ಮಾಜಿ ವೇಗದ ಬೌಲರ್ ಶ್ರೀಶಾಂತ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡೆತ್ ಓವರ್ ಸ್ಪೆಶಲಿಸ್ಟ್ ಬೌಲರ್ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಸಿಎಸ್ಕೆ ತಂಡಕ್ಕೆ ಯುವ ವೇಗಿ ಮಥೀಶ ಪಥಿರಣ ಡೆತ್ ಓವರ್ ಬೌಲರ್ ಆಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ವೇಗಿಯ ಬೌಲಿಂಗ್ ದಾಳಿಯ ಬಗ್ಗೆ ಶ್ರೀಶಾಂತ್ ಭಾರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಸಾಧಿಸಿದ ಬಳಿಕ ಶ್ರೀಶಾಂತ್ ಪಥಿರಣ ಬೌಲರ್ ಸಾಮರ್ಥ್ಯದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಯುವ ವೇಗಿ ಪಥಿರಣ ಚೆನ್ನೈ ಪರವಾಗಿ ಡ್ವೇಯ್ನ್ ಬ್ರಾವೋ ನಿಭಾಯಿಸುತ್ತಿದ್ದ ಜವಾಬ್ಧಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ. ಬ್ರಾವೋ ರೀರಿಯಲ್ಲಿಯೇ ಪಥಿರಣ ಕೊನೆಯ ಹಂತದಲ್ಲಿ ತಂಡಕ್ಕೆ ವಿಕೆಟ್ ಅಗತ್ಯವಿದೆ ಎಂದಾಗ ವಿಕೆಟ್ ತೆಗೆದುಕೊಡುತ್ತಿದ್ದಾರೆ ಎಂದಿದ್ದಾರೆ ಶ್ರೀಶಾಂತ್.

ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ಓವರ್ಗಳ ಬೌಲಿಂಗ್ ದಾಳಿಯನ್ನು 37 ರನ್ ನೀಡಿ 3 ವಿಕೆಟ್ ಪಡೆದರು ಮಥೀಶ ಪತಿರಣ. ಈ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಅವರು 8 ಪಂದ್ಯಗಳಲ್ಲಿ 13 ವಿಕೆಟ್ಗಳನ್ನು ಪಡೆದುಕೊಂಡಂತಾಗಿದೆ. ತಮ್ಮ ಮೊದಲ ಓವರ್ನಲ್ಲಿಯೇ ಅದ್ಭುತ ಯಾರ್ಕರ್ ಬೌಲಿಂಗ್ ದಾಳಿಯಲ್ಲಿ ಮನೀಶ್ ಪಾಂಡೆಯನ್ನು ಔಟ್ ಮಾಡಿದ ಮಿಂಚಿದರು ಪಥಿರಣ.
"ಚೆನ್ನೈ ಸೂಪರ್ ಕಿಂಗ್ಸ್ಗೆ ಅಗತ್ಯವಿದ್ದ ಆ ಆಟಗಾರ ದೊರೆತಿದ್ದಾನೆ. ಆತ ಬ್ಯಾಟಿಂಗ್ ಕೂಡ ನಡೆಸಬಲ್ಲ ಆಟಗಾರನಾದರೆ ಬ್ರಾವೋ ಸ್ಥಾನವನ್ನು ಸಂಪೂರ್ಣವಾಗಿ ನಿಭಾಯಿಸುವ ಆಟಗಾರ ಎನಿಸಿಕೊಳ್ಳುತ್ತಾರೆ. ಆದರೆ ನಿರ್ಣಾಯಕ ಹಂತದಲ್ಲಿ ವಿಕೆಟ್ ಪಡೆಯುವ ಪಥಿರಣ ಅವರ ಸಾಮರ್ಥ್ಯ ಅದ್ಭುತ. ಅವರಲ್ಲಿ ತೀಕ್ಷ್ಣವಾದ ಯಾರ್ಕರ್ಗಳು ಮಾತ್ರವೇ ಇಲ್ಲ. ಅದ್ಭುತವಾದ ಸ್ಲೋವರ್ ಬಾಲ್ಗಳು ಕೂಡ ಇವೆ. ಅವರ ಬೌಲಿಂಗನ್ನು ಅರ್ಥ ಮಾಡಿಕೊಳ್ಳುವುದು ಬ್ಯಾಟರ್ಗಳಿಗೆ ಬಹಳ ಕಠಿಣ" ಎಂದಿದ್ದಾರೆ ಎಸ್ ಶ್ರೀಶಾಂತ್.
"ಇದು ಕೇವಲ ಒಂದು ಒಂದ್ಯದ ಪ್ರದರ್ಶನವಲ್ಲ. ಈತ ಸ್ಥಿರವಾಗಿ ಈ ರೀತಿಯ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಳ್ಳದಿದ್ದರೂ ಪಥಿರಣ ಅವರಿಗೆ ಬೆಂಬಲ ದೊರೆಯುತ್ತಿದೆ. ಧೋನಿ ಆಟಗಾರರ ಪರವಾಗಿ ಯೋಚಿಸುವ ನಾಯಕನಾಗಿದ್ದು ಆಡುವ ಬಳಗದಲ್ಲಿ ಇರದಿದ್ದರೂ ಸಿದ್ಧವಾಗಿರುವಂತ ಹೇಳುತ್ತಾರೆ" ಎಂದಿದ್ದಾರೆ ಎಸ್ ಶ್ರೀಶಾಂತ್.
ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 167 ರನ್ಗಳನ್ನು ಗಳಿಸಿತ್ತು. ಡೆಲ್ಲಿ ಪರವಾಗಿ ಮಿಚೆಲ್ ಮಾರ್ಶ್ ಮೂರು ವಿಕೆಟ್ ಕಿತ್ತು ಮಿಂಚಿದ್ದಾರೆ.
ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಫಿಟಲ್ಸ್ ತಂಡಕ್ಕೆ ಆರಂಭದಲ್ಲಿಯೇ ಆಘಾತವುಂಟಾಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಉತ್ತಮ ಜೊತೆಯಾಟ ದೊರೆಯದಂತೆ ಮಾಡುವಲ್ಲಿ ಡೆಲ್ಲಿ ತಮಡದ ಬೌಲರ್ಗಳು ಯಶಸ್ವಿಯಾದರು. ಹೀಗಾಗಿ ಡಿಸಿ ನಿಗದಿತ 20 ಓವರ್ಗಳಲ್ಲಿ 140 ರನ್ಗಳಿಸಲು ಮಾತ್ರವೇ ಶಕ್ತವಾಯಿತು. ಈ ಮೂಲಕ ಸಿಎಸ್ಕೆ 27 ರನ್ಗಳ ಅಂತರದ ಗೆಲುವು ಸಾಧಿಸಿದೆ.