ಆರ್ಸಿಬಿ 2023ರ ಆವೃತ್ತಿಯನ್ನು ಭರ್ಜರಿಯಾಗಿ ಆರಂಭಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಅಮೋಘ ಗೆಲುವು ಸಾಧಿಸುವ ಮೂಲಕ ಫಾಫ್ ಪಡೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇದೀಗ ಈ ಗೆಲುವಿನ ಲಯವನ್ನು ಮುಂದುವರಿಸಿಕೊಂಡು ಮುನ್ನುಗ್ಗುವುದು ಆರ್ಸಿಬಿ ತಂಡದ ಮುಂದಿನ ಗುರಿ. ಹೀಗಾಗಿ ಭರ್ಜರಿ ರಣತಂತ್ರಗಳೊಂದಿಗೆ ಮುಂದಿನ ಹಣಾಹಣಿಗೆ ಸಿದ್ದವಾಗುತ್ತಿದೆ ಆರ್ಸಿಬಿ.
ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬಿ ತಂಡಕ್ಕೆ ಮುಂದಿನ ಎದುರಾಳಿ ಕೊಲ್ಕತ್ತಾ ನೈಟ್ ರೈಡರ್ಸ್. ಏಪ್ರಿಲ್ 6 ಗುರುವಾರದಂದು ಈ ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಈ ಮುಖಾಮುಖಿ ನಡೆಯಲಿದೆ. ಒಂದೆಡೆ ಕೆಕೆಆರ್ ತಂಡ ಮೊದಲ ಪಂದ್ಯವನ್ನು ಸೋತ ನಿರಾಸೆಯಲ್ಲಿದ್ದರೆ ಆರ್ಸಿಬಿ ತಂಡ ಆತ್ಮವಿಶ್ವಾಸದೊಂದಿಗೆ ಈ ಪಂದ್ಯಕ್ಕೆ ಸಿದ್ಧವಾಗುತ್ತಿದೆ. ನಿತೀಶ್ ರಾಣಾ ನೇತೃತ್ವದ ಕೆಕೆಆರ್ ತಂಡ ಹಲವು ವಿಧ್ವಂಸಕ ಆಟಗಾರರನ್ನು ಹೊಂದಿದ್ದು ಆರ್ಸಿಬಿ ತಂಡಕ್ಕೆ ಸುಲಭ ಸವಾಲಾಗಿರುವುದಿಲ್ಲ.

ಆದರೆ ಕೆಕೆಆರ್ ತಂಡದ ಈ ನಾಲ್ವರು ಆಟಗಾರರ ವಿರುದ್ಧ ಆರ್ಸಿಬಿ ಪಡೆ ಸೂಕ್ತವಾದ ರಣತಂತ್ರದೊಂದಿಗಹೆ ಕಣಕ್ಕಿಳಿದರೆ ಆರ್ಸಿಬಿ ತಂಡ ಈ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೇಲುಗೈ ಸಾಧಿಸುವುದು ಖಚಿತ. ಹಾಗಾದರೆ ಆರ್ಸಿಬಿ ವಿಶೇಷ ರಣತಂತ್ರವನ್ನು ಹೆಣೆಯಬೇಕಾದ ಆ ನಾಲ್ವರು ಆಟಗಾರರು ಯಾರು? ಮುಂದೆ ಓದಿ..
ನಾಯಕ ನಿತೀಶ್ ರಾಣಾ: ಶ್ರೇಯಸ್ ಐಯ್ಯರ್ ಅಲಭ್ಯತೆಯ ಹಿನ್ನೆಲೆಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವದ ಹೊಣೆಗಾರಿಗೆ ನಿತೀಶ್ ರಾಣಾ ಹೆಗಲಿಗೆ ಬಿದ್ದಿದೆ. ಮೊದಲ ಪಂದ್ಯದಲ್ಲಿ ರಾಣಾ ನಾಯಕನಾಗಿ ಆಟಗಾರನಾಗಿ ವೈಫಲ್ಯವನ್ನು ಕಂಡಿರುವುದು ಸ್ಪಷ್ಟ. ಆದರೆ ರಾಣಾ ಪ್ರತಿಭಾನ್ವಿತ ಆಟಗಾರ ಹಾಗೂ ನಾಯಕನಾಗಿ ಅನುಭವವನ್ನು ಕೂಡ ಹೊಂದಿದ್ದಾರೆ ಎಂಬುದು ಸ್ಪಷ್ಟ. ಮೂರನೇ ಕ್ರಮಾಂಕದಲ್ಲಿ ಅಥವಾ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಎದುರಾಳಿ ತಂಡಕ್ಕೆ ಆಘಾತ ನೀಡುವ ಸಾಮರ್ಥ್ಯ ಹೊಂದಿದ್ದಾರೆ ನಿತೀಶ್ ರಾಣ. ಹೀಗಾಗಿ ಈ ಆಟಗಾರನ ವಿರುದ್ಧ ವಿಶೇಷ ರಣತಂತ್ರವನ್ನು ಆರ್ಸಿಬಿ ಬೌಲರ್ಗಳು ಸಿದ್ಧಪಡಿಸಿಕೊಳ್ಳುವುದು ಅನಿವಾರ್ಯ.
