ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯಲ್ಲಿ ಎಲ್ಲಾ ತಂಡಗಳು ಕೂಡ ತೀವ್ರ ಪೈಪೋಟಿ ನಡೆಸುತ್ತಿದ್ದು ಟೂರ್ನಿಯಲ್ಲಿ ಮುಂದಿನ ಹಂತಕ್ಕೇರಲು ಪ್ರಯತ್ನಿಸುತ್ತಿದೆ. ಈವರೆಗಿನ ಪಂದ್ಯಾವಳಿಯಲ್ಲಿ ಸಾಕಷ್ಟು ಆಟಗಾರರಿಂದ ಅದ್ಭುತ ಪ್ರದರ್ಶನಗಳು ವ್ಯಕ್ತವಾಗಿದೆ. ಆದರೆ ಈ ಬಾರಿ ಅಮೋಘ ಪ್ರದರ್ಶನ ನೀಡುವ ಮೂಲಕ ಎಲ್ಲಾ ಕ್ರಿಎಕಟ್ ಅಭಿಮಾನಿಗಳ ಗಮನಸೆಳೆದಿರುವ ಆಟಗಾರ ಎಂದರೆ ಅದು ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್. ಕೆಲ ಅಸಾಧಾರಣ ಇನ್ನಿಂಗ್ಸ್ಗಳನ್ನು ಆಡಿರುವ ಜೈಸ್ವಾಲ್ ಪ್ರದರ್ಶನದ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಐಪಿಎಲ್ನಲ್ಲಿ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರವಿ ಶಾಸ್ತ್ರಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ ವಿಚಾರವಾಗಿ ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದಾರೆ. ಟೀಮ್ ಇಂಡಿಯಾದ ಆಯ್ಕೆಗಾರರನ್ನು ಉದ್ದೇಶಿಸಿ ಮಾತನಾಡಿದ ಶಾಸ್ತ್ರಿ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮೇಲೆ ಕಣ್ಣಿಡಿ ಎಂದು ಬೊಟ್ಟು ಮಾಡಿ ಹೇಳಿದ್ದಾರೆ. ಅಲ್ಲದೆ ಈ ಆಟಗಾರ ಶೀಗ್ರದಲ್ಲಿಯೇ ಭಾರತ ತಂಡದಲ್ಲಿ ಸ್ಥಾನವನ್ನು ಪಡೆಯುವ ವಿಶ್ವಾಸವಿದೆ ಎಂದು ಕೂಡ ಶಾಸ್ತ್ರಿ ಹೇಳಿದ್ದಾರೆ.

ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಟೂರ್ನಿಯುದ್ದಕ್ಕೂ ಅತ್ಯಂತ ಸ್ಥಿರ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. 21ರ ಹರೆಯದ ಆಟಗಾರ 575 ರನ್ಗಳನ್ನು ಈ ಆವೃತ್ತಿಯಲ್ಲಿ ಗಳಿಸಿದ್ದು ಆರೆಂಜ್ ಟ್ರೋಫಿ ರೇಸ್ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಕಳೆದ ಐದು ಪಂದ್ಯಗಳಲ್ಲಿ ಜೈಸ್ವಾಲ್ ಎರಡು ಅರ್ಧ ಶತಕ ಸಿಡಿಸಿದ್ದು ಒಂದು ಅಮೋಘ ಶತಕ ಸಿಡಿಸಿದ್ದಾರೆ. ಅಲ್ಲದೆ ಈಡನ್ ಗಾರ್ಡನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ 13 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧ ಶತಕ ಸಿಡಿಸಿದ ದಾಖಲೆಯನ್ನು ಕೂಡ ಬರೆದಿದ್ದಾರೆ.
ಈ ಪ್ರಮಾಣದ ಸ್ಥಿರ ಪ್ರದರ್ಶನದ ಕಾರಣದಿಂದಾಗಿ ಅನೇಕ ಕ್ರಿಕೆಟ್ ಪಂಡಿತರು ಟೀಮ್ ಇಂಡಿಯಾದಲ್ಲಿ ಜೈಸ್ವಾಲ್ ಸ್ಥಾನ ನೀಡಬೇಕು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ಸಾಲಿಗೆ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಕೂಡ ಸೇರಿಕೊಂಡಿದ್ದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಆಯ್ಕೆಗಾರರು ಜೈಸ್ವಾಲ್ ಆಟವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದಿದ್ದಾರೆ ರವಿಶಾಸ್ತ್ರಿ.
"ಆಯ್ಕೆಗಾರರು ಜೈಸ್ವಾಲ್ ಆಟವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಆತ ಶೀಘ್ರದಲ್ಲಿಯೇ ಭಾರತದ ಪರವಾಗಿ ಆಡುವ ಆಟಗಾರ. ಅತನ ಬೆಳವಣಿಒಗೆಯ ಅತ್ಯುತ್ತಮ ಅಂಶವೆಂದರೆ ಆತನ ಗ್ರಾಫ್ ಏರಿರುವ ರೀತಿ. ಆತನ ಆಟದಲ್ಲಿ ಬಲ ಇದೆ, ಟೈಮಿಂಗ್ ಇದೆ. ಆತ ಅತ್ಯುತ್ತಮ ಭವಿಷ್ಯ ಹೊಂದಿದ್ದಾರೆ" ಎಂದು ರವಿ ಶಾಸ್ತ್ರಿ ಹೇಳಿಕೆ ನೀಡಿದ್ದಾರೆ.
ಇನ್ನು ಭಾನುವಾರ ರಾಜಸ್ಥಾನ್ ರಾಯಲ್ಸ ತಂಡ ಆರ್ಸಿಬಿ ವಿರುದ್ಧ ಜೈಪುರದ ಸವಾಯ್ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದೆ. ಪ್ಲೇಆಫ್ಗೇರುವ ಹಂತದಲ್ಲಿ ಎರಡು ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು ಯಾವ ತಂಡ ಗೆಲುವು ಸಾಧಿಸುತ್ತದೆಯೇ ಆ ತಂಡಕ್ಕೆ ಪ್ಲೇಆಫ್ ಅವಕಾಶ ಹೆಚ್ಚಿದೆ.