ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ವಿಜಯ್ ಶಂಕರ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದರೂ ಗುಜರಾತ್ ಟೈಟನ್ಸ್ ಅವರ ಮೇಲೆ ನಂಬಿಕೆ ಇಟ್ಟುಕೊಂಡು, ತಂಡದಲ್ಲಿ ಉಳಿಸಿಕೊಂಡಿತ್ತು. ಫ್ರಾಂಚೈಸಿ ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ವಿಜಯ್ ಶಂಕರ್ ಮೂರು ಪಂದ್ಯಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಶನಿವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. 24 ಎಸೆತಗಳಲ್ಲಿ 4 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ 63 ರನ್ ಗಳಿಸಿ ಮಿಂಚಿದರು. ಕೊನೆ 2 ಓವರ್ ನಲ್ಲಿ 45 ರನ್ ಗಳಿಸುವ ಮೂಲಕ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 204 ರನ್ ಗಳಿಸಿತು. ವಿಜಯ್ ಬ್ಯಾಟಿಂಗ್ ಬಗ್ಗೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.

ನಾಲ್ಕು ವರ್ಷಗಳ ಹಿಂದೆ ಕೂಡ ವಿಜಯ್ ಶಂಕರ್ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ, 2019ರ ಏಕದಿನ ವಿಶ್ವಕಪ್ಗಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಅನುಭವಿ ಬ್ಯಾಟರ್ ಅಂಬಾಟಿ ರಾಯುಡು ಅವರನ್ನು ಕಡೆಗಣಿಸಿ ವಿಕಯ್ ಶಂಕರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ನಂತರ ಅವರನ್ನು ಭಾರತ ತಂಡದಿಂದ ಕೈಬಿಡಲಾಯಿತು.

ಆತ ಕಷ್ಟಪಟ್ಟು ಮತ್ತೆ ಉತ್ತಮ ಪ್ರದರ್ಶನ ನೀಡುತ್ತಿದ್ದಾನೆ
ನಂತರ ಅಷ್ಟೇನು ಗಮನ ಸೆಳೆಯದ ವಿಜಯ್ ಶಂಕರ್ ಮರೆಯಾಗಿದ್ದರು, ಈ ಬಾರಿ ಐಪಿಎಲ್ನಲ್ಲಿ ಆಡುತ್ತಿರುವುದು ನೋಡಿ ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ 56 ರನ್ ಗಳಿಸಿದ್ದ ಅವರು, ಮೂರನೇ ಪಂದ್ಯದಲ್ಲಿ 63 ರನ್ ಗಳಿಸಿದರು. ವಿಜಯ್ ಶಂಕರ್ ಬ್ಯಾಟಿಂಗ್ ಬಗ್ಗೆ ಭಾರತದ ಮಾಜಿ ದಿಗ್ಗಜ ಕ್ರಿಕೆಟಿಗ ರವಿಶಾಸ್ತ್ರಿ ಕೂಡ ಕಾಮೆಂಟ್ ಮಾಡಿದ್ದಾರೆ.
2019 ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಮುಖ್ಯ ಕೋಚ್ ಆಗಿದ್ದ ಶಾಸ್ತ್ರಿ, ಶಂಕರ್ ಅವರ ಆಯ್ಕೆಯಾದ ರೀತಿಯನ್ನು ನೆನಪು ಮಾಡಿಕೊಂಡಿದ್ದು, ಈ ಬಾರಿಯ ಪ್ರದರ್ಶನಕ್ಕೆ ಹೋಲಿಕೆ ಮಾಡಿದ್ದಾರೆ. "ವಿಜಯ್ ಅವರು ಈ ರೀತಿಯ ಪ್ರತಿಭೆಯನ್ನು ಹೊಂದಿದ್ದಕ್ಕಾಗಿಯೇ ವಿಶ್ವಕಪ್ಗೆ ಆಯ್ಕೆಯಾಗಿರುವುದು. ಅವರು ಮತ್ತೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಮತ್ತು ಹಿಂದೆ ಸರಿಯಲಿಲ್ಲ ಎಂದು ನನಗೆ ಖುಷಿಯಾಗಿದೆ. ಅವರು ಕಠಿಣ ಸಮಯವನ್ನು ಎದುರಿಸಿದ್ದಾರೆ ಎಂದು ನಿಮಗೆ ತಿಳಿದಿದೆ. ಒಂದು ಆಪರೇಷನ್ಗೆ ಸಹ ಒಳಗಾಗಿದ್ದಾರೆ. ಆದರೂ, ಅವರು ಬಲವಾಗಿ ಮರಳಿದ್ದಾರೆ" ಎಂದು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡುತ್ತಾ ಶಾಸ್ತ್ರಿ ಹೇಳಿದರು.
"ಆತ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ, ಹೊಡೆತ ಹೊಡೆತಗಳು ಉತ್ತಮವಾಗಿದ್ದವು. ಗುಜರಾತ್ ಟೈಟಾನ್ಸ್ ಮಿಲ್ಲರ್ ಮತ್ತು ಶಂಕರ್ ಅವರನ್ನು ಪವರ್ ಹಿಟ್ಟರ್ ಗಳನ್ನಾಗಿ ಪಡೆದಿದ್ದಾರೆ. ಗುಜರಾತ್ ಉತ್ತಮವಾಗಿ ಇನ್ನಿಂಗ್ಸ್ ಆರಂಭಿಸಿದರೆ, ಕೊನೆಯ ಓವರ್ ಗಳಲ್ಲಿ ಅದು ಅಪಾಯಕಾರಿ ತಂಡವಾಗಲಿದೆ. ಶಂಕರ್ ಭಾರತ ತಂಡದಲ್ಲಿ ಮತ್ತೆ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ, ಆದರೆ ಮುಂದಿನ ಪಂದ್ಯಗಳಲ್ಲಿ ಇದೇ ರೀತಿ ಅಸಾಧಾರಣ ಪ್ರದರ್ಶನ ನೀಡಿದರೆ, ಮತ್ತೆ ಭಾರತ ತಂಡಕ್ಕಾಗಿ ಆಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ" ಎಂದು ರವಿಶಾಸ್ತ್ರಿ ಹೇಳಿದರು.