ದೆಹಲಿ ಕ್ಯಾಪಿಟಲ್ಸ್ನ ಸ್ಟಾರ್ ಆಟಗಾರ ರಿಷಬ್ ಪಂತ್ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ದೀರ್ಘಕಾಲದ ವಿಶ್ರಾಂತಿಯಲ್ಲಿದ್ದಾರೆ. ಮೂರು ತಿಂಗಳ ಕಾಲ ವಿಶ್ರಾಂತಿ ಪಡೆದಿರುವ ಪಂತ್ ಮೊದಲ ಬಾರಿಗೆ ಕ್ರೀಡಾಂಗಣಕ್ಕೆ ಆಗಮಿಸಲು ಸಜ್ಜಾಗಿದ್ದಾರೆ. ಏಪ್ರಿಲ್ 4 ರಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ವೀಕ್ಷಿಸಲು ಪಂತ್ ಸಜ್ಜಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ರಿಷಭ್ ಪಂತ್ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಬೆಂಬಲಿಸಲು ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇರುತ್ತಾರೆ ಎಂದು ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್ ಮಂಚಂದಾ ಖಚಿತಪಡಿಸಿದ್ದಾರೆ. ಡಿಸೆಂಬರ್ 31ರಂದು ಅಪಘಾತ ಸಂಭವಿಸಿದ ನಂತರ ರಿಷಬ್ ಪಂತ್ ಮೊದಲ ಬಾರಿಗೆ ಕ್ರೀಡಾಂಗಣಕ್ಕೆ ಬರಲಿದ್ದಾರೆ ಎಂದು ಪಿಟಿಐ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.

"ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ, ಮಂಗಳವಾರ ರಿಷಬ್ ಪಂತ್ ಬರುತ್ತಿದ್ದಾರೆ, ಈ ಬಗ್ಗೆ ಫ್ರಾಂಚೈಸಿಂದ ನಮಗೆ ನಿಖರವಾದ ಸಂದೇಶ ಬಂದಿದೆ. ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ಅವರು ಹಾಜರಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೆಂಬಲ ನೀಡಲಿದ್ದಾರೆ. ಪಂತ್ ಬರಲಿದ್ದಾರೆ ಎಂದು ಜಿಎಂಆರ್ ನಮಗೆ ದೃಢಪಡಿಸುತ್ತಿದೆ ಎಂದು ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್ ಮಂಚಂದ ಸುದ್ದಿ ಸಂಸ್ಥೆ ಹಂಚಿಕೊಂಡ ವೀಡಿಯೊದಲ್ಲಿ ತಿಳಿಸಿದ್ದಾರೆ.
ಪಂತ್ ಅವರನ್ನು ಕ್ರೀಡಾಂಗಣದಲ್ಲಿ ನೋಡಲು ತಾವು ಕಾತುರದಿಂದ ಕಾಯುತ್ತಿದ್ದೇವೆ ಮತ್ತು ಅವರಿಗೆ ಬೇಕಾದ ಸೌಲಭ್ಯ ನೀಡಲು ಸಿದ್ಧರಾಗಿರುತ್ತೇವೆ ಎಂದು ಮಂಚಂದ ಹೇಳಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೊದಲನೇ ಪಂದ್ಯದಲ್ಲಿ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತವರಿನಲ್ಲಿ ಮೊದಲನೇ ಪಂದ್ಯವನ್ನಾಡಲು ಬರುತ್ತಿದೆ. ಪಂತ್ ಮೈದಾನಕ್ಕೆ ಆಗಮಿಸುತ್ತಿರುವುದು ತಂಡದ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ವಿಶೇಷ ಗೌರವ ಸಲ್ಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತಂಡದ ನಾಯಕನಿಗೆ ವಿಶೇಷ ಗೌರವ ಸಲ್ಲಿಸಿತ್ತು. ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯದ ವೇಳೆ ಕ್ಯಾಪಿಟಲ್ಸ್ ತಂಡದ ಡಗೌಟ್ನಲ್ಲಿ ರಿಷಭ್ ಪಂತ್ ಅವರ ಸಂಖ್ಯೆಯ ಜರ್ಸಿಯನ್ನು ನೇತುಹಾಕಲಾಗಿತ್ತು. ಈ ಫೋಟೊವನ್ನು ತಂಡದ ನಾಯಕ ಡೇವಿಡ್ ವಾರ್ನರ್ ಹಂಚಿಕೊಂಡಿದ್ದರು, ಮಾತ್ರವಲ್ಲದೆ, ನೀವು ಯಾವಾಗಲು ನಮ್ಮೊಂದಿಗೆ ಇರುತ್ತೀರಾ ಎಂದು ಶೀರ್ಷಿಕೆ ನೀಡಿದ್ದರು.
ಎಲ್ಎಸ್ಜಿ ವಿರುದ್ಧ 50 ರನ್ಗಳಿಂದ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ವಿರುದ್ಧ ಸೆಣೆಸಲಿದೆ. ತಂಡದ ಪ್ರಮುಖ ಬೌಲರ್ ಅನ್ರಿಚ್ ನೊಕಿಯಾ ಮತ್ತು ಲುಂಗಿ ಎನ್ಗಿಡಿ ತಂಡವನ್ನು ಸೇರಿಕೊಳ್ಳಲಿದ್ದು, ಆಡುವ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ.