
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ವಿಶ್ವದ ಶ್ರೀಮಂತ ಲೀಗ್ನಲ್ಲಿ ದೇಶ ವಿದೇಶದ ಸ್ಟಾರ್ ಕ್ರಿಕೆಟಿಗರು ಆಡಲಿದ್ದಾರೆ. ಎರಡು ತಿಂಗಳ ಕಾಲ ಕ್ರಿಕೆಟ್ನ ಮಹಾಹಬ್ಬ ನಡೆಯಲಿದೆ. 10 ತಂಡಗಳು ಪ್ರತಿಷ್ಠಿತ ಕಪ್ಗಾಗಿ ಸೆಣೆಸಾಟ ನಡೆಸಲಿವೆ.
ಪ್ರತಿಷ್ಟಿತ ಲೀಗ್ನಲ್ಲಿ ಚಾಂಪಿಯನ್ ಆಗಬೇಕು ಎನ್ನುವುದು ಎಲ್ಲರ ಕನಸು, ಗುಜರಾತ್ ಜೈಂಟ್ಸ್ ಆಡಿದ ಮೊದಲ ಲೀಗ್ನಲ್ಲೇ ಚಾಂಪಿಯನ್ ಆಗಿದೆ. ರಾಜಸ್ಥಾನ ರಾಯಲ್ಸ್ ತಂಡ ಫೈನಲ್ ಪ್ರವೇಶಿಸಿದ್ದರು. 2008ರಲ್ಲಿ ಚೊಚ್ಚಲ ಐಪಿಎಲ್ನಲ್ಲಿ ಚಾಂಪಿಯನ್ ಆದ ಬಳಿಕ ಇದುವರೆಗೂ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ.
ಐಪಿಎಲ್ 2022ರಲ್ಲಿ ಶಕ್ತಿಯುತ ತಂಡವಾಗಿದ್ದ ರಾಜಸ್ಥಾನ ರಾಯಲ್ಸ್ ಈ ಬಾರಿ ಕೂಡ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸಂಬಂಧಿಸಿದಂತೆ ಪ್ರಮುಖ ಭವಿಷ್ಯ ನುಡಿದಿದ್ದಾರೆ.
2023ರ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಫೈನಲ್ಗೆ ತಲುಪುತ್ತದೆ ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ. ಸಂಜು ಸ್ಯಾಮ್ಸನ್ ನೇತೃತ್ವದ ತಂಡ ಫ್ರಾಂಚೈಸಿಗಾಗಿ ಎರಡನೇ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 2023ರ ಆವೃತ್ತಿಗಾಗಿ ಬಲಿಷ್ಠ ಆಟಗಾರರನ್ನು ಒಳಗೊಂಡಿದೆ.

ಫೈನಲ್ ತಲುಪುವ ತಂಡ ಎಂದ ಕೈಫ್
"ರಾಜಸ್ಥಾನ ರಾಯಲ್ಸ್ ಮತ್ತೊಮ್ಮೆ ಫೈನಲ್ ತಲುಪುತ್ತದೆ ಎಂದು ಅನಿಸುತ್ತದೆ. ಅದು ಮೇಲ್ನೋಟಕ್ಕೆ ಬಹಳ ಬಲಿಷ್ಠ ತಂಡವಾಗಿ ಕಾಣಿಸುತ್ತಿದೆ. ಈ ತಂಡ ಫೈನಲ್ ರೇಸ್ನಲ್ಲಿ ಸಾಕಷ್ಟು ಮುಂದೆ ಇದೆ. ಅಶ್ವಿನ್, ಚಹಾಲ್ರಂತಹ ಬೌಲರ್ ಗಳಿದ್ದಾರೆ, ಟ್ರೆಂಟ್ ಬೌಲ್ಟ್ ಕೂಡ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ" ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಸಾಕಷ್ಟು ಬಲಿಷ್ಠವಾಗಿದೆ ಎಂದು ಕೈಫ್ ಹೇಳಿದ್ದಾರೆ. "ರಾಜಸ್ಥಾನ ರಾಯಲ್ಸ್ ಸಂಪೂರ್ಣ ತಂಡವಾಗಿ ತೋರುತ್ತಿದೆ. ಬ್ಯಾಟಿಂಗ್ನಲ್ಲಿ ಜೋಸ್ ಬಟ್ಲರ್ ಇದ್ದಾರೆ, ಅವರು ಅಪಾಯಕಾರಿ ಬ್ಯಾಟರ್ ಕಳೆದ ಬಾರಿ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಫಿನಿಷರ್ ಪಾತ್ರ ನಿರ್ವಹಿಸುವ ಶಿಮ್ರಾನ್ ಹೆಟ್ಮೇಯರ್ ಇದ್ದಾರೆ. ನಾಯಕ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮ ಫಾರ್ಮ್ ಹೊಂದಿದ್ದಾರೆ. ಅವರ ನಾಯಕತ್ವ ಕೂಡ ಅತ್ಯುತ್ತಮವಾಗಿದೆ' ಎಂದು ಹೇಳಿದ್ದಾರೆ.
