ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸತತವಾಗಿ 5 ಸೋಲುಗಳನ್ನು ಕಂಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 23 ರನ್ಗಳಿಂದ ಗೆಲುವು ಕಂಡಿತು. ಸತತ ಐದು ಸೋಲುಗಳನ್ನು ಕಂಡ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿಯನ್ನು ರವಿಶಾಸ್ತ್ರಿ ಟೀಕೆ ಮಾಡಿದ್ದಾರೆ.
ಐಪಿಎಲ್ 2023ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯಾವ ಲೆಕ್ಕಾಚಾರವೂ ಸರಿಯಾಗಿ ನಡೆಯುತ್ತಿಲ್ಲ. ಆಡಿದ ಐದೂ ಪಂದ್ಯಗಳನ್ನು ಸೋಲುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ತಂಡದ ನಾಯಕ ಡೇವಿಡ್ ವಾರ್ನರ್ ಹೊರತುಪಡಿಸಿ ಉಳಿದ ಬ್ಯಾಟರ್ ಗಳು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ತಂಡವಾಗಿ ಆಡುವಲ್ಲಿ ವಿಫಲವಾಗಿರುವುದೇ ತಂಡದ ಸೋಲಿಗೆ ಕಾರಣವಾಗಿದೆ.

ಶನಿವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡಿತು. 200ಕ್ಕಿಂತ ಹೆಚ್ಚಿನ ರನ್ ಗಳಿಸುವ ಹಂತದಲ್ಲಿದ್ದ ಆರ್ ಸಿಬಿ ಡೆಲ್ಲಿಯ ಉತ್ತಮ ಬೌಲಿಂಗ್ನಿಂದ 6 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿತು. ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರ್ ಸಿಬಿ ಬೌಲಿಂಗ್ ಎದುರು ತತ್ತರಿಸಿತು.
ಪವರ್ ಪ್ಲೇನ 6 ಓವರ್ ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 30 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕನ್ನಡಿಗ ಮನೀಶ್ ಪಾಂಡೆ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು ತಂಡವನ್ನು ಸೋಲಿನಿಂದ ತಪ್ಪಿಸಲು ಆಗಲಿಲ್ಲ. 38 ಎಸೆತಗಳಲ್ಲಿ 50 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ವಾರ್ನರ್ ಕೂಡ 19 ರನ್ ಗಳಿಸಿ ಔಟಾದರು, ಅಕ್ಷರ್ ಪಟೇಲ್ 21 ರನ್ ಗಳಿಸಿ ಔಟಾದರು. 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಗಳಿಸುವ ಮೂಲಕ 23 ರನ್ಗಳಿಂದ ಸೋಲೊಪ್ಪಿಕೊಂಡಿತು.

ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಬಳಿಕ ರವಿಶಾಸ್ತ್ರಿ ತಂಡವನ್ನು ಟೀಕಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೋಚ್ ರಿಕಿ ಪಾಂಟಿಂಗ್, ನಿರ್ದೇಶಕ ಗಂಗೂಲಿ ಇದ್ದಾಗಲೂ ತಂಡ ಗೆಲುವು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ನೆನಪಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ 5 ಪಂದ್ಯಗಳನ್ನು ಸತತವಾಗಿ ಸೋಲನುಭವಿಸಿದ್ದು, ಈ ಆವೃತ್ತಿಯಲ್ಲಿ ವಾಪಸಾತಿ ಮಾಡುವುದು ಅಸಾಧ್ಯವಾಗಿದೆ ಎಂದು ಹೇಳಿದರು.
"ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಪೃಥ್ವಿ ಶಾ, ಅನ್ರಿಚ್ ನೊಕಿಯಾ, ಅಕ್ಷರ್ ಪಟೇಲ್ರಂತಹ ಪ್ರಮುಖ ಆಟಗಾರರು ಇದ್ದಾರೆ, ಡಗೌಟ್ನಲ್ಲಿ ರಿಕಿ ಪಾಂಟಿಂಗ್, ಸೌರವ್ ಗಂಗೂಲಿ ಅವರಂತಹ ದಿಗ್ಗಜರು ಇದ್ದಾಗಲೂ ಅವರು ತಪ್ಪಿನಿಂದ ಪಾಠ ಕಲಿಯುತ್ತಿಲ್ಲ," ಎಂದು ಹೇಳಿದರು.

"ಇದು ಸೋಲುವುದರ ಬಗ್ಗೆ ಅಲ್ಲ, ಹೇಗೆ ಪಂದ್ಯಗಳನ್ನು ಸೋತರು ಎನ್ನುವ ಬಗ್ಗೆ ಯೋಚಿಸಬೇಕು. ಸತತವಾಗಿ ಐದು ಪಂದ್ಯಗಳನ್ನು ಸೋತಿರುವ ನೀವು ಗೆಲ್ಲುವ ಹಾಗೆ ಕಾಣುತ್ತಿಲ್ಲ. ಕಡಿಮೆ ಅಂತರದಲ್ಲಿ ಪಂದ್ಯಗಳನ್ನು ಸೋಲುವುದು ಒಂದು ವಿಚಾರ, ಆದರೆ ಎದುರಾಳಿ ತಂಡ ಸಂಪೂರ್ಣವಾಗಿ ಮೇಲುಗೈ ಸಾಧಿಸಿ ಗೆಲ್ಲುತ್ತಿರುವಾಗ ಇದು ಸಮಾಧಾನ ನೀಡುವುದಿಲ್ಲ" ಎಂದು ಹೇಳಿದರು.
ಸೌರವ್ ಗಂಗೂಲಿ ತಂಡದಲ್ಲಿ ಎಲ್ಲವೂ ಸರಿ ಇದೆ ಎಂದು ಭಾವಿಸಿರುವಂತಿದೆ ಎಂದು ರವಿಶಾಸ್ತ್ರಿ ಟೀಕೆ ಮಾಡಿದ್ದಾರೆ. ಸತತವಾಗಿ ಸೋಲು ಕಾಣುತ್ತಿದ್ದರೂ ಗಂಗೂಲಿ ಇದರ ಬಗ್ಗೆ ಗಂಭೀರವಾಗಿ ಯೋಚಿಸಿದಂತೆ ಕಾಣಲಿಲ್ಲ ಎಂದು ಹೇಳಿದ್ದಾರೆ. ರಿಷಬ್ ಪಂತ್ ಅನುಪಸ್ಥಿತಿ ಈ ಬಾರಿ ಡೆಲ್ಲಿ ತಂಡವನ್ನು ಹೆಚ್ಚಾಗಿ ಕಾಡುತ್ತಿದೆ.