ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಘಟ್ಟದತ್ತ ಮುಖ ಮಾಡುತ್ತಿದೆ. ಎಲ್ಲಾ ತಂಡಗಳಿಗೂ ಕೊನೆಯ ಹಂತದಲ್ಲಿ ಗೆಲುವು ಬಹಳ ಮಹತ್ವದ್ದಾಗಿದ್ದು ತೀವ್ರ ಪೈಪೊಟಿ ಎದುರಿಸುತ್ತಿದೆ. ಗುರುವಾರ ರಾಜಸ್ತಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದ್ದು ಎರಡು ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಲಿದೆ.
ಈ ಪಂದ್ಯಕ್ಕೂ ಮುನ್ನ ಟ್ರೆಂಟ್ ಬೋಲ್ಟ್ ಪ್ರತಿಕ್ರಿಯೆ ನೀಡಿದ್ದು ಕೆಕೆಆರ್ ದಾಂಡಿಗ ಆಂಟ್ರೆ ರಸೆಲ್ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. "ಕೆಕೆಆರ್ ಅತ್ಯುತ್ತಮ ತಂಡವಾಗಿದ್ದು ಆಂಡ್ರೆ ರಸೆಲ್ ಟಿ20 ಕ್ರಿಕೆಟ್ನ ವಿಧ್ವಂಸಕ ಬ್ಯಾಟರ್. ಅವರನ್ನು ಕೆಲ ಸಂದರ್ಭಗಳಲ್ಲಿ ಔಟ್ ಮಾಡಿದ್ದೇನೆ. ಆದರೆ ಆತನಿಗೆ ಬೌಲಿಂಗ್ ಮಾಡುವುದು ಬಹಳ ಕಷ್ಟ. ಆದರೆ ಕೆಕೆಆರ್ ತಂಡದ ಮತ್ತೋರ್ವ ಆಟಗಾರ ರಿಂಕು ಸೀಂಗ್ ಅವರನ್ನು ನಾವು ಮರೆಯಬಾರದು" ಎಂದಿದ್ದಾರೆ ಟ್ರೆಂಟ್ ಬೋಲ್ಟ್.

ಇನ್ನು ಈಡನ್ ಗಾರ್ಡನ್ನಲ್ಲಿ ನಡೆಯಲಿರುವ ಈ ಪಂದ್ಯ ಎರಡು ತಂಡಗಳಲ್ಲಿರುವ ಬಲಿಷ್ಠ ಸ್ಪಿನ್ನರ್ಗಳ ಕಾದಾಟ ಎಂದು ಬಣ್ಣಿಸಲಾಗುತ್ತಿದೆ. ಕೆಕೆಆರ್ ತಂಡದಲ್ಲಿ ತ್ರಿವಳಿ ಸ್ಪಿನ್ನರ್ಗಳಾದ ವರುಣ್ ಚಕ್ರವರ್ತಿ, ಸುನಿಲ್ ನರೈನ್ ಹಾಗೂ ಸುಯಶ್ ಶರ್ಮಾ ಇದ್ದರೆ ಆರ್ಆರ್ ತಂಡದಲ್ಲಿ ಆರ್ ಅಶ್ವಿನ್, ಆಡಂ ಜಂಪಾ ಮತ್ತು ಯುಜುವೇಂದ್ರ ಚಾಹಲ್ ಇದ್ದಾರೆ. ಹೀಗಾಗಿ ಈ ಪಂದ್ಯ ಕುತೂಜಹಲ ಮೂಡಿಸಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಈವರೆಗೆ ಆಡಿರುವ 11 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿದ್ದು 6 ಸೋಲು ಕಂಡಿದೆ. ಹೀಗಾಗಿ 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ ಆರ್ಆರ್. ಆರಂಭದಲ್ಲಿ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದ ರಾಜಸ್ಥಾನ್ ರಾಯಲ್ಸ್ ಕಳೆದ ಆರು ಪಂದ್ಯಗಳಲ್ಲಿ ಐದು ಸೋಲು ಅನುಭವಿಸಿ ಸಂಕಷ್ಟದಲ್ಲಿದೆ. ಈ ಹಿಂದಿನ ಮೂರು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಹ್ಯಾಟ್ರಿಕ್ ಸೋಲು ಕಂಡಿರುವ ಆರ್ಆರ್ ಸೋಲಿನ ಸುಳಿಯಿಂದ ಹೊರಬರುವ ಪ್ರಯತ್ನದಲ್ಲಿದೆ.
ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಆರ್ಆರ್ ರೀತಿಯಲ್ಲಿಯೇ ಆಡಿರುವ 11 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿರುವ ಕೆಕೆಆರ್ 10 ಅಂಕಗಳನ್ನು ಪಡೆದುಕೊಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಬೃಹತ್ ರನ್ ಬೆನ್ನಟ್ಟಿ ಸಾಧಿಸಿರುವ ಗೆಲುವು ಕೆಕೆಆರ್ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿರುವುದರಲ್ಲಿ ಅನುಮಾನವಿಲ್ಲ.
ಕೊಲ್ಕತ್ತಾ ನೈಟ್ ರೈಡರ್ಸ್: ಜೇಸನ್ ರಾಯ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ರಾಜಸ್ಥಾನ್ ರಾಯಲ್ಸ್ : ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್), ಜೋ ರೂಟ್, ಧ್ರುವ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಾಹಲ್