ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿಯೂ ಆರ್ಸಿಬಿ ತಂಡ ಸೋಲು ಕಂಡಿದೆ. ಈ ಮೂಲಕ ಗೆಲುವಿನ ಲಯದಲ್ಲಿದ್ದ ಆರ್ಸಿಬಿ ತವರಿನಲ್ಲಿಯೇ ಸೋಲಿನ ಮುಖಭಂಗಕ್ಕೆ ಒಳಗಾದಂತಾಗಿದೆ. ಇನ್ನು ಕೆಕೆಆರ್ ವಿರುದ್ಧದ ಎರಡು ಪಂದ್ಯದಲ್ಲಿಯೂ ಆರ್ಸಿಬಿ ಸೋಲಿನ ಅವಮಾನಕ್ಕೆ ತುತ್ತಾಗಿರುವುದು ವಿಪರ್ಯಾಸ.
ಆರ್ಸಿಬಿ ಈ ಟೂರ್ನಿಯಲ್ಲಿ ಅನುಭವಸಿದ ನಾಲ್ಕನೇ ಸೋಲು. ಈ ನಾಲ್ಕು ಸೋಲಿನಲ್ಲಿಯೂ ಆರ್ಸಿಬಿ ತಂಡ ಎಡವಿದ್ದು ನಿರ್ದಿಷ್ಟ ಹಂತಗಳಲ್ಲಿ. ಈ ಬಾರಿ ಅದಕ್ಕೆ ಮತ್ತೊಂದು ಹೊಸ ವೈಫಲ್ಯ ಸೇರ್ಪಡೆಯಾಗಿದೆ ಎಂಬುದು ವಿಪರ್ಯಾಸ. ಹೀಗಾಗಿ ಆರ್ಸಿಬಿ ತಂಡ ಅಭಿಮಾನಿಗಳನ್ನು ಮತ್ತಷ್ಟು ನಿರಾಸೆಗೆ ಒಳಪಡಿಸಿದೆ.

ಹಾಗಾದರೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಮಾಡಿದ ಆ ತಪ್ಪುಗಳು ಯಾವುದು? ಇಲ್ಲಿದೆ ಮುಂದೆ ಓದಿ..
ಅಗ್ರ ಕ್ರಮಾಂಕದ ಮೇಲೆ ಅತಿಯಾದ ಅವಲಂಬನೆ
ಹೌದು.. ಇದು ಅತ್ಯಂತ ಸ್ಪಷ್ಟ. ಆರ್ಸಿಬಿ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ಕ್ರಮಾಂಕದ ಮೂವರು ಆಟಗಾರರನ್ನಷ್ಟೇ ನೆಚ್ಚಿಕೊಂಡಿದೆ. ಉಳಿದ ಆಟಗಾರರಿಂದ ಸಾಧಾರಣ ಪ್ರದರ್ಶನ ಕುಡ ಬಾರದಿರುವುದು ದುರಂತ. ಅವಕಾಶ ಸಿಕ್ಕಾಗಲೂ ಬಳಸಿಕೊಳ್ಳಲು ಸಾಧ್ಯವಾಗದಿರುವುದು ಆರ್ಸಿಬಿ ತಂಡಕ್ಕೆ ಮತ್ತೆ ಮತ್ತೆ ಹೊಡೆತ ಬೀಳುವಂತೆ ಮಾಡಿದೆ. ಚಿನ್ನಸ್ವಾಮಿಯಲ್ಲಿ ನಡೆದ ಪಂದ್ಯದಲ್ಲಿಯೂ ತಂಡದ ಪರವಾಗಿ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿದ ಕಾಣ ಆರ್ಸಿಬಿ ಹೋರಾಟದ ಪ್ರದರ್ಶನ ನೀಡಲು ಸಾಧ್ಯವಾಯಿತು. ಉಳಿದಂತೆ ಯಾವ ಆಟಗಾರರಿಂದಲೂ ನಿರೀಕ್ಷಿತ ಪ್ರದರ್ಶನ ಬಾರಲಿಲ್ಲ.
