ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ನಲ್ಲಿ ಮೊದಲ ನಾಲ್ಕು ಪಂದ್ಯಗಳಲಿ ಮಿಶ್ರ ಅನುಭವ ಪಡೆದುಕೊಂಡಿದ್ದು ಐದನೇ ಪಂದ್ಯದಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿಲು ಸಜ್ಜಾಗಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡದ ಬಗ್ಗೆ ಮಾಜಿ ಕ್ರಿಕೆಟಿಗ ಹಾಘೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಆರ್ಸಿಬಿ ತಂಡದ ಸ್ಪೋಟಕ ಆರಂಭದ ಬಗ್ಗೆ ಗವಾಸ್ಕರ್ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದು ಇದಕ್ಕೆ ವಿರಾಟ್ ಕೊಹ್ಲಿಯೇ ಕಾರಣ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ವಿರಾಟ್ ಕೊಹ್ಲಿ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದು ಆಕ್ರಮಣಕಾರಿಯಾಗು ಆಡುತ್ತಿರುವ ಕಾರಣದಿಂದಾಗಿ ಆರ್ಸಿಬಿ ತಂಡ ದೊಡ್ಡ ಮೊತ್ತವನ್ನು ಗಳಿಸಲು ಸಾಧ್ಯವಾಗುತ್ತಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದು ಈಗಾಗಲೇ ಮೂರು ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ.

"ವಿರಾಟ್ ಕೊಹ್ಲಿ ಆರ್ಸಿಬಿ ತಂಡಕ್ಕೆ ಸ್ಪೋಟಕ ಆರಂಭವನ್ನು ನೀಡುತ್ತಿದ್ದಾರೆ. ಆರ್ಸಿಬಿ ಪಡೆಯುತ್ತಿರುವ ಈ ಅದ್ಭುತ ಆರಂಭದ ಶ್ರೇಯಸ್ಸನ್ನು ವಿರಾಟ್ ಕೊಹ್ಲಿಗೆ ನೀಡಬೇಕು. ಆರ್ಸಿಬಿ ತಂಡ ಉತ್ತಮವಾಗಿ ರನ್ಗಳಿಸಲು ಸಾಧ್ಯವಾಗುತ್ತಿರುವುದು ಅಂಥಾ ಆರಂಭ ದೊರೆಯುವ ಕಾರಣದಿಂದಾಗಿ. ಇದು ಆರ್ಸಿಬಿ ತಂಡಕ್ಕೆ ನಿಜಕ್ಕೂ ಉತ್ತಮವಾದ ಬೆಳವಣಿಗೆ" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕಲ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಸಂವಾದದಲ್ಲಿ ಭಾಗಿಯಾಗಿದ್ದ ಸುನಿಲ್ ಗವಾಸ್ಕರ್ ಈ ಅಭಿಪ್ರಾಯವನ್ನು ಹಂಚಿಕೊಂಡರು. ಇದಕ್ಕೂ ಮುನ್ನ ತವರಿನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ ನಾಟಕೀಯ ರೀತಿಯಲ್ಲಿ ಸೋಲು ಕಂಡಿತ್ತು. ಆದರೆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿದೆ.
ಇನ್ನು ಇದೇ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಬಗ್ಗೆಯೂ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಕಠಿಣ ಪರಿಸ್ಥಿತಿಯಿಂದ ಹೇಗೆ ಹೊರಗೆ ಬರಬೇಕು ಎಂಬುದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಚೆನ್ನಾಗಿ ಗೊತ್ತಿದೆ. ಅದು ಎಂಎಸ್ ಧೋನಿ ನಾಯಕತ್ವದಲ್ಲಿ ಮಾತ್ರ ಸಾಧ್ಯ. 200 ಪಂದ್ಯಗಳಿಗೆ ನಾಯಕನಾಗಿರುವುದು ಸುಲಭ ಸಾಧನೆಯಲ್ಲ"ಎಂದಿದ್ದಾರೆ ಸುನಿಲ್ ಗವಾಸ್ಕರ್.
ಮುಂದುವರಿದು ಮಾತನಾಡಿದ ಅವರು "ಅತಿ ಹೆಚ್ಚಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸುವುದು ಹೊರೆಯಾಗಬಹುದು. ವೈಯಕ್ತಿಕ ಪ್ರದರ್ಶಣದ ಮೇಲೆಯೂ ಅದು ಪರಿಣಾಮ ಬೀರಬಹುದು. ಆದರೆ ಎಂಎಸ್ ಧೋನಿ ವಿಭಿನ್ನ. ಆತನೊಬ್ಬ ಭಿನ್ನವಾದ ನಾಯಕ. ಆತನಂತಾ ನಾಯಕ ಈವರೆಗೆ ಬಂದಿಲ್ಲ, ಮುಂದೆಯೂ ಬರಲು ಅಸಾಧ್ಯ" ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಸುನಿಲ್ ಗವಾಸ್ಕರ್.
ಆರ್ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಜುಖಾಮುಖಿಯಾಗುವುದಕ್ಕೂ ಮುನ್ನ ಈ ಬಾರಿಯ ಆವೃತ್ತಿಯಲ್ಲಿ ಎರಡು ತಂಡಗಳು ಕೂಡ ತಲಾ ನಾಲ್ಕು ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡು ತಂಡಗಳು ಕೂಡ ತಲಾ ಎರಡು ಗೆಲುವು ಸಾಧಿಸಿದ್ದರೆ ಎರಡು ಸೋಲು ಅನುಭವಿಸಿದೆ. ಅಂಕಪಟ್ಟಿಯಲ್ಲಿ ಸಿಎಸ್ಕೆ 6ನೇ ಸ್ಥಾನದಲ್ಲಿದ್ದರೆ ಆರ್ಸಿಬಿ 7ನೇ ಸ್ಥಾನದಲ್ಲಿದೆ.