
ವಿರಾಟ್ ಕೊಹ್ಲಿ ಭಾರತ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಾಗಿನಿಂದ ಕೊಹ್ಲಿ ಅಭಿಮಾನಿಗಳಲ್ಲಿ ಇದಕ್ಕೆಲ್ಲಾ ಕಾರಣ ಸೌರವ್ ಗಂಗೂಲಿ ಎಂಬ ಅಭಿಪ್ರಾಯ ಮೂಡಿಬಿಟ್ಟಿದೆ. ಹೌದು, ನಾಯಕ ಸ್ಥಾನದಿಂದ ಕೆಳಗಿಳಿದಾಗ ವಿರಾಟ್ ಕೊಹ್ಲಿ ನೀಡಿದ್ದ ಹೇಳಿಕೆಗಳಲ್ಲಿ ತಾನು ನಾಯಕತ್ವ ಕಳೆದುಕೊಳ್ಳುವುದಕ್ಕೆ ಆಗಿನ ಬಿಸಿಸಿಐ ಅಧ್ಯಕ್ಷರಾಗಿದ್ದಂತಹ ಗಂಗೂಲಿಯೇ ಕಾರಣ ಎಂಬ ಅರ್ಥ ಬರುವ ಹಾಗೆ ಮಾತನಾಡಿದ್ದರು.
ಇನ್ನು ಗಂಗೂಲಿ ವಿರಾಟ್ ಕೊಹ್ಲಿಗೆ ನಾಯಕತ್ವ ಬಿಡಬೇಡಿ ಎಂದು ಎಷ್ಟೇ ಕೇಳಿದರೂ ಅವರೇ ಸ್ವತಃ ನಾಯಕತ್ವ ತ್ಯಜಿಸಿದರು ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳಿಂದ ಕೊಹ್ಲಿ ಅಭಿಮಾನಿಗಳು ಗಂಗೂಲಿ ವಿರುದ್ಧ ದ್ವೇಷ ಕಟ್ಟಿಕೊಂಡಿದ್ದರು. ಇನ್ನು ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ದೊಡ್ಡ ಸುದ್ದಿಗಳು ಹರಿದಾಡಿದವು.
ಟೀಮ್ ಇಂಡಿಯಾದೊಳಗಿನ ಈ ಮುನಿಸು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಯೂ ಮುಂದುವರಿದಿತ್ತು. ಹೌದು, ಏಪ್ರಿಲ್ 15ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡೆದುಕೊಂಡ ರೀತಿ ಕೊಹ್ಲಿ ಹಾಗೂ ಗಂಗೂಲಿ ನಡುವೆ ದ್ವೇಷವಿದೆ ಎಂಬ ಅಭಿಪ್ರಾಯವನ್ನು ಮೂಡಿಸಿತ್ತು.
ಹೌದು, ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುವ ವೇಳೆ ಡಗ್ಔಟ್ನಲ್ಲಿ ಕುಳಿತಿದ್ದ ಸೌರವ್ ಗಂಗೂಲಿಯನ್ನು ಗುರಾಯಿಸಿ ನೋಡಿದ್ದರು. ಅಲ್ಲದೇ ತನ್ನ ಮುಂದೆಯೇ ಗಂಗೂಲಿ ಹೋಗುತ್ತಿದ್ದರೂ ಕಾಲಿನ ಮೇಲೆ ಕಾಲು ಹಾಕಿ ಕುಳಿತಿದ್ದ ವಿರಾಟ್ ಕೊಹ್ಲಿ ಗಂಗೂಲಿಯನ್ನು ಮಾತನಾಡಿಸದೇ ಇದ್ದರು.
ಇನ್ನು ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ಎದುರು ಬದರಾದರೂ ಸಹ ಕೈಕುಲುಕದೇ ನಡೆದಿದ್ದರು. ಈ ಎಲ್ಲಾ ಘಟನೆಗಳು ಇಬ್ಬರ ನಡುವೆ ಎಲ್ಲವೂ ಖಂಡಿತ ಸರಿ ಇಲ್ಲ ಎಂಬ ಅಭಿಪ್ರಾಯವನ್ನು ಮೂಡಿಸಿತ್ತು. ಆ ಪಂದ್ಯ ಮುಗಿದ ಬಳಿಕ ಗಂಗೂಲಿ ಹಾಗೂ ಕೊಹ್ಲಿ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ವಾರ್ ಸಹ ನಡೆದಿತ್ತು.
ಹೀಗೆ ತಮ್ಮಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ, ವೈಮನಸ್ಸು ಇದೆ ಎಂದು ಹಲವಾರು ದಿನಗಳಿಂದ ಸುದ್ದಿಗಳು ಹರಿದಾಡುತ್ತಿದ್ದರೂ ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದ ಕೊಹ್ಲಿ ಹಾಗೂ ಗಂಗೂಲಿ ನಿನ್ನೆ ( ಮೇ 6 ) ನಡೆದ ಪಂದ್ಯದ ಬಳಿಕ ನಡೆದುಕೊಂಡ ರೀತಿ ಇದ್ದ ಎಲ್ಲಾ ಸುದ್ದಿಗಳನ್ನು ಹಾಗೂ ಅನುಮಾನಗಳನ್ನು ಬದಿಗೆ ಸರಿಸಿದೆ.
ಹೌದು, ನಿನ್ನೆಯ ಪಂದ್ಯ ಮುಗಿದ ಬಳಿಕ ಮೈದಾನದಲ್ಲಿ ಮುಖಾಮುಖಿಯಾದ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಗುತ್ತಾ ಮಾತನಾಡಿದ್ದಾರೆ. ಅಲ್ಲದೇ ಇಬ್ಬರೂ ಹ್ಯಾಂಡ್ ಶೇಕ್ ಮಾಡಿ ಒಬ್ಬರ ಬೆನ್ನನ್ನು ಮತ್ತೊಬ್ಬರು ತಟ್ಟಿದ್ದಾರೆ. ಈ ವಿಡಿಯೊ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ವಿಡಿಯೊವನ್ನು ಕಂಡ ಇಬ್ಬರ ಅಭಿಮಾನಿಗಳೂ ಸೇರಿದಂತೆ ಕ್ರಿಕೆಟ್ ಪ್ರಿಯರು ಆಶ್ಚರ್ಯಕ್ಕೊಳಗಾಗಿದ್ದಾರೆ.
ಹೀಗೆ ಪರಸ್ಪರ ಚೆನ್ನಾಗಿ ಮಾತನಾಡುವ ಮೂಲಕ ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂಬುದನ್ನು ತಿಳಿಸಿರುವ ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ಹಲವು ದಿನಗಳಿಂದ ಇದ್ದ ವಿವಾದಕ್ಕೆ ತೆರೆ ಎಳೆದಿದ್ದಾರೆ. ಇನ್ನು ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನ್ನು ಅನುಭವಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 182 ರನ್ಗಳ ಗುರಿಯನ್ನು ಬೆನ್ನತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ 16.4 ಓವರ್ಗಳಲ್ಲಿಯೇ 3 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.