2022ರ ಆವೃತ್ತಿಯಲ್ಲಿ ಜೋಸ್ ಬಟ್ಲರ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. 57.53ರ ಸರಾಸರಿಯಲ್ಲಿ ಮತ್ತು 149.05 ಸ್ಟ್ರೈಕ್ರೇಟ್ನಲ್ಲಿ 863 ರನ್ ಗಳಿಸಿದ್ದರು. ಸಂಜು ಸ್ಯಾಮ್ಸನ್ ಕೂಡ 458 ರನ್ ಗಳಿಸುವ ಮೂಲಕ ಮಿಂಚಿದ್ದರೆ, ಶಿಮ್ರಾನ್ ಹೆಟ್ಮೆಯರ್ 153.92 ಸ್ಟ್ರೈಕ್ರೇಟ್ ಮತ್ತು 44.85 ಸ್ಟ್ರೈಕ್ರೇಟ್ನಲ್ಲಿ 314 ರನ್ ಗಳಿಸಿದ್ದಾರೆ.

ಕೈಫ್ ಭವಿಷ್ಯ ನಿಜವಾಗಲ್ಲ ಎಂದ ದೀಪ್ ದಾಸ್ಗುಪ್ತಾ
ಮೊಹಮ್ಮದ್ ಕೈಫ್ ಭವಿಷ್ಯದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ದೀಪ್ ದಾಸ್ಗುಪ್ತಾ ರಾಜಸ್ಥಾನ ರಾಯಲ್ಸ್ ತಂಡ ಫೈನಲ್ ತಲುಪುದು ಸುಲಭವಲ್ಲ ಎಂದು ಹೇಳಿದ್ದಾರೆ. "ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಚೆಂಡು ತಿರುಗುವುದಿಲ್ಲ, ಸ್ಪಿನ್ನರ್ ಗಳು ಅಲ್ಲಿ ಉತ್ತಮ ಪ್ರದರ್ಶನ ನೀಡುವುದು ಸುಲಭವಗಲ್ಲ. ಜೈಪುರದಲ್ಲಿ ಕೂಡ ಯಾವ ರೀತಿಯ ಪಿಚ್ಗಳನ್ನು ಸಿದ್ಧಪಡಿಸಲಾಗಿದೆ ಎನ್ನುವುದನ್ನು ನೋಡುವುದು ಕೂಡ ಬಹಳ ಮುಖ್ಯ" ಎಂದು ಹೇಳಿದರು.
ಪ್ರಸಿದ್ಧ್ ಕೃಷ್ಣ ಐಪಿಎಲ್ನಿಂದ ಹೊರಬಿದ್ದಿರುವುದು ತಂಡಕ್ಕೆ ಪ್ರಮುಖ ಹೊಡೆತವಾಗಿದೆ. ಸಾಮಾನ್ಯ ಪಿಚ್ಗಳನ್ನು ಸಿದ್ಧಪಡಿಸಿದ್ದರೆ ರಾಜಸ್ಥಾನ ರಾಯಲ್ಸ್ ಫೈನಲ್ ತಲುಪುವುದು ಕಷ್ಟಕರವಾಗಲಿದೆ ಎಂದು ದೀಪ್ ದಾಸ್ಗುಪ್ತಾ ಹೇಳಿದರು.