
ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 26ನೇ ಪಂದ್ಯ ನಿನ್ನೆ ( ಏಪ್ರಿಲ್ 19 ) ಪಿಂಕ್ ಸಿಟಿ ಜೈಪುರದ ಸಾವೈ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯಿತು.
ಅಂಕಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ಹಾಗೂ ಎರಡನೇ ಸ್ಥಾನದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಈ ಪಂದ್ಯದಲ್ಲಿ ಮುಖಾಮುಖಿಯಾದವು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಪಡೆ ಸಾಧಾರಣ ಮೊತ್ತ ಕಲೆ ಹಾಕಿ ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸುಲಭವಾಗಿ ಗೆಲ್ಲಬಹುದಾದ ಗುರಿಯನ್ನು ನೀಡಿತ್ತು.
ಆದರೆ ಸಂಜು ಸ್ಯಾಮ್ಸನ್ ಪಡೆ ಈ ಸುಲಭ ಗುರಿಯನ್ನು ತನ್ನ ತವರು ನೆಲದ ಆನುಕೂಲವಿದ್ದರೂ ಸಹ ಬಾರಿಸಲಾರದೇ ಸೋಲಿಗೆ ಶರಣಾಗಿದೆ. ಟಾಸ್ ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಫೀಲ್ಡಿಂಗ್ ಆಯ್ದುಕೊಂಡು ಚೇಸ್ ಮಾಡಿ ಗೆಲ್ಲುವ ಯೋಜನೆ ಹಾಕಿಕೊಂಡಿದ್ದರು. ಆದರೆ ಲೆಕ್ಕಾಚಾರ ಉಲ್ಟಾ ಹೊಡೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು 155 ರನ್ಗಳ ಸುಲಭ ಗುರಿಯನ್ನು ನೀಡಿತ್ತು. ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕೆಎಲ್ ರಾಹುಲ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ ಹಾಗೂ ಮಾರ್ಕಸ್ ಸ್ಟೊಯಿನಿಸ್ ಉತ್ತಮವೆನಿಸುವ ಪ್ರದರ್ಶನ ನೀಡಿದರು.
ಇನ್ನು ಲಕ್ನೋ ನೀಡಿದ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ಸುಲಭವಾಗಿ ಬೆನ್ನತ್ತಲಿದ್ದು, 18 ಓವರ್ಗಳ ಒಳಗೆ ಪಂದ್ಯವನ್ನು ಮುಗಿಸಬಹುದು ಎಂಬ ನಿರೀಕ್ಷೆ ಇತ್ತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಉತ್ತಮ ಆರಂಭವನ್ನೇ ಕಟ್ಟಿಕೊಟ್ಟರು. ಯಶಸ್ವಿ ಜೈಸ್ವಾಲ್ 35 ಎಸೆತಗಳಲ್ಲಿ 44 ರನ್ ಕಲೆಹಾಕಿದರೆ, ಜೋಸ್ ಬಟ್ಲರ್ 41 ಎಸೆತಗಳಲ್ಲಿ 40 ರನ್ ಬಾರಿಸಿದರು. ಹನ್ನೆರಡನೇ ಓವರ್ನಲ್ಲಿ ಜೈಸ್ವಾಲ್ ಔಟ್ ಆದರು.
ಬಳಿಕ ಕಣಕ್ಕಿಳಿದ ನಾಯಕ ಸಂಜು ಸ್ಯಾಮ್ಸನ್ ಎರಡು ರನ್ ಗಳಿಸಿ ರನ್ಔಟ್ ಆದರು. ಸಂಜು ಸ್ಯಾಮ್ಸನ್ ಹದಿಮೂರನೆ ಓವರ್ನಲ್ಲಿ ಔಟ್ ಆಗುತ್ತಿದ್ದಂತೆ ದೇವದತ್ ಪಡಿಕ್ಕಲ್ ಕಣಕ್ಕಿಳಿದರು. ಬಳಿಕ ಹದಿನಾಲ್ಕನೇ ಓವರ್ನಲ್ಲಿ ಜೋಸ್ ಬಟ್ಲರ್ ಸಹ ಔಟ್ ಆದರು ಹಾಗೂ ಹದಿನಾರನೇ ಓವರ್ನಲ್ಲಿ ಹೆಟ್ಮಯರ್ ಕೇವಲ 2 ರನ್ ಕಲೆಹಾಕಿ ಔಟ್ ಆದರು. ಹೀಗೆ 15.1 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 104 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ತಂಡಕ್ಕೆ ಗೆಲ್ಲಲು 29 ಎಸೆತಗಳಲ್ಲಿ 51 ರನ್ ಬೇಕಿತ್ತು.
