
ನಿನ್ನೆ ( ಮೇ 1 ) ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ ಸಾಲು ಸಾಲು ವಿವಾದಗಳಿಗೆ ಕಾರಣವಾಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 127 ರನ್ಗಳ ಗುರಿಯನ್ನು ನೀಡಿತ್ತು. ಈ ಅಲ್ಪಮೊತ್ತವನ್ನು ಸಹ ಬೆನ್ನತ್ತುವಲ್ಲಿ ವಿಫಲಗೊಂಡ ಲಕ್ನೋ ಸೂಪರ್ ಜೈಂಟ್ಸ್ 19.5 ಓವರ್ಗಳಲ್ಲಿ 108 ರನ್ಗಳಿಗೆ ಆಲ್ಔಟ್ ಆಗಿ 18 ರನ್ಗಳ ಸೋಲನ್ನು ಅನುಭವಿಸಿತು.
ಹೀಗೆ ಪಂದ್ಯ ಮುಗಿಯುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ನಡುವೆ ಮೈದಾನದಲ್ಲಿಯೇ ತೀವ್ರ ಮಾತಿನ ಚಕಮಕಿ ನಡೆದವು. ಅಲ್ಲದೇ ಇಬ್ಬರೂ ಸಹ ಗುದ್ದಾಟಕ್ಕೂ ಮುಂದಾಗಿದ್ದರು. ಈ ವೇಳೆ ಎರಡೂ ತಂಡಗಳ ಆಟಗಾರರು ಇಬ್ಬರನ್ನೂ ಬೇರ್ಪಡಿಸಿ ಸಮಾಧಾನಪಡಿಸಿದರು.
ಕೇವಲ ಗೌತಮ್ ಗಂಭೀರ್ ಮಾತ್ರವಲ್ಲದೇ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರ ಜತೆಗೂ ಸಹ ವಿರಾಟ್ ಕೊಹ್ಲಿ ತಾಳ್ಮೆ ಕಳೆದುಕೊಂಡು ಜಗಳಕ್ಕಿಳಿದಿದ್ದರು. ಎಲ್ಲರೂ ಚಿನ್ನಸ್ವಾಮಿಯಲ್ಲಿ ನಡೆದ ಇತ್ತಂಡಗಳ ನಡುವಿನ ಮೊದಲ ಪಂದ್ಯವನ್ನು ಲಕ್ನೋ ಗೆದ್ದಾಗ ಗಂಭೀರ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರರು ಸೆಲೆಬ್ರೇಟ್ ಮಾಡಿದ್ದ ರೀತಿಯಿಂದ ವಿರಾಟ್ ಕೊಹ್ಲಿ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದುಕೊಂಡಿದ್ದರು.
ಆದರೆ ಕೊಹ್ಲಿ ಹಾಗೂ ಲಕ್ನೋ ಆಟಗಾರರ ನಡುವಿನ ಜಗಳಕ್ಕೂ ಹಳೆ ಪಂದ್ಯದ ಘಟನೆಗಳಿಗೂ ಸಂಬಂಧವೇ ಇಲ್ಲ. ಹೌದು, ವಿರಾಟ್ ಕೊಹ್ಲಿ ಕೃನಾಲ್ ಪಾಂಡ್ಯ ಕ್ಯಾಚ್ ಹಿಡಿದ ಬಳಿಕ ನಾನು ಶ್ ಎಂದು ನಿಮಗೆ ಹೇಳುವುದಿಲ್ಲ, ಏಕೆಂದರೆ ನಾನು ನಿಮ್ಮನ್ನೆಲ್ಲಾ ಇಷ್ಟಪಡುತ್ತೇನೆ ಎಂದು ಸನ್ನೆ ಮೂಲಕ ಹೇಳಿ ಕಳೆದ ಪಂದ್ಯದ ಸೇಡನ್ನು ಹಿತಕರವಾಗಿಯೇ ತೀರಿಸಿಕೊಂಡಿದ್ದರು.
