ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ದಾಖಲೆಯ ಐದನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿದ್ದು ಮುಂಬೈ ಇಂಡಿಯನ್ಸ್ ದಾಖಲೆ ಸರಿಗಟ್ಟಿದೆ. ಧೋನಿ ನಾಯಕತ್ವದಲ್ಲಿ ಸಿಎಸ್ಕೆ ತಂಡ ಮಾಡಿರುವ ಈ ವಿಶೇಷ ಸಾಧನೆಗೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ನಾಯಕ ಧೋನಿ ಬಗ್ಗೆಯೂ ಪ್ರಶಂಸೆಯ ಸುರಿಮಳೆಗಳು ಹರಿದುಬರುತ್ತಿದೆ.
ಟೀಮ್ ಇಂಡಿಯಾದ ಮಾಜಿ ಕೋಚ್, ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ರವಿ ಶಾಸ್ತ್ರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರವಿ ಶಾಸ್ತ್ರಿ ಎಂಎಸ್ ಧೋನಿ ವಿಚಾರವಾಗಿ ವಿಶೇಷ ಮಾತುಗಳನ್ನಾಡಿದ್ದು ಧೋನಿ ಹುಟ್ಟುಹಾಕಿದ ಪರಂಪರೆಯನ್ನು ಸರಿಗಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಣ್ಣಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದ ಬಳಿಕ ಮಾತನಾಡಿದ ರವಿ ಶಾಸ್ತ್ರಿ ಝಾರ್ಖಂಡ್ನಿಂದ ಬಂದಿರುವ ಎಂಎಸ್ ಧೋನಿಗೆ ದಕ್ಷಿಣ ಭಾರತದ ರಾಜ್ಯಗಳಿಂದ ದೊರೆಯುತ್ತಿರುವ ಪ್ರತಿ ಅತ್ಯದ್ಭುತ ಎಂದಿದ್ದಾರೆ ರವಿ ಶಾಸ್ತ್ರಿ. ಅಲ್ಲದೆ 250 ಐಪಿಎಲ್ ಪಂದ್ಯಗಳನ್ನು ಆಡಿರುವ ಎಂಎಸ್ ಧೋನಿ ಅವರ ಈ ಸಾಧನೆ ಅವರ ಫಿಟ್ನೆಸ್ಗೆ ದೊರೆತ ಗೌರವ ಎಂದಿದ್ದಾರೆ ಶಾಸ್ತ್ರಿ.
"ಎಂಎಸ್ ಧೋನಿ ಅವರ ಫಿಟ್ನೆಸ್ಗೆ ಅವರು ಆಡಿರುವ 250 ಐಪಿಎಲ್ ಪಂದ್ಯಗಳೇ ಗೌರವ. ಈ ಐಪಿಎಲ್ ಟೂರ್ನಿಯಲ್ಲಿ ಎಂಎಸ್ ಧೋನಿ ಹುಟ್ಟುಹಾಕಿದ ಪರಂಪರೆಯನ್ನು ಯಾರಿಂದಲೂ ಹಿಂದಿಕ್ಕಲು ಸಾಧ್ಯವಿಲ್ಲ. ಸಂಪೂರ್ಣ ಚೆನ್ನೈ, ತಮಿಳುನಾಡಿನಿಂದ ಅವರು 'ತಲಾ' ಎಂದು ಕರೆಸಿಕೊಳ್ಳುತ್ತಾರೆ. ಝಾರ್ಖಂಡ್ನಿಂದ ಬಂದ ಆಟಗಾರನೋರ್ವ ದಕ್ಷಿಣದ ರಾಜ್ಯದಿಂದ ಪಡೆದುಕೊಳ್ಳುತ್ತಿರುವ ಪ್ರೀತಿ ಆದರತೆ ಅವರ ಶ್ರೇಷ್ಠತೆಯನ್ನು ತಿಳಿಸುತ್ತದೆ" ಎಂದಿದ್ದಾರೆ ರವಿ ಶಾಸ್ತ್ರಿ.
ಇನ್ನು ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಎಂಎಸ್ ಧೋನಿ ಅವರಿಗೆ ಮತ್ತೊಮ್ಮೆ ನಿವೃತ್ತಿಯ ಬಗ್ಗೆ ಪ್ರಶ್ನೆ ಎದುರಾಯಿತು. ಈ ಸಂದರ್ಭದಲ್ಲಿ ಎಂಎಸ್ ಧೋನಿ "ಈ ಹಂತದಿಂದ ನಿವೃತ್ತಿ ಹೇಳುವುದು ಬಹಳ ಸುಲಭ. ಆದರೆ ಮತ್ತೆ ಬಂದು ಆಡುವುದು ಬಹಳ ಕಠಿಣ. ಆದರೆ ಅಭಿಮಾನಿಗಳಿಂದ ನಾನು ಪಡೆದ ಪ್ರೀತಿ ಆದರತೆಯ ಕಾಣದಿಂದಾಗಿ ಕಠಿಣ ಹಾದಿಯನ್ನು ನಾನು ಹಿಡಿಯಲು ನಿರ್ಧರಿಸಿದ್ದೇನೆ. ಅದಕ್ಕಾಗಿ ನಾನು ಸಾಕಷ್ಟು ಕಠಿಣ ಪರಿಶ್ರಮಪಡಬೇಕು. ಮುಂದಿನ 6-7 ತಿಂಗಳುಗಳ ಸಮಯಾವಕಾಶ ಇದ್ದು ಆ ಸಂದರ್ಭದಲ್ಲಿ ನನ್ನ ದೇಹ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ನೋಡುತ್ತೇನೆ. ನನ್ನ ದೇಹ ಉತ್ತವಾಗಿ ಸ್ಪಂದಿಸಿದರೆ ಅದು ಅಭಿಮಾನಿಗಳಿಗೆ ನನ್ನ ಕಡೆಯಿಂದ ಉಡುಗೊರೆ" ಎಂದಿದ್ದಾರೆ ಎಂಎಸ್ ಧೋನಿ.