ಇಂಡಿಯನ್ ಪ್ರೀಮಿಯರ್ ಲೀಗ್ ನ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಸುಲಭವಾದ ಜಯ ತಂದುಕೊಟ್ಟರು.
ಮೊದಲ ಪಂದ್ಯದಲ್ಲಿ ಆರ್ಸಿಬಿ ಹೆಚ್ಚಾಗಿ ಗಮನ ಸೆಳೆದದ್ದು ತಂಡದ ಫೀಲ್ಡಿಂಗ್ ಮತ್ತು ಪವರ್ ಪ್ಲೇನಲ್ಲಿ ಬ್ಯಾಟಿಂಗ್ ಮಾಡಿದ ರೀತಿ. ಮೊಹಮ್ಮದ್ ಸಿರಾಜ್ ಪವರ್ ಪ್ಲೇನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದರು. ತಮ್ಮ ಎರಡನೇ ಒವರ್ನಲ್ಲೇ ಇಶಾನ್ ಕಿಶನ್ ವಿಕೆಟ್ ಪಡೆದರು. ಅಲ್ಲದೆ ರೋಹಿತ್ ಶರ್ಮಾ ಅವರನ್ನು ಔಟ್ ಮಾಡುವ ಅವಕಾಶ ಇತ್ತಾದರೂ ಕ್ಯಾಚ್ ಕೈಚೆಲ್ಲಿದ್ದರಿಂದ ನಿರಾಸೆ ಅನುಭವಿಸಿದರು.

ಜೀವದಾನ ಪಡೆದರು ರೋಹಿತ್ ಶರ್ಮಾ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ ಆಕಾಶ್ ದೀಪ್ ಬೌಲಿಂಗ್ನಲ್ಲಿ ದಿನೇಶ್ ಕಾರ್ತಿಕ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಐಪಿಎಲ್ನ ತಮ್ಮ ಮೊದಲನೇ ಪಂದ್ಯವನ್ನಾಡಿದ ರೀಸ್ ಟೋಪ್ಲಿ ಕೂಡ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಅಪಾಯಕಾರಿ ಬ್ಯಾಟರ್ ಕ್ಯಾಮೆರಾನ್ ಗ್ರೀನ್ ಅವರನ್ನು ಬೌಲ್ಡ್ ಮಾಡುವ ಮೂಲಕ ಮಿಂಚಿದರು.
ಪವರ್ ಪ್ಲೇನ್ ಆರು ಓವರ್ ಗಳಲ್ಲಿ ಕೇವಲ 29 ರನ್ ನೀಡಿ ಮೂರು ವಿಕೆಟ್ ಪಡೆದ ಆರ್ ಸಿಬಿ ಪಂದ್ಯದಲ್ಲಿ ಸ್ಪಷ್ಟವಾಗಿ ಮೇಲುಗೈ ಸಾಧಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಕೂಡ ಆರ್ ಸಿಬಿ ಉತ್ತಮ ಪ್ರದರ್ಶನ ನೀಡಿತು. ಮೈಕೆಲ್ ಬ್ರೇಸ್ ವೆಲ್ ಸೂರ್ಯ ಕುಮಾರ್ ಯಾದವ್ ಅವರ ವಿಕೆಟ್ ಪಡೆದು ಮತ್ತೆ ಆಘಾತ ನೀಡಿದರು.

ವನಿಂದು ಹಸರಂಗ ಅನುಪಸ್ಥಿತಿಯಲ್ಲಿ ಸ್ಥಾನ ಪಡೆದ ಕರನ್ ಶರ್ಮಾ ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. 4 ಓವರ್ ಗಳಲ್ಲಿ ಕೇವಲ 32 ರನ್ ನೀಡಿ 2 ವಿಕೆಟ್ ಪಡೆದರು. ಮೊದಲ 10 ಓವರ್ ಗಳಲ್ಲಿ ಕೇವಲ 55 ರನ್ ನೀಡಿದ್ದ ಆರ್ ಸಿಬಿ ಕೊನೆಯ 10 ಓವರ್ ಗಳಲ್ಲಿ 116 ರನ್ ನೀಡಿ ದುಬಾರಿಯಾದರು.
ಡೆತ್ ಓವರ್ ಬೌಲಿಂಗ್ ಸುಧಾರಣೆ ಕಾಣಬೇಕಿದೆ
ಆರ್ ಸಿಬಿ ತಂಡಕ್ಕೆ ಮೊದಲಿನಿಂದಲೂ ಬೌಲಿಂಗ್ ವಿಭಾಗದ್ದೇ ದೊಡ್ಡ ಸಮಸ್ಯೆಯಿದೆ. ಕಳೆದ ಬಾರಿಯಿಂದ ಅದು ಸುಧಾರಣೆಯಾಗುತ್ತಿರುವುದು ಉತ್ತಮ ವಿಷಯ. ಜೋಶ್ ಹೇಜಲ್ವುಡ್ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ರೀಸ್ ಟೋಪ್ಲಿ ಕೊನೆಯ ಎರಡು ಓವರ್ ಬೌಲಿಂಗ್ ಮಾಡದಿರುವುದು ತಂಡಕ್ಕೆ ಹಿನ್ನಡೆಯಾದರೂ, ಅನುಭವಿಗಳಾದ ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ.

ಮೊದಲ ಮೂರು ಓವರ್ ನಲ್ಲಿ ಕೇವಲ 5 ರನ್ ನೀಡಿದ್ದ ಮೊಹಮ್ಮದ್ ಸಿರಾಜ್ 4ನೇ ಓವರ್ ನಲ್ಲಿ 16 ರನ್ ನೀಡಿದರು. 19ನೇ ಓವರ್ ನಲ್ಲಿ 5 ವೈಡ್ ಬಾಲ್ ಎಸೆದರು. ಹರ್ಷಲ್ ಪಟೇಲ್ ಕೂಡ ಕೊನೆಯ ಓವರ್ ನಲ್ಲಿ 22 ರನ್ ನೀಡಿ ದುಬಾರಿಯಾದರು. ಎರಡು ಓವರ್ ಗಳಲ್ಲಿ ಮುಂಬೈ ಇಂಡಿಯನ್ಸ್ 38 ರನ್ ಕಲೆಹಾಕಿತು. ಮುಂದಿನ ಪಂದ್ಯಗಳಲ್ಲಿ ಆರ್ ಸಿಬಿ ಈ ವಿಚಾರದಲ್ಲಿ ಹೆಚ್ಚಿನ ಕೆಲಸ ಮಾಡಬೇಕಿದೆ. ಬ್ಯಾಟಿಂಗ್ ವಿಭಾಗದ ಜೊತೆ ಬೌಲರ್ ಗಳು ಮಿಂಚಿದರೆ ಮಾತ್ರ ಆರ್ ಸಿಬಿ ತಂಡಕ್ಕೆ ಗೆಲುವಿನ ಸಾಧ್ಯತೆ ಹೆಚ್ಚಾಗಿರುತ್ತದೆ.