ಇಂಡಿಯನ್ ಪ್ರೀಮಿಯರ್ ಲೀಗ್ 2023ರ 15ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ 1 ವಿಕೆಟ್ನ ರೋಚಕ ಗೆಲುವು ಸಾಧಿಸಿತು. ಸಾಕಷ್ಟು ನಾಟಕೀಯವಾಗಿದ್ದ ಪಂದ್ಯದಲ್ಲಿ ಆರ್ ಸಿಬಿ ತವರಿನ ಅಂಗಳದಲ್ಲಿ ಈ ಬಾರಿ ಐಪಿಎಲ್ನ ಮೊದಲ ಸೋಲು ಕಂಡಿದೆ. ಆಡಿದ 4 ಪಂದ್ಯಗಳಲ್ಲಿ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
15 ವರ್ಷಗಳಲ್ಲಿ ಆರ್ಸಿಬಿ ತಂಡಕ್ಕಿದ್ದ ಸಮಸ್ಯೆ 16ನೇ ಆವೃತ್ತಿಯಲ್ಲಿ ಕೂಡ ಮುಂದುವರೆದಿದೆ. ಮೊದಲ ಎರಡೂ ಪಂದ್ಯಗಳಲ್ಲಿ ಬೌಲಿಂಗ್ ವಿಭಾಗದಲ್ಲಿ ಕಳಪೆ ಪ್ರದರ್ಶನ ನೀಡಿದ್ದರು ಕನಿಷ್ಠ ಅದನ್ನು ತಿದ್ದಿಕೊಳ್ಳುವ ಪ್ರಯತ್ನವನ್ನು ಕೂಡ ಮೂರನೇ ಪಂದ್ಯದಲ್ಲಿ ಮಾಡಲಿಲ್ಲ. ಎಂದಿನಂತೆ ಪವರ್ ಪ್ಲೇನಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರೆ ನಂತರ ಹೀನಾಯ ಪ್ರದರ್ಶನ ನೀಡುವುದು ಮುಂದುವರೆದಿದೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಹರ್ಷಲ್ ಪಟೇಲ್ ಮಾಡಿದ ಎಡವಟ್ಟು ಕೂಡ ಪಂದ್ಯದ ಸೋಲಿಗೆ ಕಾರಣವಾಯಿತು. ಕೊನೆಯ ಎಸೆತದಲ್ಲಿ ಲಕ್ನೋ ಗೆಲುವಿಗೆ ಒಂದು ರನ್ ಬೇಕಿತ್ತು, ಹರ್ಷಲ್ ಬೌಲಿಂಗ್ ಮಾಡುವ ಮುನ್ನವೇ ರವಿ ಬಿಷ್ಣೋಯಿ ರನ್ ಓಡಲು ಆರಂಭಿಸಿದರು, ಇದನ್ನು ಗಮನಿಸಿದರೂ ಹರ್ಷಲ್ ನಾನ್ಸ್ಟ್ರೈಕರ್ ನಲ್ಲಿ ರನೌಟ್ ಮಾಡುವಲ್ಲಿ ವಿಫಲವಾದರು. ಹರ್ಷಲ್ ಪಟೇಲ್ ಅದನ್ನು ಯಶಸ್ವಿಯಾಗಿ ಮಾಡಿದ್ದರೆ ಪಂದ್ಯ ಟೈ ಆಗುತ್ತಿತ್ತು ಸೂಪರ್ ಓವರ್ ನೋಡಲು ಅವಕಾಶ ಸಿಗುತ್ತಿತ್ತು.
ಅಂತಿಮ ಓವರ್ನ ಆರನೇ ಎಸೆತದಲ್ಲಿ, ಹರ್ಷಲ್ ನಾನ್ಸ್ಟ್ರೈಕರ್ನನ್ನು ರನ್ಔಟ್ ಮಾಡಲು ಪ್ರಯತ್ನಿಸಿದರು ಆದರೆ ತಪ್ಪಿಸಿಕೊಂಡರು. ರವಿ ಇನ್ನೂ ಕ್ರೀಸ್ನಿಂದ ಹೊರಗಿದ್ದರು ಮತ್ತು ಹರ್ಷಲ್ ನಂತರ ಚೆಂಡನ್ನು ಸ್ಟಂಪ್ ಕಡೆಗೆ ಎಸೆದರು. ಇದಕ್ಕೆ ಅವಕಾಶ ಇಲ್ಲ ಎಂದು ಅಂಪೈರ್ ಹರ್ಷಲ್ಗೆ ತಿಳಿಸಿದರು. ಹರ್ಷಲ್ ರನ್-ಅಪ್ ಸಮಯದಲ್ಲಿ ಸ್ಟಂಪ್ಗೆ ಹೊಡೆಯುವಲ್ಲಿ ಯಶಸ್ವಿಯಾಗಿದ್ದರೆ ಪಂದ್ಯ ಟೈನಲ್ಲಿ ಕೊನೆಗೊಳ್ಳುತ್ತಿತ್ತು.
