ಈ ಬಾರಿಯ ಐಪಿಎಲ್ಗೂ ಮುನ್ನ ಡೆಲ್ಲಿ ಕ್ಯಾಪಿಟಲ್ ತಂಡದ ನಾಯಕ ರಿಷಭ್ ಪಂತ್ ಗಾಯಗೊಂಡ ಕಾರಣ ಕ್ರಿಕೆಟ್ ಚಟುವಟಿಕೆಯಿಂದ ದೂರವಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಡೇವಿಡ್ ವಾರ್ನರ್ ಹೆಗಲಿಗೆ ಬಿದ್ದಿದೆ. ಆದರೆ ವಾರ್ನರ್ ನೇತೃತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರದರ್ಶನ ಕಳಪೆ ಮಟ್ಟದಲ್ಲಿದೆ. ಮೊದಲಿಗೆ ಸತತ ಐದು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲು ಅನುಭವಿಸಿದ್ದು ನಂತರದ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ಗೆದ್ದಿರುವ ಎರಡು ಪಂದ್ಯಗಳಲ್ಲಿಯೂ ಡಿಸಿ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.
ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ವಾರ್ನರ್ ಬಗ್ಗೆ ಪ್ರಶ್ನೆಗಳು ಎದುರಾಗಿದೆ. ವಾರ್ನರ್ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ತಂಡವಾಗಿ ಪ್ರದರ್ಶನ ನೀಡಲು ಡಿಸಿ ವಿಫಲವಾಗಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ಅಕ್ಷರ್ ಪಟೇಲ್ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ಸುನಿಲ್ ಗವಾಸ್ಕರ್.

ಪ್ರಸ್ತುತ ರಿಷಭ್ ಪಂತ್ ಈ ಬಾರಿಯ ಐಪಿಎಲ್ಗೆ ಅಲಭ್ಯತವಾಗಿರುವ ಕಾರಣ ಅಕ್ಷರ್ ಪೇಲ್ ತಂಡದ ಉಪನಾಯಕನ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಅಕ್ಷರ್ ಪಟೇಲ್ ಕೂಡ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಿಕೊಂಡು ಬಂದಿದ್ದು ಡಿಸಿ ತಂಡದ ಪರವಾಗಿ ಕೆಲ ಗಮನಾರ್ಹ ಇನ್ನಿಂಗ್ಸ್ಗಳನ್ನು ನೀಡಿದ್ದಾರೆ.
"ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಕ್ಷರ್ ಪಟೇಲ್ ನಾಯಕನಾಗಿ ನೇಮಕಗೊಳ್ಳಬೇಕು ಎಂಬುದು ನನ್ನ ಆಶಯ. ಆತನೋರ್ವ ಪ್ರಾಮಾಣಿಕ ಆಟಗಾರನಾಗಿದ್ದು ಉತ್ತಮ ಲಯದಲ್ಲಿದ್ದಾರೆ. ಡೆಲ್ಲು ಕ್ಯಾಪಿಟಲ್ಸ್ ಫ್ರಾಂಚೈಸಿಯ ನಾಯಕನಾಗಿ ನೇಮಕವಾದರೆ ತಂಡಕ್ಕೆ ಉತ್ತಮ ಉಪಯೋಗವನ್ನು ಪಡೆದುಕೊಳ್ಳಬಹುದು. ಆಟಗಾರನಾಗಿಯೂ ಅವರು ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದಾರೆ ಎಂದಿದ್ದಾರೆ ಸುನಿಲ್ ಗವಾಸ್ಕರ್.
ಅಕ್ಷರ್ ಪಟೇಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿಯೂ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಗುಜರಾತ್ ಮೂಲದ ಈ ಆಟಗಾರರ ತನ್ನ ಆಲ್ರೌಂಡರ್ ಪ್ರದರ್ಶನದಿಂದಾಗಿ ಭಾರತೀಯ ತಂಡದಲ್ಲಿ ತಮ್ಮದೇ ಆದ ಸ್ಥಾನವನ್ನು ಸೃಷ್ಟಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಕ್ಷರ್ ಪಟೇಲ್ ಅದ್ಭುತವಾಗಿ ಬ್ಯಾಟಿಂಗ್ ನಡೆಸಿದ್ದು 4 ಪಂದ್ಯಗಳಲ್ಲಿ 264 ರನ್ಗಳನ್ನು ಗಳಿಸಿದ್ದಾರೆ. ನಾಲ್ಕು ಪಂದ್ಯಗಳ ಈ ಹೈವೋಲ್ಟೇಜ್ ಸರಣಿಯಲ್ಲಿ ಇದು ಭಾರತದ ಪರವಾಗಿ ದಾಖಲಾದ ಎರಡನೇ ಅತಿ ಹೆಚ್ಚಿನ ಸ್ಕೋರ್ ಎನಿಸಿದೆ. ಮೊದಲ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.
ಎಲ್ಲಾ ಮಾದರಿಯಲ್ಲಿಯೂ ಗಳಿಸಿದ ಅದ್ಭುತ ಪ್ರದರ್ಶನ ನೀಡುತ್ತಿರುವ ಅಕ್ಷರ್ ಸ್ಥಿರ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ. ಅಂತಾರಾಷ್ಟ್ರೀಯ ಮಾದರಿಯಲ್ಲಿ ನೀಡಿರುವ ಪ್ರದರ್ಶನದಿಂದಾಗಿ ಅಕ್ಷರ್ ಪಟೇಲ್ ಆತ್ಮವಿಶ್ವಾಸ ಹೆಚ್ಚಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿಯೂ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ ಎಂದಿದ್ದಾರೆ.
ಆತನಲ್ಲಿ ಆತ್ಮವಿಶ್ವಾಸವಿದೆ. ಆ ಆತ್ಮವಿಶ್ವಾಸ ಕಳೆದ ಒಂದು ವರ್ಷಗಳಲ್ಲಿ ನೀಡಿರುವ ಬ್ಯಾಟಿಂಗ್ ಪ್ರದರ್ಶನದಿಂದ ಬಂದದೆ. ನಾನು ಈ ಆತ್ಮವಿಶ್ವಾಸವನ್ನು ಮುಂದುವರಿಸಲು ಬಯಸುತ್ತೇನೆ. ಎಲ್ಲವೂ ನಾವು ಅಂದುಕೊಳ್ಳುತ್ತಿರುವಂತೆ ನಡೆಯುವಾಗ ಆ ಆತ್ಮವಿಶ್ವಾಸದ ಲಾಭವನ್ನು ಪಡೆಯಲು ನಾನು ಬಯಸುತ್ತೇನೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ, ದಿಗ್ಗಜ ಆಟಗಾರ ಹಾಗೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್.