಗಳು ಕೂಡ ಆಡಿರುವ ಪಂದ್ಯಗಳಲ್ಲಿ ಸೋಲು ಕಂಡಿದ್ದು ಮೊದಲ ಗೆಲುವಿನ ಹುಡುಕಾಟದಲ್ಲಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ತವರಿನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲುವಿಗಾಗಿ ಪಣತೊಟ್ಟಿದೆ. ಆದರೆ ತಂಡದ ಪ್ರಮುಖ ವೇಗುಗಳಿಬ್ಬರು ಈ ಪಂದ್ಯದಲ್ಲಿ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳ ಚಿತ್ತ ಈಗ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮೇಲೆ ಬಿದ್ದಿದೆ.
ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಗಾಯದ ಕಾರಣದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ನೆಟ್ಟಿಗರು ಮುಂಬೈ ಇಂಡಿಯನ್ಸ್ ತಂಡದ ಆಡುವ ಬಳಗದಲ್ಲಿ ಅರ್ಜುನ್ ತೆಂಡೂಲ್ಕರ್ಗೆ ಅವಕಾಶ ದೊರೆಯಲಿದೆಯಾ ಎಂಬ ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಇಂಪಾಕ್ಟ್ ಪ್ಲೇಯರ್ ಪಟ್ಟಿಯಲ್ಲಿ ಅರ್ಜುನ್ ತೆಂಡೂಲ್ಕರ್ ಸ್ಥಾನವನ್ನು ಪಡೆದಿದ್ದಾಗ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು. ಆದರೆ ಅಂತಿಮವಾಗಿ ಕುಮಾರ್ ಕಾರ್ತಿಕೇಯ ಅವರನ್ನು ಇಂಪಾಕ್ಟ್ ಪ್ಲೇಯರ್ ಆಗಿ ಆಡುವ ಬಳಗದವನ್ನು ಸೇರಿಕೊಂಡಿದ್ದರು.

ಜೋಫ್ರಾ ಆರ್ಚರ್ ಬಗ್ಗೆ ಮಾರ್ಕ್ ಬೌಷರ್ ಹೇಳಿಕೆ: ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಮಾರ್ಕ್ ಬೌಷರ್ ಮುಂಬೈ ಇಂಡಿಯನ್ಸ್ ವೇಗಿ ಜೋಫ್ರಾ ಆರ್ಚರ್ ಬಗ್ಗೆ ಮಾತನಾಡಿದ್ದಾರೆ. "ನಾವು ಆಟಗಾರರ ದೃಷ್ಟಿಕೋನದಿಂದ ಯಾವಾಗಲೂ ನೋಡುತ್ತೇವೆ. ಆಡಲು ಆತ ಸಿದ್ಧನಿಲ್ಲ ಎಂದಾದರೆ ಆತನ ಬದಲಿಗೆ ಮತ್ತೋರ್ವ ಆಟಗಾರನನ್ನು ಕಣಕ್ಕಿಳಿಸಲಿದ್ದೇವೆ. ಅವರು ಸಾಧ್ಯವಾದಷ್ಟು ಶೀಘ್ರವಾಗಿ ಆಡುವ ಬಳಗದಲ್ಲಿ ಸ್ಥಾನವನ್ನು ಸಂಪಾದಿಸಲಿದ್ದಾರೆ ಎಂಬು ವಿಶ್ವಾಸವಿದೆ" ಎಂದಿದ್ದಾರೆ ಮಾರ್ಕ್ ಬೌಷರ್.
ಕಡೆಗೂ ಅರ್ಜುನ್ ತೆಂಡೂಲ್ಕರ್ಗೆ ದೊರೆಯಲಿದೆಯಾ ಅವಕಾಶ: ವಿಶ್ವ ಕ್ರಿಕೆಟ್ನ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಕಳೆದ ಎರಡು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ಇನ್ನು ಕೂಡ ಪದಾರ್ಪಣಾ ಪಂದ್ಯವನ್ನು ಆಡುವ ಅವಕಾಶ ಅರ್ಜುನ್ ತೆಂಡೂಲ್ಕರ್ಗೆ ದೊರೆತಿಲ್ಲ. ಇದೀಗ ಪ್ರಮುಖ ವೇಗಿಗಳು ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯುವ ಸಾರ್ಧಯತೆ ಕಡಿಮೆಯಿರುವ ಕಾರಣ ಅರ್ಜುನ್ ತೆಂಡೂಲ್ಕರ್ ಪದಾರ್ಪಣೆ ಮಾಡಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಇನ್ನು ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಆವೃತ್ತಿಯಲ್ಲಿ ಆರಂಭಿಕ ಎರಡು ಪಂದ್ಯದಲ್ಲಿಯೂ ಸೋಲಿನ ಕಹಿ ಅನುಭವಿಸಿದೆ. ಹೀಗಾಗಿ ಆಡುವ ಬಳಗದಲ್ಲಿ ಒಂದಷ್ಟು ಬದಲಾವಣೆಗೆ ನಾಯಕ ರೋಹಿತ್ ಮನಸ್ಸು ಮಾಡುವುದರಲ್ಲಿ ಅಚ್ಚರಿಯಿಲ್ಲ. ಈ ನಿರ್ಧಾರ ಕೂಡ ಅರ್ಜುನ್ ತೆಂಡೂಲ್ಕರ್ಗೆ ಪೂರಕವಾಗಿರುವ ಸಾಧ್ಯತೆಯಿದೆ. ಹೀಗಾಗಿ ಆಡುವ ಬಳಗದಲ್ಲಿ ಅರ್ಜುನ್ ತೆಂಡೂಲ್ಕರ್ ಸ್ಥಾನವನ್ನು ಪಡೆಯುವ ಸಾಧ್ಯತೆಗಳು ಗೋಚರಿಸುತ್ತಿದೆ.
ಮುಂಬೈ ಇಂಡಿಯನ್ಸ್ ಸಂಪೂರ್ಣ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಮಣದೀಪ್ ಸಿಂಗ್, ಅನ್ಮೋಲ್ಪ್ರೀತ್ ಸಿಂಗ್, ಡೆವಾಲ್ಡ್ ಬ್ರೆವಿಸ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಶಮ್ಸ್ ಮುಲಾನಿ, ಪಿಯೂಷ್ ಚಾವ್ಲಾ, ಕ್ಯಾಮರೂನ್ ಗ್ರೀನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಅರ್ಜುನ್ ತೆಂಡೂಲ್ಕರ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ವಿಷ್ಣು ವಿನೋದ್, ಜೋಫ್ರಾ ಆರ್ಚರ್, ಅರ್ಷದ್ ಖಾನ್, ಜೇಸನ್ ಬೆಹ್ರೆಂಡಾರ್ಫ್, ರಾಘವ್ ಗೋಯಲ್, ದುವಾನ್ ಜಾನ್ಸೆನ್, ಆಕಾಶ್ ಮಧ್ವಲ್