ದಿನೇಶ್ ಕಾರ್ತಿಕ್ ಎಡವಟ್ಟು
ಹರ್ಷಲ್ ಪಟೇಲ್ ಮಾಡಿದ ತಪ್ಪಿನ ನಂತರ ದಿನೇಶ್ ಕಾರ್ತಿಕ್ ಕೂಡ ಎಡವಟ್ಟು ಮಾಡಿದರು. ಕೊನೆಯ ಎಸೆತವನ್ನು ಬ್ಯಾಟರ್ ಬೀಟ್ ಮಾಡಿದಾಗ ದಿನೇಶ್ ಕಾರ್ತಿಕ್ ಚೆಂಡನ್ನು ಹಿಡಿದು ರನ್ಔಟ್ ಮಾಡುವಲ್ಲಿ ವಿಫಲವಾದರು. ಒಂದು ವೇಳೆ ಡಿಕೆ ವಿಕೆಟ್ ಹತ್ತಿರ ಬಂದು ಚೆಂಡನ್ನು ಹಿಡಿದಿದ್ದರೆ ರವಿ ಬಿಷ್ಣೋಯ್ ಅವರನ್ನು ರನೌಟ್ ಮಾಡಬಹುದಿತ್ತು. ಆದರೆ ಚೆಂಡನ್ನು ಸರಿಯಾಗಿ ಹಿಡಿಯುವಲ್ಲಿ ವಿಫಲವಾದ ದಿನೇಶ್ ಕಾರ್ತಿಕ್ ಪಂದ್ಯದ ಸೋಲಿಗೆ ಕಾರಣಗಳಲ್ಲಿ ಒಬ್ಬರಾದರು.
ದಿನೇಶ್ ಕಾರ್ತಿಕ್ ಅವರ ಕೀಪಿಂಗ್ ನೋಡಿದ ನೆಟ್ಟಿಗರು ಎಲ್ಲರೂ ಧೋನಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇಂತಹದ್ದೇ ಪರಿಸ್ಥಿತಿಯಲ್ಲಿ ಧೋನಿ ಬಾಂಗ್ಲಾದೇಶದ ವಿರುದ್ಧ ಕೊನೆಯ ಎಸೆತದಲ್ಲಿ ರನೌಟ್ ಮಾಡುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಆ ಪಂದ್ಯವನ್ನು ಇಂದು ಅಭಿಮಾನಿಗಳು ಮತ್ತೆ ನೆನಪು ಮಾಡಿಕೊಂಡರು.
ಹರ್ಷಲ್ ಪಟೇಲ್ ಮಂಕಡಿಂಗ್ ಮಾಡಲು ಯತ್ನಿಸಿ ವಿಫಲವಾದ ಬಗ್ಗೆ ಕೂಡ ಹಲವು ಟೀಕೆಗಳು ವ್ಯಕ್ತವಾಗಿದೆ. ನಾನ್ಸ್ಟ್ರೈಕರ್ ಎಂಡ್ನಲ್ಲಿ ರನೌಟ್ ಮಾಡುವುದು ಎಲ್ಲರಿಗೂ ಬರುವುದಿಲ್ಲ, ಅದಕ್ಕೂ ವಿಶೇಷ ಪ್ರತಿಭೆ ಇರಬೇಕು ಎಂದು ಹರ್ಷಲ್ ಪಟೇಲ್ ಕಾಲೆಳೆದಿದ್ದಾರೆ. ರವಿಚಂದ್ರನ್ ಅಶ್ವಿನ್ ಮಾತ್ರ ಐಪಿಎಲ್ನಲ್ಲಿ ಜೋಸ್ ಬಟ್ಲರ್ ಅವರನ್ನು ಈ ವಿಧಾನದಲ್ಲಿ ಔಟ್ ಮಾಡಿದ್ದಾರೆ.