ಆಲ್ರೌಂಡರ್ ಆಂಡ್ರೆ ರಸೆಲ್: ವೆಸ್ಟ್ ಇಂಡೀಸ್ನ ಆಲ್ರೌಂಡರ್ ಆಂಡ್ರೆ ರಸೆಲ್ ಕಳೆದ ಒಂದೆರಡು ಆವೃತ್ತಿಗಳಲ್ಲಿ ಅಷ್ಟೇನೂ ಪರಿಣಾಮಕಾರಿ ಎನಿಸಿಲ್ಲ. ಆದರೆ ರಸೆಲ್ ಯಾವತ್ತಿಗೂ ಅಪಾಯಕಾರಿ ಆಟಗಾರ ಎಂಬುದನ್ನು ಮರೆಯುವಂತಿಲ್ಲ. ಪಂದ್ಯವನ್ನು ಏಕಾಂಗಿಯಾಗಿ ತಿರುಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಆಂಡ್ರೆ ರಸೆಲ್. ಹೀಗಾಗಿ ಈ ಸ್ಪೋಟಕ ದಾಂಡಿಗನ ವಿರುದ್ಧ ಆರ್ಸಿಬಿ ಯಾವಾಗಲೂ ಎಚ್ಚರಿಕೆಯಿಂದ ಇರುವುದು ಅಗತ್ಯ. ಇಂಥಾ ಆಟಗಾರನ ವಿರುದ್ಧ ಆರ್ಸಿಬಿ ಯಾವ ರೀತಿಯ ರಣತಂತ್ರ ಹೆಣೆಯಲಿದೆ ಎಂಬುದು ಕುತೂಹಜಲಕಾರಿ ಅಂಶ.
ಸುನಿಲ್ ನರೈನ್: ಕೆಕೆಆರ್ ತಂಡದಲ್ಲಿ ಸುದೀರ್ಘ ಕಾಲದಿಂದ ಆಡುತ್ತಿರುವ ಸುನಿಲ್ ನರೈನ್ ಎದುರಿಸುವುದು ಬ್ಯಾಟರ್ಗಳಿಗೆ ಯಾವಾಗಲೂ ಸವಾಲು. ತನ್ನ ಬತ್ತಳಿಕೆಯಲ್ಲಿ ಅನೇಕ ಅಸ್ತ್ರಗಳನ್ನು ಹೊಂದಿರುವ ಸುನಿಲ್ ನರೈನ್ ಎದುರಾಳೀಗೆ ರನ್ ನೀಡದ ಒತ್ತಡವನ್ನುಂಡು ಮಾಡುವುದರ ಜೊತೆಗೆ ತಂಡಕ್ಕೆ ಅನಿವಾರ್ಯ ಸಂದರ್ಭದಲ್ಲಿ ವಿಕೆಟ್ ಕಬಳಿಸಿಕೊಡುವ ಬೌಲರ್. ಹೀಗಾಗಿ ಈ ಮಿಸ್ಟ್ರಿ ಬೌಲರ್ಗೆ ಆರ್ಸಿಬಿ ದಾಂಡಿಗರು ಯಾವ ರೀತಿಯ ಉತ್ತರವನ್ನು ನೀಡಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.
ಉಮೇಶ್ ಯಾದವ್: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಅನುಭವಿ ಬೌಲರ್ ಉಮೇಶ್ ಯಾದವ್ ಕಳೆದ ಐಪಿಎಲ್ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಮಿಂಚಿದ್ದರು. ಪವರ್ಪ್ಲೇನಲ್ಲಿ ಎದುರಾಳಿ ತಂಡಕ್ಕೆ ಭಾರೀ ಆಘಾತ ನೀಡುವ ಸಾಮರ್ಥ್ಯಹೊಂದಿದ್ದಾರೆ ಉಮೇಶ್ ಯಾದವ್. ಭಾರತದ ಈ ಅನುಭವಿ ಆಟಗಾರನ್ನು ಆರ್ಸಿಬಿ ತಂಡದ ಅಗ್ರ ಕ್ರಮಾಂಕ ಯಾವ ರೀತಿ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.