
ನಿನ್ನೆ ( ಮೇ 1 ) ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 18 ರನ್ಗಳ ಗೆಲುವನ್ನು ಸಾಧಿಸಿತು.
ಹೌದು, ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 127 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿರುವ ಲಕ್ನೋ ಸೂಪರ್ ಜೈಂಟ್ಸ್ 19.5 ಓವರ್ಗಳಲ್ಲಿ 108 ರನ್ಗಳಿಗೆ ಆಲ್ ಔಟ್ ಆಗುವುದರ ಮೂಲಕ 18 ರನ್ಗಳ ಹೀನಾಯ ಸೋಲನ್ನು ಕಂಡಿದೆ.
ಹೀಗೆ ಪಂದ್ಯದಲ್ಲಿ ಸೋತ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಹೌದು, ಪಂದ್ಯ ಮುಗಿದ ನಂತರ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ವಿರುದ್ಧ ಜಗಳ ಮಾಡಲು ನುಗ್ಗಿ ಹೋಗುತ್ತಿದ್ದರು. ಅತ್ತ ವಿರಾಟ್ ಕೊಹ್ಲಿಯೂ ಸಹ ಚರ್ಚೆಯೊಂದರಲ್ಲಿ ಪಾಲ್ಗೊಂಡು ಗೌತಮ್ ಗಂಭೀರ್ ಜತೆ ವಾಕ್ಸಮರಕ್ಕೆ ಇಳಿದಿದ್ದರು.
ಗೌತಮ್ ಗಂಭೀರ್ ಕೊಹ್ಲಿ ವಿರುದ್ಧ ವಾಗ್ದಾಳಿ ನಡೆಸುತ್ತಾ ಜಗಳ ಮಾಡಲು ಎಗರಿ ಬೀಳುತ್ತಿದ್ದದ್ದನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ತಡೆದಿದ್ದರು ಹಾಗೂ ಗಂಭೀರ್ ಅವರನ್ನು ಸಮಾಧಾನಪಡಿಸಲು ಯತ್ನಿಸಿದ್ದರು. ಅತ್ತ ವಿರಾಟ್ ಕೊಹ್ಲಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಸಮಾಧಾನಪಡಿಸಿ ಸ್ಥಳದಿಂದ ಕರೆದೊಯ್ದರು.
ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಸನಿಹದಲ್ಲಿ ನಿಂತು ತೀವ್ರ ವಾಕ್ಸಮರ ನಡೆಸಿದ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಹಾಗೂ ಚರ್ಚೆಗೆ ಕಾರಣವಾಗಿವೆ. ಇನ್ನು ಇಷ್ಟೆಲ್ಲಾ ನಡೆಯಲು ಕಾರಣ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮಾಡಿದ ಸೆಲೆಬ್ರೇಷನ್.
ಹೌದು, ಕೃನಾಲ್ ಪಾಂಡ್ಯ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ ಗೌತಮ್ ಕೀಪ್ ಸೈಲೆನ್ಸ್ ಸೆಲೆಬ್ರೇಷನ್ ಮಾಡಿದ್ದರು. ಆದರೆ "ನಾನು ನಿಮ್ಮನ್ನು ಇಷ್ಟಪಡುತ್ತೇನೆ. ನಿಮ್ಮ ಬಾಯಿಯನ್ನು ಮುಚ್ಚಿಸಲು ನನಗೆ ಇಷ್ಟವಿಲ್ಲ" ಎಂದು ಕೈಸನ್ನೆ ಮಾಡುವ ಮೂಲಕ ವಿರಾಟ್ ಕೊಹ್ಲಿ ಸೇಡನ್ನು ಅರ್ಥಪೂರ್ಣವಾಗಿ ತೀರಿಸಿಕೊಂಡಿದ್ದರು.
ಈ ಮೂಲಕ ಏಪ್ರಿಲ್ 10ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇತ್ತಂಡಗಳು ಮುಖಾಮುಖಿಯಾದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋತ ಬಳಿಕ ಗೌತಮ್ ಗಂಭೀರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳತ್ತ ಶ್... ಎನ್ನುತ್ತ ಮಾಡಿದ್ದ ಸೆಲೆಬ್ರೇಷನ್ಗೆ ಕೊಹ್ಲಿ ಟಾಂಗ್ ನೀಡಿದ್ದರು.
ಹೀಗೆ ತಾನು ಮಾಡಿದ ಸೆಲೆಬ್ರೇಷನ್ಗೆ ಟಕ್ಕರ್ ಕೊಟ್ಟ ಕೊಹ್ಲಿ ನಡೆಯನ್ನು ಸಹಿಸದ ಗಂಭೀರ್ಗೆ ಪಂದ್ಯ ಸೋತ ಅಂಶವೂ ಸಹ ಹಿನ್ನಡೆ ಉಂಟುಮಾಡಿದ್ದು ಇಬ್ಬರ ನಡುವೆ ಜಗಳ ಶುರುವಾಗಲು ಕಾರಣ ಎನ್ನಬಹುದು. ಇನ್ನು ಈ ಇಬ್ಬರು ಮೈದಾನದಲ್ಲಿ ಮಿತಿಮೀರಿ ಜಗಳಕ್ಕೆ ಮುಂದಾಗಿದ್ದು ಇದೇ ಮೊದಲೇನಲ್ಲ, ಈ ಹಿಂದೆ ಗೌತಮ್ ಗಂಭೀರ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದಾಗಲೂ ಸಹ ಇದೇ ರೀತಿ ಮೈದಾನದಲ್ಲಿಯೇ ಕಿತ್ತಾಡಿಕೊಂಡಿದ್ದರು.