ಈ ಬಾರಿಯ ಐಪಿಎಲ್ನ ಪ್ಲೇಆಫ್ ಹಂತದಲ್ಲಿ ಮೊದಲ ಕ್ವಾಲಿಫಯರ್ನಲ್ಲಿ ಆಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೇರವಾಗಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಮತ್ತೊಂದೆಡೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಕುಡ ಫೈನಲ್ಗೆ ಪ್ರವೇಶಿಸುವ ಉತ್ಸಾಹದಲ್ಲಿದ್ದ ಗುಜರಾತ್ ಟೈಟನ್ಸ ವಿರುದ್ಧ ಶುಕ್ರವಾರದ ಪಂದ್ಯದಲ್ಲಿ ಇದು ನಿರ್ಣಾಯಕವಾಗಲಿದೆ. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ ನಾಯಕ ರೋಹಿತ್ ಶರ್ಮಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಹೋಲಿಕೆಯೊಂದನ್ನು ಮಾಡಿದ್ದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅಂಡರ್ರೇಟೆಡ್ ನಾಯಕ ಎಂದಿದ್ದಾರೆ ಸುನಿಲ್ ಗವಾಸ್ಕರ್. ಐಪಿಎಲ್ನಲ್ಲಿ ಎಂಎಸ್ ಧೋನಿಗೆ ದೊರೆತಷ್ಟು ಶ್ರೇಯಸ್ಸು ರೋಹಿತ್ ಶರ್ಮಾಗೆ ದೊರೆಯಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಸುನಿಲ್ ಗವಾಸ್ಕರ್. ಮುಮದುವರಿದು ಅವರು ಮೈದಾನದಲ್ಲಿ ರೋಹಿತ್ ಶರ್ಮಾ ತೆಗೆದುಕೊಳ್ಳುವ ಕೆಲ ನಿರ್ಧಾರಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುವುದಿಲ್ಲ ಎಂದಿರುವ ಗವಾಸ್ಕರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಹೆಣೆದ ರಣತಂತ್ರವನ್ನು ಉಲ್ಲೇಖಿಸಿದ್ದಾರೆ.

2023ರ ಐಪಿಎಲ್ನಲ್ಲಿ ಅತ್ಯಂತ ಕಳಪೆ ಆರಂಭವನ್ನು ಪಡೆದಿದ್ದರೂ ಮುಂಬೈ ಇಂಡಿಯನ್ಸ್ ಹಾಗೂ ನಾಯಕ ರೋಹಿತ್ ಶರ್ಮಾ ತಮ್ಮ ಮೇಲಿಟ್ಟುಕೊಂಡಿದ್ದ ನಂಬಿಕೆಗೆ ಸುನಿಲ್ ಗವಾಸ್ಕರ್ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಐಪಿಎಲ್ ಟೂರ್ನಿಯ ಆರಂಭಿಕ 7 ಪಂದ್ಯಗಳಲ್ಲಿ 4ರಲ್ಲಿ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿತ್ತು ಮುಂಬೈ ಇಂಡಿಯನ್ಸ ತಂಡ. ಆದರೆ ಅದಾದ ಬಳಿಕ ಅದ್ಭುತ ಪ್ರದರ್ಶನ ನೀಡಲು ಆರಂಭಿಸಿದ ರೋಹಿತ್ ಪಡೆ ಕೊನೆಯ 7 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದ್ದ ಪ್ಲೇಆಫ್ಗೆ ಪ್ರವೇಶಿಸಿತು.
ಇಂಡಿಯಾ ಟುಡೇ ಜೊತೆಗೆ ಮಾತನಾಡಿದ ಸುನಿಲ್ ಗವಾಸ್ಕರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ವೇಗಿ ಆಕಾಶ್ ಮಧ್ವಲ್ ಅವರನ್ನು ಬಳಸಿಕೊಂಡು ಆಯುಶ್ ಬದೋನಿ ಹಾಗೂ ನಿಕೋಲಸ್ ಪೂರನ್ ಅವರನ್ನು ಒಂದೇ ಓವರ್ನಲ್ಲಿ ಬಲಿ ಪಡೆದುಕೊಂಡ ರೀತಿಯನ್ನು ಉಲ್ಲೇಖಿಸಿದ್ದಾರೆ. ನಾಯಕ ರೋಹಿತ್ ನೀಡಿದ ಸಲಹೆಯಿಂದಾಗಿ ಈ ಆಟಗಾರರನ್ನು ಮಧ್ವಲ್ ಔಟ್ ಮಾಡುವಲ್ಲಿ ಯಶಸ್ವಿಯಾದರು ಎಂದಿದ್ದಾರೆ ಗವಾಸ್ಕರ್.
"ಖಂಡಿತವಾಗಿಯೂ ರೋಹಿತ್ ಶರ್ಮಾ ಅಂಡರ್ರೇಟೆಡ್ ನಾಯಕ. ಆತ ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ಕೆಲ ಉದಾಹರಣೆಗಳನ್ನು ನಾನು ನೀಡಬಲ್ಲೆ. ಮಧ್ವಲ್ ಓವರ್ ದ ವಿಕೆಟ್ ಮೂಲಕ ಆಯುಶ್ ಬದೋನಿ ಅವರನ್ನು ಔಟ್ ಮಾಡಿದರು. ಅದಾದ ಬಳಿಕ ನಿಕೋಲಸ್ ಪೂರನ್ ಅವರನ್ನು ರೌಂಡ್ ದ ವಿಕೆಟ್ ಮೂಲಕ ಔಟ್ ಮಾಡಿದರು. ಈ ಎರಡು ವಿಕೆಟ್ಗಳ ಹಿಂದೆಯೂ ರೋಹಿತ್ ಇದ್ದರು" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಮುಂಬೈ ಇಂಡಿಯನ್ಸ್ ತಂಡ ಶುಕ್ರವಾರ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದ್ದು ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ಗೆ ಪ್ರವೇಶಿಸಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಫೈನಲ್ ಪ್ರವೇಶ ಪಡೆದುಕೊಂಡಿದ್ದು ಮೊದಲ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಯಾವ ತಂಡ ಎದುರಾಳಿಯಾಗಲಿದೆ ಎಂಬುದು ಸದ್ಯದ ಕುತೂಹಲ.