
ನಿನ್ನೆ ( ಮೇ 14 ) ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಎರಡು ಪಂದ್ಯಗಳು ಜರುಗಿದವು.
ಮಧ್ಯಾಹ್ನ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 112 ರನ್ಗಳ ಗೆಲುವನ್ನು ಸಾಧಿಸಿದರೆ, ರಾತ್ರಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ 6 ವಿಕೆಟ್ಗಳ ಜಯವನ್ನು ಕಂಡಿತು.
ಇನ್ನು ಈ ಗೆಲುವಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಹೌದು, ಈ ಪಂದ್ಯದಲ್ಲಿ ಗೆದ್ದು 2 ಅಂಕಗಳನ್ನು ಪಡೆದುಕೊಳ್ಳುವುದು ಮಾತ್ರವಲ್ಲದೇ ಒಳ್ಳೆಯ ನೆಟ್ ರನ್ ರೇಟ್ ಅನ್ನೂ ಸಹ ಸಂಪಾದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿಕೆ ಕಂಡಿತು.
ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಫಾಫ್ ಡು ಪ್ಲೆಸಿಸ್ ಕೈ ಹಿಡಿದ ಕಾರಣ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿ ಎದುರಾಳಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲ್ಲಲು 172 ರನ್ಗಳ ಗುರಿಯನ್ನು ನೀಡಿತು.
ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲಗೊಂಡ ರಾಜಸ್ಥಾನ್ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲಿಂಗ್ ದಾಳಿಗೆ ನಲುಗಿ 10.3 ಓವರ್ಗಳಲ್ಲಿ ಕೇವಲ 59 ರನ್ಗಳಿಗೆ ಆಲ್ಔಟ್ ಆಯಿತು.
ರಾಜಸ್ಥಾನ್ ರಾಯಲ್ಸ್ ಆರ್ಸಿಬಿ ಬೌಲಿಂಗ್ ದಾಳಿಗೆ ಅಕ್ಷರಶಃ ಮಕಾಡೆ ಮಲಗಿತು. ತಂಡದ ಪರ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಕಣಕ್ಕಿಳಿದರು. ಜೈಸ್ವಾಲ್ ಸಿರಾಜ್ ಎಸೆದ ಮೊದಲ ಓವರ್ನ ಎರಡನೇ ಎಸೆತಕ್ಕೆ ಕೊಹ್ಲಿಗೆ ಕ್ಯಾಚ್ ನೀಡಿ ಡಕ್ಔಟ್ ಆದರೆ, ಬಟ್ಲರ್ ಪಾರ್ನೆಲ್ ಎಸೆದ ಎರಡನೇ ಓವರ್ನ ಎರಡನೇ ಎಸೆತದಲ್ಲಿ ಸಿರಾಜ್ಗೆ ಕ್ಯಾಚ್ ನೀಡಿ ಡಕ್ಔಟ್ ಆದರು.
ಹೀಗೆ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್ ಮುಗಿಯುವ ತನಕ ಎಲ್ಲಿಯೂ ಸುಧಾರಿಸಿಕೊಳ್ಳಲೇ ಇಲ್ಲ. ಪವರ್ಪ್ಲೇ ಒಳಗೆಯೇ ತನ್ನ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ತಂಡದ ಪರ ಶಿಮ್ರಾನ್ ಹೆಟ್ಮಾಯೆರ್ ಕೆಲ ಕಾಲ ಬಿರುಸಿನ ಬ್ಯಾಟಿಂಗ್ ನಡೆಸಿದರಾದರೂ ಇತರೆ ಆಟಗಾರರ ಸಹಕಾರ ದೊರಕದ ಕಾರಣ ತಂಡ ಎಲ್ಲಿಯೂ ಸುಧಾರಿಸಿಕೊಳ್ಳಲಿಲ್ಲ.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಸಂಜು ಸ್ಯಾಮ್ಸನ್ 4 ರನ್, ಜೋ ರೂಟ್ 10, ದೇವದತ್ ಪಡಿಕ್ಕಲ್ 4, ಧ್ರುವ್ ಜುರೆಲ್ 1, ರವಿಚಂದ್ರನ್ ಅಶ್ವಿನ್ ಡಕ್ ಔಟ್, ಆಡಂ ಜಂಪಾ 2, ಕೆಎಂ ಆಸಿಫ್ ಡಕ್ಔಟ್ ಆದರೆ ಸಂದೀಪ್ ಶರ್ಮಾ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದುಕೊಂಡರು. ಮಧ್ಯದಲ್ಲಿ ಅಬ್ಬರಿಸಿದ ಶಿಮ್ರಾನ್ ಹೆಟ್ಮಾಯೆರ್ 19 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 35 ರನ್ ಚಚ್ಚಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವೇಯ್ನ್ ಪಾರ್ನೆಲ್ 3 ವಿಕೆಟ್ ಪಡೆದರೆ, ಕರ್ಣ್ ಶರ್ಮಾ ಹಾಗೂ ಮೈಕೆಲ್ ಬ್ರೇಸ್ವೆಲ್ ತಲಾ ಎರಡು ವಿಕೆಟ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
ಹೀಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಆರ್ಸಿಬಿ ಬೌಲಿಂಗ್ ವಿಭಾಗ ಕಡಿಮೆ ಮೊತ್ತಕ್ಕೆ ಆಲ್ಔಟ್ ಮಾಡಿ ಭರ್ಜರಿ ಗೆಲುವು ಕಾಣುವ ಹಾಗೆ ಮಾಡಿತು. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಮೂರನೇ ಕಡಿಮೆ ರನ್ ಮೊತ್ತವೂ ಸಹ ಇದಾಗಿದೆ. ಇಂತಹ ಅಮೋಘ ಗೆಲುವು ಸಾಧಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡ್ರೆಸಿಂಗ್ ರೂಮ್ನಲ್ಲಿ ಸಂಭ್ರಮ ಮನೆ ಮಾಡಿತ್ತು.
ಆಟಗಾರರು ಪಂದ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಈ ವಿಡಿಯೊವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡುಗಡೆ ಮಾಡಿದ್ದು, ಇದರಲ್ಲಿ ವಿರಾಟ್ ಕೊಹ್ಲಿ ಹೇಳಿರುವ ಮಾತುಗಳು ವೈರಲ್ ಆಗಿದೆ. ಹೌದು, 'ನಾನೇನಾದರೂ ಬೌಲಿಂಗ್ ಮಾಡಿದ್ದರೆ ರಾಜಸ್ಥಾನ್ ರಾಯಲ್ಸ್ 40 ರನ್ಗಳಿಗೆ ಆಲ್ಔಟ್ ಆಗುತ್ತಿತ್ತು' ಎಂದು ಹೇಳಿದ್ದಾರೆ. ಈ ತುಣುಕು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.