
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಕೆಲವು ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಬಹುತೇಕ ಆಟಗಾರರು ತಮ್ಮ ತಂಡಗಳನ್ನು ಸೇರಿಕೊಂಡಿದ್ದು, ಸಿದ್ಧತೆ ಆರಂಭಿಸಿದ್ದಾರೆ. ಆರ್ಸಿಬಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಕೂಡ ಗುರುವಾರ ಬೆಂಗಳೂರಿನಲ್ಲಿ ತಮ್ಮ ತಂಡವನ್ನು ಸೇರಿಕೊಂಡಿದ್ದಾರೆ.
ಐಪಿಎಲ್ ಮೆಗಾಹರಾಜಿನ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ರನ್ನು ಆರ್ ಸಿಬಿ 5.5 ಕೋಟಿ ರುಪಾಯಿ ನೀಡಿ ಖರೀದಿ ಮಾಡಿತ್ತು. ಈ ಬಾರಿಗೆ ಕೂಡ ಅವರನ್ನು ಉಳಿಸಿಕೊಂಡಿದೆ. 2022ರ ಐಪಿಎಲ್ನಲ್ಲಿ ದಿನೇಶ್ ಕಾರ್ತಿಕ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
2022ರ ಐಪಿಎಲ್ನಲ್ಲಿ ಅವರು 16 ಪಂದ್ಯಗಳಲ್ಲಿ 183.33 ಸ್ಟ್ರೈಕ್ರೇಟ್ನಲ್ಲಿ 330 ರನ್ ಗಳಿಸಿದ್ದರು. ದಿನೇಶ್ ಕಾರ್ತಿಕ್ ಆರ್ ಸಿಬಿ ತಂಡದಲ್ಲಿ ಹೊದ ಫಿನಿಶರ್ ಎಂದೇ ಗುರುತಿಸಿಕೊಂಡರು. ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟು ಮಿಂಚಿದರು.
ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ದಿನೇಶ್ ಕಾರ್ತಿಕ್ ವೀಕ್ಷಕ ವಿವರಣೆಗಾರನಾಗಿ ಕೆಲಸ ಮಾಡಿದರು. ಭಾರತ-ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯ ಮುಕ್ತಾಯವಾದ ನಂತರ ಅವರು ಐಪಿಎಲ್ ಸಿದ್ಧತೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಚಿನ್ನಸ್ವಾಮಿಯಲ್ಲಿ ಆಡುವುದು ಖುಷಿ
"ತವರು ಮತ್ತು ಹೊರಗಿನ ಮಾದರಿಯಲ್ಲಿ ಈ ಬಾರಿ ಐಪಿಎಲ್ ನಡೆಯುತ್ತಿರುವುದರಿಂದ ಎಲ್ಲರೂ ಉತ್ಸುಕರಾಗಿದ್ದಾರೆ. ಚಿನ್ನಸ್ವಾಮಿ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಿಗುವ ಬೆಂಬಲ ಎಂತಹದ್ದು ಎಂದು ಎಲ್ಲರಿಗೂ ತಿಳಿದಿದೆ. ಇದು ಭಾರತದಲ್ಲೇ ಸಿಗುವ ಅತ್ಯಂತ ಹೆಚ್ಚಿನ ಬೆಂಬಲ ಎನಿಸುತ್ತದೆ" ಎಂದು ದಿನೇಶ್ ಕಾರ್ತಿಕ್ ಹೇಳಿದರು.
"ಆದ್ದರಿಂದಲೇ ಪ್ರತಿಯೊಬ್ಬ ಆಟಗಾರನೂ ಕೂಡ ಈ ಬಾರಿಯ ಐಪಿಎಲ್ಗಾಗಿ ಎದುರುನೋಡುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ. ನಾನು ಇಲ್ಲಿನ ಅಭಿಮಾನಿಗಳ ಬೆಂಬಲರ ಸ್ವಲ್ಪ ರುಚಿ ನೋಡಿದ್ದೇನೆ, ಆದ್ದರಿಂದಲೇ ಈ ಬಾರಿ ಅಭಿಮಾನಿಗಳ ಮುಂದೆ ಆಡಲು ಕಾತರದಿಂದ ಕಾಯುತ್ತಿದ್ದೇನೆ" ಎಂದು ಹೇಳಿದರು.

ತಯಾರಿ ಮಾಡಿಕೊಳ್ಳಲು 10 ದಿನಗಳಿವೆ
"ನಾನು ಮೈದಾನಕ್ಕೆ ಹೋಗಲು ಎದುರು ನೋಡುತ್ತಿದ್ದೇನೆ. ಮೊದಮೊದಲು ಎಲ್ಲ ಹುಡುಗರನ್ನು ಭೇಟಿ ಮಾಡಿ ಆಮೇಲೆ ನನ್ನ ದೇಹವನ್ನು ರೆಡಿ ಮಾಡಿಕೊಂಡೆ. ಮೊದಲ ಪಂದ್ಯಕ್ಕೆ ನಮಗೆ 10 ದಿನಗಳು ಬಾಕಿ ಇವೆ, ಅದಕ್ಕಾಗಿ ನಾವು ತುಂಬಾ ಉತ್ಸುಕರಾಗಿದ್ದೇವೆ. ಇದೇ ಸಮಯದಲ್ಲಿ ವೀಕ್ಷಕ ವಿವರಣೆಗಾರನಾಗಿ ಕೆಲಸ ಮಾಡಿದ್ದೇನೆ, ಆದರೂ ನನಗೆ ಆಟವಾಡುವುದು ಹೆಚ್ಚು ಇಷ್ಟವಾಗುತ್ತದೆ" ಎಂದು ಹೇಳಿದರು.
ನನಗೆ ದೋಸೆ ಎಂದರೆ ತುಂಬಾ ಇಷ್ಟ ಎಂದು ದಿನೇಶ್ ಕಾರ್ತಿಕ್ ಹೇಳಿಕೊಂಡಿದ್ದಾರೆ. ಅತ್ಯಂತ ರುಚಿಯಾದ ದೋಸೆ ಸಿಗುವ ಊರು ಬೆಂಗಳೂರು. ಇಲ್ಲಿ ನಮಗೆ ಭೇಟಿ ನೀಡಲು ಸಾಕಷ್ಟು ಸ್ಥಳಗಳಿವೆ. ಒಂದರ ನಂತರ ಒಂದು ಸ್ಥಳಕ್ಕೆ ಭೇಟಿ ನೀಡುತ್ತೇನೆ. ನನ್ನ ಕುಟುಂಬ ಕೂಡ ಇಲ್ಲಿಗೆ ಬಂದಿದೆ, ಅವರ ಜೊತೆ ಹಲವು ಸ್ಥಳಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಆರ್ ಸಿಬಿ ತನ್ನ ಮೊದಲನೇ ಪಂದ್ಯವನ್ನು ಏಪ್ರಿಲ್ 2ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಮೊದಲನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ದಿನೇಶ್ ಕಾರ್ತಿಕ್ ಈ ಬಾರಿ ಕೂಡ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.