ಹೆಟ್ಮಾಯರ್ ಔಟ್ ಆದ ಬಳಿಕ ರಿಯಾನ್ ಪರಾಗ್ ಕಣಕ್ಕಿಳಿದರು. ಹೀಗೆ ದೇವದತ್ ಪಡಿಕ್ಕಲ್ ಹಾಗೂ ರಿಯಾನ್ ಪರಾಗ್ ಜೋಡಿ ಈ ಗುರಿಯನ್ನು ಬೆನ್ನತ್ತಲು ಯತ್ನಿಸಿತ್ತು. ಆದರೆ ಅಂತಿಮ ಓವರ್ವರೆಗೂ ಒಟ್ಟಿಗೆ ಆಡಿದ ಈ ಜೋಡಿ ತಂಡಕ್ಕೆ ಜಯ ತರುವಲ್ಲಿ ಸಫಲವಾಗಲಿಲ್ಲ. ದೇವದತ್ ಪಡಿಕ್ಕಲ್ 4 ಬೌಂಡರಿ ಹಾಗೂ ರಿಯಾನ್ ಪರಾಗ್ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ್ದು ಬಿಟ್ಟರೆ ಎಲ್ಲಿಯೂ ಹೆಚ್ಚು ರನ್ ಬಾರಿಸುವಲ್ಲಿ ಯಶಸ್ವಿಯಾಗಲಿಲ್ಲ.
ಈ ಜೋಡಿ ಅಂತಿಮ ಓವರ್ನಲ್ಲಿ ಗೆಲ್ಲಲು 19 ರನ್ಗಳ ಅಗತ್ಯತೆ ಇದೆ ಎನ್ನುವ ಮಟ್ಟಕ್ಕೆ ತಂದು ನಿಲ್ಲಿಸಿತು. ಮೊದಲ ಎಸೆತದಲ್ಲಿ ರಿಯಾನ್ ಪರಾಗ್ ಬೌಂಡರಿ ಬಾರಿಸಿ ಎರಡನೇ ಎಸೆತದಲ್ಲಿ ಲೆಗ್ ಬೈಸ್ ಆಗಿ ಒಂದು ರನ್ ಓಡಿದರು. ಬ್ಯಾಟಿಂಗ್ಗೆ ಬಂದ ಪಡಿಕ್ಕಲ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಧ್ರುವ್ ಗೋಲ್ಡನ್ ಡಕ್ಔಟ್ ಆದರು. ಅಂತಿಮವಾಗಿ ಕಣಕ್ಕಿಳಿದ ಅಶ್ವಿನ್ 2 ಹಾಗೂ 1 ರನ್ ಬಾರಿಸಿದರು. ಈ ಮೂಲಕ ಪಂದ್ಯ ಅಂತ್ಯಗೊಂಡಿತು.
ದೇವದತ್ ಪಡಿಕ್ಕಲ್ 21 ಎಸೆತಗಳಲ್ಲಿ 26 ರನ್ ಬಾರಿಸಿದರೆ, ರಿಯಾನ್ ಪರಾಗ್ 12 ಎಸೆತಗಳಲ್ಲಿ 15 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಮೂಲಕ ಗೆಲ್ಲುವಂತ ಪಂದ್ಯವನ್ನು ರಿಯನ್ ಪರಾಗ್ ಹಾಗೂ ದೇವದತ್ ಪಡಿಕ್ಕಲ್ ಅಂತಿಮ ಹಂತದಲ್ಲಿ ಅಬ್ಬರಿಸಲಾಗದೇ ಸೋಲುವಂತೆ ಮಾಡಿದ್ದಾರೆ. ಹೀಗೆ ತಂಡ ಸೋಲಲು ಪ್ರಮುಖ ಕಾರಣರಾದ ದೇವದತ್ ಪಡಿಕ್ಕಲ್ ಹಾಗೂ ರಿಯಾನ್ ಪರಾಗ್ ವಿರುದ್ಧ ನೆಟ್ಟಿಗರು ಟ್ರೋಲ್ ಮೂಲಕ ಕಿಡಿಕಾರಿದ್ದಾರೆ. ಅಲ್ಲದೇ ಇಂತಹ ಆಟಗಾರರನ್ನು ನಂಬಿ ಪದೇ ಪದೇ ಅವಕಾಶ ನೀಡುತ್ತಿರುವ ರಾಜಸ್ಥಾನ್ ರಾಯಲ್ಸ್ ತಂಡವೇ ಪಂದ್ಯದ ಸೋಲಿಗೆ ಪ್ರಮುಖ ಕಾರಣ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಅಲ್ಲದೇ ರಿಯಾನ್ ಪರಾಗ್ ಹಾಗೂ ದೇವದತ್ ಪಡಿಕ್ಕಲ್ ರಾಜಸ್ಥಾನ್ ರಾಯಲ್ಸ್ ಪರ ಆಡಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಗೆಲ್ಲಿಸಿದರು, ಇವರಿಬ್ಬರು ಲಕ್ನೋ ತಂಡಕ್ಕೆ ಇಂಪ್ಯಾಕ್ಟ್ ಪ್ಲೇಯರ್ಸ್ ಎಂದು ಕಾಲೆಳೆದಿದ್ದಾರೆ.