ಸ್ಪಿನ್ನರ್ಗಳಿಗೆ ಆರ್ಸಿಬಿ ದಾಂಡಿಗರು ಸುಲಭ ತುತ್ತು
ಆರ್ಸಿಬಿ ಬ್ಯಾಟರ್ಗಳು ಸ್ಪಿನ್ನರ್ಗಳಿಗೆ ಸುಲಭವಾಗಿ ಆಹಾರವಾಗುತ್ತಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಇದು ಮತ್ತೊಮ್ಮೆ ಸಾಬೀತಾಯಿತು. ಕೆಕೆಆರ್ ಪರವಾಗಿ ಬರೊಬ್ಬರಿ 15 ಓವರ್ಗಳನ್ನು ಸ್ಪಿನ್ನರ್ಗಳೇ ನಿಭಾಯಿಸಿದ್ದರು ಮಾತ್ರವಲ್ಲದೆ ಆರ್ಸಿಬಿ ಕಳೆದುಕೊಂಡ 8 ವಿಕೆಟ್ಗಳ ಪೈಕಿ 5 ವಿಕೆಟ್ಗಳು ಸ್ಪಿನ್ನರ್ಗಳ ಪಾಲಾಗಿದೆ. ಆರ್ಸಿಬಿ ತಂಡದ ಹಿನ್ನಡೆಗೆ ಇದು ಕೂಡ ಪ್ರಮುಖ ಕಾರಣವಾಗಿದೆ.
ಮಧ್ಯಮ ಕ್ರಮಾಂಕದ ಆಘಾತಕಾರಿ ಪ್ರದರ್ಶನ
ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂಥಾ ಪರಿಸ್ಥಿತಿ. ಕ್ರೀಸ್ನಲ್ಲಿ ನೆಲೆಯೂರಿ ರನ್ಗಳಿಸುವ ಭರವಸೆಯನ್ನು ಯಾವ ಆಟಗಾರ ಕೂಡ ನೀಡುತ್ತಿಲ್ಲ. ಕೆಕೆಆರ್ ವಿರುದ್ಧ ಮಹಿಪಾಲ್ ಲೋಮ್ರೋರ್ 18 ಎಸೆತಗಳಲ್ಲಿ 34 ರನ್ಗಳಿಸಿದ್ದು ಸಣ್ಣ ಭರವಸೆ ಮೂಡಿಸಿದೆ. ಆದರೆ ಉಳಿದಂತೆ, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ ಆಟ ತಂಡಕ್ಕೆ ಯಾವ ಪ್ರಯೋಜನವನ್ನೂ ಉಂಟು ಮಾಡುತ್ತಿಲ್ಲ.
ಫೀಲ್ಡಿಂಗ್ ವಿಭಾಗವೂ ವೈಫಲ್ಯ
ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಫೀಲ್ಡಿಂಗ್ ವಿಭಾಗದ ಬಗ್ಗೆ ಅತ್ಯಂತ ಹೆಚ್ಚು ಮೆಚ್ಚುಗೆಗಳು ವ್ಯಕ್ತವಾಗುತ್ತು. ಮೊದಲಾರ್ಧದ ಪಂದ್ಯಗಳಲ್ಲಿ ಆರ್ಸಿಬಿ ತಂಡ ಅತ್ಯಂತ ಕಡಿಮೆ ಕ್ಯಾಚ್ಗಳನ್ನು ಕೈಚೆಲ್ಲಿದ ತಂಡ ಎನಿಸಿಕೊಂಡಿತ್ತು. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬುಧವಾರ ರಾತ್ರಿ ನಡೆದ ಪಂದ್ಯ ಇದಕ್ಕೆ ವ್ಯತಿರಿಕ್ತವಾಗಿತ್ತು. ಆರ್ಸಿಬಿ ತಂಡ ಮಹತ್ವದ ಹಂತಗಳಲ್ಲಿ ಕೆಲ ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿದ್ದು ತಂಡಕ್ಕೆ ದುಬಾರಿಯಾಯಿತು. ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ಇನ್ನು ಕೂಡ ಕೆಕೆಆರ್ ನಾಯಕ ನಿತೀಶ್ ರಾಣಾ ಅವರ ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿದ ಕಾರಣ ಕೆಕೆಆರ್ 200ರ ಗಡಿ ತಲುಪಿದೆ. ಇದು ಆರ್ಸಿಬಿ ಬ್ಯಾಟರ್ಗಳ ಮೇಲೆ ಒತ್ತಡ ಹೇರಲು ಕಾರಣವಾಗಿತು.