ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಮೊದಲ ಎರಡೂ ಪಂದ್ಯಗಳಲ್ಲೇ ತಮ್ಮ ಬಲ ಮತ್ತು ದೌರ್ಬಲ್ಯವನ್ನು ಜಗಜ್ಜಾಹೀರು ಮಾಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲನೇ ಪಂದ್ಯದಲ್ಲಿ 8 ವಿಕೆಟ್ಗಳ ಭರ್ಜರಿ ಗೆಲುವು ಕಂಡಿದ್ದ ಆರ್ಸಿಬಿ ಕೆಕೆಆರ್ ವಿರುದ್ಧ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರಿ ಸೋಲು ಕಂಡು ಮುಖಭಂಗ ಅನುಭವಿಸಿತು.
ತನ್ನ ಮೂರನೇ ಪಂದ್ಯವನ್ನು ಈಗ ಬೆಂಗಳೂರಿನಲ್ಲಿ ಆಡಲು ಸಜ್ಜಾಗಿದೆ. ಸೋಮವಾರ (ಇಂದು) ನಡೆಯುವ ಪಂದ್ಯದಲ್ಲಿ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದ್ದಾರೆ. ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಬಲಿಷ್ಠ ತಂಡವಾಗಿದೆ. ಸ್ಫೋಟಕ ಬ್ಯಾಟರ್ ಮತ್ತು ಅತ್ಯುತ್ತಮ ವೇಗಿಗಳು ಮತ್ತು ಸ್ಪಿನ್ನರ್ ಗಳನ್ನು ಹೊಂದಿದೆ. ಕರ್ನಾಟಕದವರೇ ಆದ ಕೆಎಲ್ ರಾಹುಲ್ ಲಕ್ನೋ ತಂಡಕ್ಕೆ ನಾಯಕರಾಗಿರುವುದು ಅವರಿಗೆ ಅನುಕೂಲವಾಗಿದೆ.

ಚಿನ್ನಸ್ವಾಮಿ ಅಂಗಳದಲ್ಲಿ ಆಡಿದ ಅಪಾರ ಅನುಭವ ಹೊಂದಿರುವ ಕೆಎಲ್ ರಾಹುಲ್ ಮತ್ತು ಕೃಷ್ಣಪ್ಪ ಗೌತಮ್ ಆರ್ಸಿಬಿಗೆ ಸವಾಲಾಕುವ ಉತ್ಸಾಹದಲ್ಲಿದ್ದಾರೆ. ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಕ್ವಿಂಟನ್ ಡಿ ಕಾಕ್ರಂತಹ ಸ್ಫೋಟಕ ಬ್ಯಾಟಿಂಗ್ ಪಡೆ ಇದೆ. ರವಿ ಬಿಷ್ಣೋಯ್, ಮಾರ್ಕ್ ವುಡ್, ಅಮಿತ್ ಮಿಶ್ರಾರಂತಹ ಅನುಭವಿ ಬೌಲರ್ ಗಳು ತಂಡದ ಶಕ್ತಿಯಾಗಿದ್ದಾರೆ.

ಸ್ಪಿನ್ ವಿರುದ್ಧ ಆಡದಿದ್ದರೆ ಉಳಿಗಾಲವಿಲ್ಲ
ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ತಂಡದ ಆಟಗಾರರು ಸ್ಪಿನ್ನರ್ ಗಳ ವಿರುದ್ಧ ಕಳಪೆ ಪ್ರದರ್ಶನ ನೀಡಿದರು. 9 ವಿಕೆಟ್ಗಳು ಸ್ಪಿನ್ನರ್ ಗಳು ಪಡೆದುಕೊಳ್ಳುವ ಮೂಲಕ ಆರ್ ಸಿಬಿ ದೌರ್ಬಲ್ಯ ಏನು ಎಂದು ಎಲ್ಲಾ ತಂಡಗಳಿಗೆ ತಿಳಿಸಿಕೊಟ್ಟಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ರವಿ ಬಿಷ್ಣೋಯ್, ಕೃನಾಲ್ ಪಾಂಡ್ಯ, ಅಮಿತ್ ಮಿಶ್ರಾ ರಂತಹ ಸ್ಪಿನ್ನರ್ ಗಳಿದ್ದು ಆರ್ ಸಿಬಿ ಬ್ಯಾಟರ್ ಗಳ ವಿರುದ್ಧ ತಂತ್ರ ರೂಪಿಸಿರುತ್ತಾರೆ.
ಫಾಫ್ ಪಡೆ ಈ ಸ್ಪಿನ್ ಅಸ್ತ್ರವನ್ನು ಹೇಗೆ ಎದುರಿಸುತ್ತದೆ ಎಂದು ಕಾದು ನೋಡಬೇಕಿದೆ. ಮ್ಯಾಕ್ಸ್ವೆಲ್, ಬ್ರೇಸ್ವೆಲ್ ಸ್ಪಿನ್ ವಿರುದ್ಧ ಉತ್ತಮ ಪ್ರದರ್ಶನ ನೀಡಬೇಕಿದೆ. ಕೊಹ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಸ್ಪಿನ್ನರ್ ಗಳ ವಿರುದ್ಧ ರನ್ ಗಳಿಸಲು ಪರದಾಡುತ್ತಿದ್ದಾರೆ. ಫಾಫ್ ಡು ಪ್ಲೆಸಿಸ್ ತಂಡದ ಈ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಗಂಭಿರವಾಗಿ ಚಿಂತನೆ ಮಾಡಬೇಕಿದೆ.

ಬೌಲಿಂಗ್ ವಿಭಾಗದಲ್ಲಿ ಸುಧಾರಿಸಲೇಬೇಕು
ಆರ್ ಸಿಬಿ ತಂಡಕ್ಕೆ ಈ ಬಾರಿ ಕೂಡ ಬೌಲಿಂಗ್ ವಿಭಾಗದಲ್ಲೇ ದೊಡ್ಡ ತಲೆನೋವಾಗಿದೆ. ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ಹೆಚ್ಚಿನ ರನ್ ಕೊಡುತ್ತಿದ್ದಾರೆ. ಆರಂಭದ ಹಂತದಲ್ಲಿ ಉತ್ತಮ ಬೌಲಿಂಗ್ ಮಾಡಿದರು ಆರ್ ಸಿಬಿ ಡೆತ್ ಬೌಲಿಂಗ್ ಕಳಪೆಯಾಗಿದೆ. ಮೊದಲ ಎರಡೂ ಪಂದ್ಯಗಳಲ್ಲಿ ಇದನ್ನು ಈಗಾಗಲೇ ನೋಡಿದ್ದೇವೆ. ಹರ್ಷಲ್ ಪಟೇಲ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ.
ಟೋಪ್ಲಿ ಗಾಯಗೊಂಡಿದ್ದು ತಂಡಕ್ಕೆ ಹಿನ್ನಡೆಯಾಗಿದೆ. ಡೇವಿಡ್ ವಿಲ್ಲಿ ಕೋಲ್ಕತ್ತಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದು ತಂಡಕ್ಕೆ ನಿರಾಳವಾದರೂ, ಭಾರತೀಯ ವೇಗಿಗಳು ಕಳಪೆ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ನೋ ಬಾಲ್, ವೈಡ್ಗಳನ್ನು ಕಡಿಮೆ ಮಾಡಬೇಕಿದೆ. ಇಲ್ಲವಾದರೆ ಆರ್ ಸಿಬಿಗೆ ದೊಡ್ಡ ಹಿನ್ನಡೆಯಾಗಲಿದೆ.