ಆದರೆ ನವೀನ್ ಉಲ್ ಹಕ್ ಜತೆಗಿನ ಜಗಳಕ್ಕೂ ಹಳೆ ಪಂದ್ಯಕ್ಕೂ ಯಾವ ಸಂಬಂಧವೂ ಇರಲಿಲ್ಲ. ಹಾಗಾದರೆ ನವೀನ್ ಉಲ್ ಹಕ್ ಜತೆ ಕೊಹ್ಲಿ ಆ ಮಟ್ಟಕ್ಕೆ ಕಿತ್ತಾಡಲು ಕಾರಣವೇನು ಎಂದು ಹುಡುಕಿದಾಗ ಸಿಕ್ಕಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ ಮೊಹಮ್ಮದ್ ಸಿರಾಜ್.
ಹೌದು, ಮೊಹಮ್ಮದ್ ಸಿರಾಜ್ ಮಾಡಿದ ಈ ಅನಗತ್ಯ ಕೆಲಸದಿಂದಲೇ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ವಾಕ್ಸಮರ ನಡೆಯಿತು ಹಾಗೂ ಕೈಮುಟ್ಟಿ ಜಗಳ ಮಾಡುವ ಹಂತ ತಲುಪಿತು. ಮೊಹಮ್ಮದ್ ಸಿರಾಜ್ 17ನೇ ಓವರ್ ಮಾಡಲು ಬಂದಿದ್ದರು.
ಈ ಓವರ್ನಲ್ಲಿ 8 ರನ್ ನೀಡಿದ ಸಿರಾಜ್ ಕೊನೆಯ ಎಸೆತ ಎಸೆದಾಗ ಕಣದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟ್ಸ್ಮನ್ ನವೀನ್ ಉಲ್ ಹಕ್ ಜತೆ ಕಿರಿಕ್ ಮಾಡಿಕೊಂಡರು. ಕೊನೆಯ ಎಸೆತದಲ್ಲಿ ಫ್ರೀಹಿಟ್ ಇದ್ದಾಗ ನವೀನ್ ಉಲ್ ಹಕ್ ರನ್ ಗಳಿಸುವಲ್ಲಿ ವಿಫಲರಾಗಿ ಅದು ಡಾಟ್ ಬಾಲ್ ಆಯಿತು. ಇನ್ನು ನವೀನ್ ಕ್ರೀಸ್ಗೆ ಬ್ಯಾಟ್ ಇಟ್ಟುಕೊಂಡು ವಿಕೆಟ್ಗೆ ಬಾಲ್ ಎಸೆಯಲು ಯತ್ನಿಸಲು ಮುಂದಾಗಿದ್ದ ಸಿರಾಜ್ ಅವರನ್ನು ದಿಟ್ಟಿಸಿ ನೋಡಿದ್ದರು.

ಈ ಸಂದರ್ಭದಲ್ಲಿ ಸಿರಾಜ್ ಬೇಕಂತಲೇ ಚೆಂಡನ್ನು ವಿಕೆಟ್ಗೆ ಹೊಡೆದು ನವೀನ್ ಉಲ್ ಹಕ್ ಅವರ ಕಾಲನ್ನು ಎಳೆದಿದ್ದರು. ಇದರಿಂದ ಕುಪಿತಗೊಂಡ ನವೀನ್ ಉಲ್ ಹಕ್ ಸಿರಾಜ್ ಜತೆ ಜಗಳಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಕೊಹ್ಲಿ ಮಧ್ಯ ಪ್ರವೇಶಿಸಿದರು. ಇದಾದ ಬಳಿಕ ಮಾತಿಗೆ ಮಾತು ಬೆಳೆದು ಜಗಳ ದೊಡ್ಡದಾಯಿತು. ಕೊಹ್ಲಿ ತನ್ನ ಶೂಗೆ ಅಂಟಿಕೊಂಡಿದ್ದ ಮಣ್ಣನ್ನು ತೆಗೆದುಕೊಂಡು ನಿನ್ನ ಕೋಪವೆಲ್ಲಾ ನನ್ನ ಕಾಲ ಕೆಳಗೆ ಎಂದು ಟಾಂಗ್ ನೀಡಿದರು. ಹೀಗೆ ಮೊಹಮ್ಮದ್ ಸಿರಾಜ್ ಮಾಡಿದ ಈ ಅನಗತ್ಯ ಕೆಲಸದಿಂದ ಈ ಜಗಳ ನಡೆಯಿತು.